‘ಬೇಡಿಕೆ ಇದ್ದಲ್ಲಿ ಅಂಗನವಾಡಿಯಲ್ಲೂ ಆಧಾರ್ ನೋಂದಣಿ’
Team Udayavani, Jul 11, 2017, 2:20 AM IST
ಹಳೆಯಂಗಡಿ: ಬೇಡಿಕೆ ಇದ್ದಲ್ಲಿ ಆಧಾರ್ ನೋಂದಣಿಯನ್ನು ಅಂಗನವಾಡಿ ಕೇಂದ್ರದಲ್ಲಿಯೂ ಮಾಡಲಾಗುವುದು ಎಂದು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಾಧುರಿ ತಿಳಿಸಿದರು. ಹಳೆಯಂಗಡಿ ಗ್ರಾಮ ಪಂಚಾಯತ್ನ ಪಾವಂಜೆ, ಸಸಿಹಿತ್ಲು ಮತ್ತು ಹಳೆಯಂಗಡಿ ಗ್ರಾಮ ವ್ಯಾಪ್ತಿಯ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದ ಕಾರ್ಯಕರ್ತರು, ಸಹಾಯಕಿ ಯರಿಗೂ ಕೆಲವೊಮ್ಮೆ ಗ್ರಾ.ಪಂ. ಸೂಚಿಸಿದ ಕೆಲಸಗಳನ್ನು ನಿರ್ವಹಿಸುವುದು ಅನಿವಾರ್ಯ ವಾಗುತ್ತದೆ. ಕೌಶಲ ಯೋಜನೆಯಲ್ಲಿ ನೇರವಾಗಿ ಗ್ರಾ.ಪಂ. ಮೂಲಕ ಆನ್ಲೈನ್ನಲ್ಲಿ ನೋಂದಣಿ ಮಾಡಲು ಸಾಧ್ಯವಿದೆ. ಇದಕ್ಕೆ ಕಾರ್ಯಕರ್ತರು ನೆರವು ನೀಡುತ್ತಾರೆ ಎಂದರು.
ಮಲೇರಿಯಾ ನಿಯಂತ್ರಣ
ಮೂಲ್ಕಿ ವ್ಯಾಪ್ತಿಯ ಕೆ.ಎಸ್. ರಾವ್ ನಗರದಲ್ಲಿ ಮಲೇರಿಯಾ ತೀವ್ರವಾಗಿರುವುದರಿಂದ ಹೆಚ್ಚಿನ ಸಿಬಂದಿ ಹಾಗೂ ಆರೋಗ್ಯ ಸಹಾಯಕಿಯರಿಗೆ ರಜೆ ಇದ್ದರೂ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಳೆಯಂಗಡಿ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೂ ಶುಚಿತ್ವಕ್ಕೆ ವಿಶೇಷ ಆದ್ಯತೆ ನೀಡಿ ಆರೋ ಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಕೆಮ್ರಾಲ್ ಆರೋಗ್ಯ ಕೇಂದ್ರದ ಚಂದ್ರಪ್ರಭಾ ಹೇಳಿದರು.
ವಿವಿಧ ಸಮಸ್ಯೆ
ಸಸಿಹಿತ್ಲಿನ ಒಣಮೀನು ನಿರ್ವಹಣೆಗೆ ವೆಚ್ಚ ಎಷ್ಟು, ಮಂಗಳೂರಿನಿಂದ ಎನ್ಐಟಿಕೆಯವರೆಗೆ ಬರುವ ಸರಕಾರಿ ಬಸ್ಸು ಹಳೆಯಂಗಡಿ ಮೂಲಕ ಕಟೀಲಿನತ್ತ ತೆರಳಲು ನಿರ್ಣಯಿಸಲು ಆಗ್ರಹ, ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಗೆ ಗ್ರಾಮಸ್ಥರ ಆಕ್ಷೇಪ, ಸಸಿಹಿತ್ಲಿನಲ್ಲಿ ಹೂಳೆತ್ತಲು ಅನುಮತಿ ಪಡೆದು ಅಕ್ರಮ ಮರಳುಗಾರಿಕೆ, ಪೊಲೀಸ್ ಇಲಾಖೆಯ ಬೀಟ್ ಬಗ್ಗೆ ಮಾಹಿತಿ ಇಲ್ಲ, ಅಲ್ಪಸಂಖ್ಯಾಕ, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಯ ಅಧಿಕಾರಿಗಳಿಂದ ಸ್ಪಷ್ಟವಾಗಿ ಮಾಹಿತಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರಾದ ನಂದಾ ಪಾಯಸ್, ಸುಭಾಸ್, ನಿತೇಶ್, ಚಂದ್ರಶೇಖರ್, ಗೀತಾ, ರತ್ನಾ ಮತ್ತಿತರರು ದೂರಿದರು.
ಜಿ.ಪಂ. ಅನುದಾನ
ಜಿ.ಪಂ. ಸದಸ್ಯ ವಿನೋದ್ಕುಮಾರ್ ಬೊಳ್ಳೂರು ಮಾತನಾಡಿ, ಪಾವಂಜೆ ರಸ್ತೆಗೆ 4 ಲಕ್ಷ ರೂ. ಗುಂಡಿ ರಸ್ತೆಗೆ ಮುಂದುವರಿದ ಕಾಮಗಾರಿಯಾಗಿ ಒಂದು ಲಕ್ಷ ರೂ., ಕೊಳುವೈಲು ಚರಂಡಿಗೆ 50 ಸಾವಿರ ರೂ., ಪಡುಹಿತ್ಲು ಕಾಲುಸಂಕ 50 ಸಾವಿರ ರೂ., ಸಸಿಹಿತ್ಲು ಕಿಂಡಿಅಣೆಕಟ್ಟಿಗೆ 3 ಲಕ್ಷ ರೂ., ಸಸಿಹಿತ್ಲು ಬಾಲಕೃಷ್ಣ ಅವರ ಅಂಗಡಿ ದುರಸ್ತಿಗೆ 30 ಸಾವಿರ ರೂ., ರುದ್ರಭೂಮಿಗೆ 50 ಸಾವಿರ ರೂ.ಗಳ ಅನುದಾನವನ್ನು ಪ್ರಸ್ತುತ ವರ್ಷದಲ್ಲಿ ವಿನಿಯೋಗಿಸಲಾಗುವುದು ಎಂದರು.
ತಾ.ಪಂ. ಅನುದಾನ
ತಾ.ಪಂ. ಸದಸ್ಯ ಜೀವನ್ಪ್ರಕಾಶ್ ಕಾಮೆರೊಟ್ಟು ಮಾತನಾಡಿ, ಸಸಿಹಿತ್ಲು ಮುಂಡ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಸಾರ್ವಜನಿಕ ಬಾವಿಯ ದುರಸ್ತಿ, ಕೊಳುವೈಲು ರಸ್ತೆ ಅಭಿವೃದ್ಧಿ, ಇಂದಿರಾನಗರದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅನುದಾನ ವಿನಿಯೋಗ, ಕೋರªಬ್ಬು ದೈವಸ್ಥಾನಕ್ಕೆ, ಪಾವಂಜೆ ಹರಿಭಟ್ ರಸ್ತೆಗೆ, ಸಾಗ್- ಕೆಲಸಿಬೆಟ್ಟು ರಸ್ತೆಗೆ ಇಂಟರ್ಲಾಕ್ ಅಳವಡಿಕೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿಯಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯಶೋಧರ್ ಜೆ. ಅವರು ಸಭೆಯ ಕಾರ್ಯ ಕಲಾಪ ನಡೆಸಿಕೊಟ್ಟರು. ಪಂಚಾಯತ್ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್. ಹಮೀದ್, ಅಬ್ದುಲ್ ಬಶೀರ್, ಎಚ್. ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಝೀಝ್, ವಿನೋದ್ ಕುಮಾರ್, ಸುಕೇಶ್, ಸುಗಂಧಿ, ಶರ್ಮಿಳಾ ಎನ್. ಕೋಟ್ಯಾನ್, ಅಶೋಕ್ ಬಂಗೇರ, ಚಿತ್ರಾ ಸುಕೇಶ್, ಗುಣವತಿ, ಮಾಲತಿ ಡಿ. ಕೋಟ್ಯಾನ್, ಎಂಜಿನಿಯರ್ ಪ್ರಶಾಂತ್ ಆಳ್ವ, ಅರಣ್ಯ ಇಲಾಖೆಯ ಎಂ.ಬಿ. ಶೇಷಪ್ಪ ಉಪಸ್ಥಿತರಿದ್ದರು. ಪಿಡಿ ಒ ಅಬೂಬಕ್ಕರ್ ಸ್ವಾಗತಿಸಿ, ಕಾರ್ಯದರ್ಶಿ ಕೇಶವ ದೇವಾಡಿಗ ವಂದಿಸಿದರು.