ಮಳೆ: ಹಲವೆಡೆ ಕೃತಕ ನೆರೆ, ಸಂಚಾರ ಅಸ್ತವ್ಯಸ್ತ
Team Udayavani, Jun 29, 2018, 10:14 AM IST
ಮಹಾನಗರ: ಕಳೆದೆರಡು ದಿನ ಸುರಿದ ಧಾರಾಕಾರ ಮಳೆಗೆ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಹಲವೆಡೆ ಹಾನಿ ಸಂಭವಿಸಿದೆ. ಕಟೀಲು, ಕಿನ್ನಿಗೋಳಿ, ಮೂಡಬಿದಿರೆ ಮೂಲ್ಕಿ, ಹಳೆಯಂಗಡಿ, ಚೇಳಾಯಿರು, ಉಳ್ಳಾಲ, ವ್ಯಾಪ್ತಿಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.
ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆಯಾಗಿ ಸಂಪರ್ಕ ಕಳೆದುಕೊಂಡಿದೆ. ಕೆಲವು ಮನೆಗಳು ಜಲಾವೃತಗೊಂಡಿದೆ. ಮೂಡಬಿದಿರೆ ವ್ಯಾಪ್ತಿಯ ಕೆಲವೆಡೆ ಕೃತಕ ನೆರೆ ಉಂಟಾಗಿದೆ. ಹಂಡೇಲ್ನಲ್ಲಿ ಗುಡ್ಡ ಕುಸಿದು ನಿರ್ಮಾಣ ಹಂತದಲ್ಲಿರುವ ಮನೆಯೊಂದಕ್ಕೆ ಹಾನಿಯಾಗಿದೆ.
ಕಟೀಲು ದೇವಸ್ಥಾನ ಸಮೀಪ ನಂದಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿಯಲ್ಲಿನ ರಜಕಲ್ಲು ಮುಳುಗಡೆಯಾಗಿದೆ. ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಪಂಜ, ಉಲ್ಯ ಪ್ರದೇಶದಲ್ಲಿ ನದಿ ಉಕ್ಕಿ ಹರಿದಿರುವುದರಿಂದ ಸೇತುವೆ ಮುಳುಗಡೆಯಾಗಿದ್ದು, ಮೂರು ಮನೆಗಳು ಮತ್ತು ಗದ್ದೆಗಳು ಜಲಾವೃತಗೊಂಡಿವೆ.