ಕುಸಿಯುವ ಭೀತಿಯಲ್ಲಿ ಸಂಪರ್ಕ ಸೇತುವೆ
Team Udayavani, Jan 17, 2019, 4:46 AM IST
ನರಿಮೊಗರು : ನರಿಮೊಗರು ಗ್ರಾಮದ ಅರಿಪ್ಪೆಕಟ್ಟ- ಕುಕ್ಕುತ್ತಡಿ ಸಂಪರ್ಕ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಭೀತಿಯಲ್ಲಿದೆ. 1958ರಲ್ಲಿ ನಿರ್ಮಾಣಗೊಂಡ ಈ ಸೇತುವೆಯಲ್ಲಿ ಸಂಚರಿಸಲು ಆತಂಕವಾಗುತ್ತಿದೆ.
ಪುತ್ತೂರು-ಸವಣೂರು ಮುಖ್ಯರಸ್ತೆಯ ಗಡಿಪಿಲದಿಂದ ಅರಿಪ್ಪೆಕಟ್ಟೆಗೆ 2 ಕಿ.ಮೀ. ದೂರಲ್ಲಿರುವ ಈ ಕಾಲು ಸೇತುವೆಯಿಂದ ಕುಮಾರಧಾರಾ ಹೊಳೆಗೆ ಕೇವಲ 2 ಕಿ.ಮೀ. ದೂರವಿದೆ. ಹೀಗಾಗಿ ಕುಮಾರಧಾರಾ ಹೊಳೆಗೆ ಸಂಪರ್ಕಿಸಲು ಈ ಸೇತುವೆಯನ್ನೇ ಅವಲಂಬಿಸಬೇಕಾಗಿದೆ.
ಅವಭೃಥ ಸ್ನಾನಕ್ಕೆ ಇದೇ ಹಾದಿ:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನಕ್ಕೆ ಈ ಕಾಲು ಸೇತುವೆಯ ಮೂಲಕವೇ ಮೆರವಣಿಗೆಯಲ್ಲಿ ಸಾಗು ತ್ತಾರೆ. ಕುಕ್ಕುತ್ತಡಿ ಪರಿಸರದಲ್ಲಿ ಹತ್ತಾರು ಮನೆಗಳಿದ್ದು, ಸೇತುವೆ ಶಿಥಿಲಗೊಂಡ ಕಾರಣ ಜನರು ಆತಂಕದಲ್ಲಿದ್ದಾರೆ. ವೀರ ಮಂಗಲ ಶಾಲೆಗೆ ವಿದ್ಯಾರ್ಥಿಗಳು, ಸಾರ್ವ ಜನಿಕರು ಬೇರೆ ದಾರಿಯಿಲ್ಲದೇ ಇದೇ ದಾರಿಯನ್ನು ಅವಲಂಬಿಸಿದ್ದು, ಈ ಸೇತುವೆ ಮೂಲಕ ಭೀತಿಯಿಂದಲೇ ದಿನಂಪ್ರತಿ ಸಾಗುವುದು ಅನಿವಾರ್ಯ ವಾಗಿದೆ. ಸೇತುವೆಯ ಪಿಲ್ಲರ್, ತಡೆಗೋಡೆ, ಸ್ಲಾ ್ಯಬ್ ಹಾನಿಗೊಂಡು ಅಪಾಯಕರ ಸ್ಥಿತಿ ಯಲ್ಲಿದ್ದರೂ ಕ್ರಮಕ್ಕೆ ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆಯ ಗಂಭೀರತೆಯನ್ನು ಮನಗಂಡು ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ತತ್ಕ್ಷಣವೇ ಸ್ಪಂದಿಸಿ ಕುಸಿದು ಬೀಳುವ ಮುನ್ನ ಗಮನಹರಿಸಿ ಮುಂದೆ ಸಂಭವಿಸಬಹುದಾದ ದುರಂತವನ್ನು ತಪ್ಪಿಸುವುದು ಅತೀ ಅಗತ್ಯ. ಇನ್ನಾದರೂ ಈ ಕುರಿತು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುತುವರ್ಜಿ ವಹಿಸಲಿ
ಕುಸಿಯುವ ಭೀತಿಯಲ್ಲಿರುವ ಸೇತುವೆ ಕುರಿತು ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿ, ಅವರ ಗಮನ ಸೆಳೆದಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಈ ಕುರಿತು ಶಾಸಕರು, ಜಿ.ಪಂ. ಅಧ್ಯಕ್ಷರು ಮುುತುವರ್ಜಿ ವಹಿಸಿ ಕಾರ್ಯೋನ್ಮುಖರಾಗಬೇಕು.
-ಬಾಬು ಶೆಟ್ಟಿ,
ನರಿಮೊಗರು ಗ್ರಾ.ಪಂ. ಸದಸ್ಯರು
ಮನವಿಗೆ ಸ್ಪಂದನೆಯಿಲ್ಲ
ಸೇತುವೆ ಶಿಥಿಲಾವಸ್ಥೆಯಲ್ಲಿರುವ ಕುರಿತಂತೆ ಪುತ್ತೂರು ಶಾಸಕರು, ಜಿಲ್ಲಾ ಪಂ.ಎಂಜಿನಿ ಯರಿಂಗ್ ವಿಭಾಗಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸೇತುವೆಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರಸ್ತುತ ಜಿ.ಪಂ. ಅಧ್ಯಕ್ಷರ ಕ್ಷೇತ್ರದಲ್ಲಿರುವ ಕುಕ್ಕುತ್ತಡಿ ಯಲ್ಲಿ ಹೊಸ ಸೇತುವೆ ನಿರ್ಮಾಣವಾಗಬೇಕಾಗಿದೆ.
ಸೇತುವೆ ನಿರ್ಮಾಣಕ್ಕೆ ಸರ್ವ ಪ್ರಯತ್ನ
ಕುಕ್ಕುತ್ತಡಿಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವ ಕುರಿತಂತೆ ಈ ಹಿಂದೆ ರಾಜ್ಯ ಸರಕಾರಕ್ಕೆ 30 ಲಕ್ಷ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರಕಿಲ್ಲ. ಈ ಬಾರಿ ಎಂಆರ್ಪಿಎಲ್ಗೂ ತಮ್ಮ ಸಮಾಜ ಸೇವಾ ನಿಧಿಯಿಂದ ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದೆ. ಎಂಆರ್ಪಿಎಲ್ಎಂಜಿನಿಯರ್ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಈ ಅನುದಾನದಲ್ಲಾದರೂ ಸೇತುವೆ ನಿರ್ಮಾಣವಾಗಲಿದೆ ಎನ್ನುವ ಆಶಾಭಾವನೆ ಇದೆ. ಒಟ್ಟಿನಲ್ಲಿ ಕುಕ್ಕುತ್ತಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.
-ಮೀನಾಕ್ಷಿ ಶಾಂತಿಗೋಡು,
ಜಿ.ಪಂ. ಅಧ್ಯಕ್ಷರು
ಪ್ರವೀಣ್ ಚೆನ್ನಾವರ