ಕೃಷಿ ನಾಶ, ಮಣ್ಣು ಕುಸಿತಕ್ಕೆ ಪರಿಹಾರಕ್ಕೆ ಮನವಿ
Team Udayavani, Aug 20, 2018, 12:51 PM IST
ಪುತ್ತೂರು: ಕೃಷಿ ನಾಶ, ಮಣ್ಣು ಕುಸಿತದಂತಹ ಮಳೆಹಾನಿಗಳಿಗೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಮಾಡಿದ್ದಾರೆ. ಆ. 11 ರಂದು ಸಚಿವರಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದ ಶಾಸಕರು, ರವಿವಾರ ನೆರೆ ವೀಕ್ಷಣೆಗೆ ಆಗಮಿಸಿದ ವೇಳೆ ಮತ್ತೊಮ್ಮೆ ಮನವಿ ನೀಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಹುಪಾಲು ಅಡಿಕೆ ಕೃಷಿಕರಿದ್ದು, ತಮ್ಮ ಕುಟುಂಬ ನಿರ್ವಹಣೆಗೆ ಅದನ್ನೇ ನೆಚ್ಚಿಕೊಂಡಿದ್ದಾರೆ. ಈಗ ಅತಿ ವೃಷ್ಟಿಯಿಂದಾಗಿ ತೀವ್ರ ಕೊಳೆ ರೋಗ ಬಾಧಿಸಿದೆ. ಸಂಪೂರ್ಣ ಕೃಷಿ ನಾಶವಾಗಿದೆ. ಕುಟುಂಬಗಳು ಜೀವನ ನಿರ್ವಹಣೆಗೆ ಕಷ್ಟ ಪಡುವಂತಾಗಿದೆ. ಈಗಾಗಲೇ ಶೇ. 120ಕ್ಕೂ ಹೆಚ್ಚು ಮಳೆ ಬಿದ್ದು ಅಡಿಕೆಗೆ ಕೊಳೆ ರೋಗ ಬಾಧಿಸಿ, ಅದು ನಿಯಂತ್ರಣಕ್ಕೆ ಬಾರದೆ ರೈತರು ಕಂಗಾಲಾಗಿದ್ದಾರೆ. ಸರಕಾರ ತತ್ಕ್ಷಣ ಮಧ್ಯ ಪ್ರವೇಶಿಸಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಮೂಲಕ ಪರಿಶೀಲನೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಧನವನ್ನು ಒದಗಿಸಿಕೊಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ಹಲವಾರು ಮನೆಗಳಿಗೆ ಹಾನಿ ಹಾಗೂ ಧರೆ ಕುಸಿತ ಆಗಿದೆ. ಮಣ್ಣು ಕುಸಿತದಿಂದಾಗಿ ಕೃಷಿ ನಾಶವಾಗಿದೆ. ಮನೆಯ ಸುತ್ತಮುತ್ತ ಭೂ ಕುಸಿತದಿಂದಾಗಿ ಭಯದ ವಾತಾವರಣದಲ್ಲಿ ದಿನ ಕಳೆಯವಂತಾಗಿದೆ. ಸರಕಾರ ಸಂತ್ರಸ್ತರಿಗೆ ಮಣ್ಣು ತೆರವುಗೊಳಿಸಲು ಹಾಗೂ ಕೃಷಿ ನಾಶಕ್ಕೆ ಪರಿಹಾರ ನೀಡಬೇಕು ಎಂದು ವಿನಂತಿಸಿದ್ದಾರೆ. ದ.ಕ. ಉಸ್ತುವಾರಿ ಸಚಿವ ಯು.ಟಿ. ಖಾದರ್, ಐವನ್ ಡಿ’ಸೋಜಾ, ಶಕುಂತಳಾ ಶೆಟ್ಟಿ ಮೊದಲಾದವರಿದ್ದರು.