ಅಡಿಕೆ ಕೊಳೆರೋಗಪರಿಹಾರಕ್ಕೆ ಕ್ಯಾಬಿನೆಟ್ನಲ್ಲಿ ಪ್ರಸ್ತಾವ: ದೇಶಪಾಂಡೆ
Team Udayavani, Aug 20, 2018, 12:29 PM IST
ಪುತ್ತೂರು : ಮಡಿಕೇರಿ, ಸಂಪಾಜೆ ನೆರೆಪೀಡಿತ ಪ್ರದೇಶಗಳಿಗೆ ರವಿವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಸಂಜೆ ಪುತ್ತೂರಿನ ಪ್ರವಾಸಿಬಂಗಲೆಗೆ ಆಗಮಿಸಿ ಅಧಿಕಾರಿಗಳು, ಪ್ರಮುಖರ ಜತೆ ಚರ್ಚೆ ನಡೆಸಿದರು. ಅಡಿಕೆ ಕೊಳೆರೋಗ, ಕೃಷಿ ನಾಶ, ಮನೆ ಹಾನಿಗೆ ತತ್ಕ್ಷಣ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಹಾಗೂ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಅಡಿಕೆ ಕೊಳರೋಗಕ್ಕೆ ಈ ಹಿಂದೆ ನೀಡಿದಂತೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ಯಾಬಿನೆಟ್ನಲ್ಲಿ ಪ್ರಸ್ತಾವಿಸುವುದಾಗಿ ಹೇಳಿದರು.
ಮಾನವೀಯವಾಗಿ ನೋಡಿ
ವ್ಯಾಪಕ ಮಳೆಯಿಂದ ಕೃಷಿ ಹಾನಿ, ಮನೆಗಳಿಗೆ ಹಾನಿ, ಧರೆ ಕುಸಿತದಿಂದ ನಷ್ಟ ಸಂಭವಿಸಿದವರಿಗೆ ಕಾನೂನನ್ನು ನೋಡದೆ ಮಾನವೀಯ ನೆಲೆಯಲ್ಲಿ ಗಮನ ಹರಿಸಿ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಅಸಹಾಯಕರು, ಬಡವವರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಬೇಕು ಎಂದರು.
ಸತಾಯಿಸಬೇಡಿ
ಸರಕಾರಿ ಜಾರಿಗೆ ತಂದಿರುವ 94ಸಿ ಹಾಗೂ 94ಸಿಸಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದವರಿಗೆ ಸತಾಯಿಸುವುದು ಬೇಡ. ಹೊಸ ಮನೆ ಕಟ್ಟಿದ್ದಾರೆ ಎಂದು ತೊಂದರೆ ಕೊಡಬೇಡಿ. ಫಲಾನುಭವಿಗಳಿಗೆ ಹಕ್ಕುಪತ್ರದ ಜತೆಗೆ ಖಾತೆಯನ್ನೂ ನೀಡಲು ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ಗೆ ಸಚಿವ ಆರ್.ವಿ. ದೇಶಪಾಂಡೆ ಸೂಚನೆ ನೀಡಿದರು.