ಕೆಮ್ರಾಲ್ ಗ್ರಾ. ಪಂ. ಕಸ ತ್ಯಾಜ್ಯ ಸಮಸ್ಯೆ
Team Udayavani, Apr 26, 2018, 10:00 AM IST
ಕಿನ್ನಿಗೋಳಿ: ಕಿನ್ನಿಗೋಳಿ -ಮೂಲ್ಕಿ ರಾಜ್ಯ ಹೆದ್ದಾರಿಯ ರಾಜಾಂಗಣದ ಮುಂದಿನ ಭಾಗದಲ್ಲಿ ರಸ್ತೆಯ ಉದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ, ಪೊಟ್ಟಣಗಳ ರಾಶಿ ಕಂಡು ಬರುತ್ತಿದ್ದು ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿದೆ.
ಇಲ್ಲಿನ ಒಂದು ಪ್ರದೇಶ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಗೆ ಸೇರುತ್ತದೆ. ಎದುರು ಭಾಗ ಕಿನ್ನಿಗೋಳಿ ಗ್ರಾ.ಪಂ. ವ್ಯಾಪ್ತಿಗೆ ಸೇರುತ್ತಿದೆ. ಆದರೆ ಕಸ ಪ್ಲಾಸ್ಟಿಕ್ ತ್ಯಾಜ್ಯಗಳು ಮಾತ್ರ ಕೆಮ್ರಾಲ್ ಪಂಚಾಯತ್ ಸ್ಥಳದಲ್ಲಿಯೇ ಬಿಸಾಡುತ್ತಿದ್ದು, ಪಂಚಾಯತ್ಗೆ ಸಮಸ್ಯೆಯಾಗಿ ಕಾಡುತ್ತಿದೆ. ಎದುರು ಭಾಗದಲ್ಲಿ ಬಹುಮಹಡಿಯ ಕಟ್ಟಡಗಳಿದ್ದು ಅಲ್ಲಿನ ಕಸಗಳು ಈ ಪ್ರದೇಶದಲ್ಲಿ ಬಿಸಾಡುತ್ತಿದ್ದಾರೆ ಎಂದು ಕೆಮ್ರಾಲ್ ಗ್ರಾ. ಪಂ.ಮೂಲ ತಿಳಿಸಿದೆ. ಕೆಲವು ವರ್ಷಗಳ ಹಿಂದೆ ಇದೇ ಸಮಸ್ಯೆಗೆ ಕೆಮ್ರಾಲ್ ಗ್ರಾ.ಪಂ.ನಲ್ಲಿ ಕಸ ತ್ಯಾಜ್ಯ ಬಿಸಾಡಬಾರದು ಎಂಬ ನಾಮ ಫಲಕ ಅಳವಡಿಸಲಾಗಿತ್ತು. ಕೆಲವು ಸಮಯ ಇಂತಹ ಸಮಸ್ಯೆ ಇರಲಿಲ್ಲ. ಆದರೆ ಈಗ ಮತ್ತೆ ತ್ಯಾಜ್ಯ ಬಿಸಾಡುವ ಸಮಸ್ಯೆ ಉಂಟಾಗಿದೆ.
ಸೊಳ್ಳೆಗಳ ಉಪಟಳ
ಮೊನ್ನೆ ಕೆಲವು ದಿನ ಮಳೆ ಬಂದುದರಿಂದ ಕೆಲವು ಕಸ ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿದೆ. ಈಗಾಗಲೇ ಸೊಳ್ಳೆಗಳ ಉಪಟಳ ಪ್ರಾರಂಭವಾಗಿದೆ. ಇದು ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗಬಹುದು ಎಂದು ನಾಗರಿಕರು ತಿಳಿಸಿದ್ದಾರೆ.
ಸೂಕ್ತ ಕ್ರಮ
ಕಿನ್ನಿಗೋಳಿಯ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಪರಿಸರದಲ್ಲಿ ಗಡಿಭಾಗವಿದ್ದು ಕಸ ಬಿಸಾಡುವ, ತ್ಯಾಜ್ಯ ತಂದು ಸುರಿಯುವ ಪರಿಪಾಠ ಕೆಲವು ಸಮಯದಿಂದ ನಡೆಯುತ್ತಿದೆ. ಆ ಪ್ರದೇಶದಲ್ಲಿ ನಾಮ ಫಲಕ ಹಾಕಿದ್ದರೂ ಇನ್ನೂ ಕಸ, ತ್ಯಾಜ್ಯ ಬಿಸಾಡುವ ಕ್ರಮ ಮುಂದುವರಿದೆ. ಈ ಬಗ್ಗೆ ಸೂಕ್ತ ಕ್ರಮ
ಕೈಗೊಳ್ಳಲಾಗುವುದು.
–ರಮೇಶ್ ರಾಥೋಡ್
ಪಿಡಿಒ ಕೆಮ್ರಾಲ್ ಗ್ರಾ.ಪಂ.