ದುರ್ಬಲ ವರ್ಗಗಳ ಏಳಿಗೆಗೆ ಶ್ರಮಿಸಿ: ಡಾ| ಶಾನುಭಾಗ್
Team Udayavani, Aug 20, 2018, 1:01 PM IST
ಮೂಡಬಿದಿರೆ : ಸಮಸ್ಯೆಗಳು ಬಂದಾಗ ದೂಷಣೆ ಮಾಡುವ ಮೊದಲು, ತನ್ನಿಂದ ಹೇಗೆ ಪರಿಹಾರ ಸಾಧ್ಯ ಎಂದು ಯೋಚಿಸಬೇಕು ಎಂದು ಉಡುಪಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶಾನುಭಾಗ್ ತಿಳಿಸಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾನವ ಹಕ್ಕುಗಳ ವೇದಿಕೆ ಮತ್ತು ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ‘ದೈನಂದಿನ ದಿನಗಳಲ್ಲಿ ಮಾನವ ಹಕ್ಕು’ ಎಂಬ ವಿಷಯದ ಕುರಿತು ಮಾತನಾಡಿದರು.
ಆಳ್ವಾಸ್ ಕಲಾ ನಿಖಾಯದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್. ಅಧ್ಯಕ್ಷತೆ ವಹಿಸಿ, ಇಂದಿನ ಯುವ ಜನತೆ ಸಕ್ರಿಯವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ, ದೇಶದ ಶಕ್ತಿಯಾಗಿ ಮಾರ್ಪಾಡುಗೊಳ್ಳಬೇಕು ಎಂದರು. ಕಾಲೇಜಿನ ರಾಜಕೀಯ ಶಾಸ್ತ್ರದ ಮುಖ್ಯಸ್ಥ ರಮೇಶ್ ಬಿ., ಮಾನವ ಹಕ್ಕು ವೇದಿಕೆಯ ಸಂಯೋಜಕರಾದ ನಾಗರಾಜ್ ಮತ್ತು ಜಯಶ್ರೀ, ಪವಿತ್ರಾ ತೇಜ್ ಉಪಸ್ಥಿತರಿದ್ದರು. ಸ್ಪಂದನ್ ರೈ ಸ್ವಾಗತಿಸಿ, ಸುಮಯಾ ನಿರೂಪಿಸಿದರು.
ಟೀಕಿಸುವ ಮನೋಭಾವವನ್ನು ದೂರ ತಲ್ಲಿ
ಇನ್ನೊಬ್ಬರನ್ನು ಟೀಕಿಸುವ, ಸಮಸ್ಯೆಯನ್ನು ಉಲ್ಬಣಗೊಳಿಸುವ, ಇನ್ನೊಬ್ಬರ ಕಷ್ಟ ತನಗೆ ಸಂಬಂಧವೇ ಇಲ್ಲ ಎನ್ನುವ ಮನೋಭಾವ ನಮ್ಮೆಲ್ಲ ಸಮಸ್ಯೆಗೆ ಮೂಲಕಾರಣವಾಗಿದೆ. ಪ್ರತಿಯೊಬ್ಬ ಪ್ರಜೆ, ಅಧಿಕಾರಿ, ರಾಜಕೀಯ ಧುರೀಣ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದರೆ ಗೊಂದಲಗಳಿಗೆ ಅವಕಾಶವೇ ಇಲ್ಲ.
-ಡಾ| ರವೀಂದ್ರನಾಥ ಶಾನುಭಾಗ್
ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ