ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
Team Udayavani, Mar 17, 2018, 3:36 PM IST
ಕೊಕ್ಕಡ : ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕೌಕ್ರಾಡಿ ಗ್ರಾಮದ ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನಃ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ. ಮಾರ್ಚ್ 18ರಿಂದ 23ರ ವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದೆ.
ಪುತ್ತೂರು ತಾಲೂಕು ಕೌಕ್ರಾಡಿ ಗ್ರಾಮದ ಕಾವು ಎಂಬಲ್ಲಿ ನೂರಾರು ವರ್ಷಗಳಿಂದ ಜೀರ್ಣಾವಸ್ಥೆಯಲ್ಲಿದ್ದ ದೇಗುಲವನ್ನು ಊರಿನ ಒಗ್ಗೂಡಿ ಧನ ಸಂಗ್ರಹ ಮಾಡಿ, ಜೀರ್ಣೋದ್ದಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ದೇವಾಲಯದ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತು ಪೌಳೀ ಕಟ್ಟಡ ಗಣಪತಿ ಹಾಗೂ ಶಾಸ್ತಾರ ಗುಡಿ, ನಾಗಬನ ಹಾಗೂ ಗ್ರಾಮ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ಪೂರ್ಣಗೊಂಡಿದೆ.
40 ಸಾವಿರ ಜನರ ನಿರೀಕ್ಷೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಸುಮಾರು 30 ಸಾವಿರದಿಂದ 40 ಸಾವಿರ ಆಗಮನದ ನಿರೀಕ್ಷೆ ಇದ್ದು, ಸುವ್ಯವಸ್ಥಿತ ಸಭಾಂಗಣ, ಅನ್ನ ಛತ್ರ, ಭೋಜನ ಶಾಲೆ, ವಾಹನ ನಿಲುಗಡೆ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳ ಯಶಸ್ಸಿಗೆ 25 ಉಪ ಸಮಿತಿಗಳನ್ನು ರಚಿಸಲಾಗಿದೆ.
ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾವು, ಕೌಕ್ರಾಡಿ ಇದರ ಜೀಣೋದ್ಧಾರ ಟ್ರಸ್ಟ್ ಗೌರವಾಧ್ಯಕ್ಷರಾಗಿ ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬ್ರಹ್ಮಕಲಶೋತ್ಸವ ಸಮಿತಿಯ ಸಲಹೆಗಾರ ಹರೀಶ್ ಪೂಂಜಾ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ತುಕ್ರಪ್ಪ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಲಹೆಗಾರ ಎನ್. ಈಶ್ವರ ಭಟ್ ಕೊಡೆಂಕೇರಿ, ಸಲಹೆಗಾರ ಶ್ರೀಧರ ಗೌಡ ಕೆಂಗುಡೇಲು, ಮೊದಲಾದ ಪ್ರಮುಖರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಭರದಿಂದ ಸಿದ್ದತೆ ನಡೆಯುತ್ತಿದೆ.
ಧಾರ್ಮಿಕ ಸಭೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಧಾರ್ಮಿಕ ಸಭೆಗಳು ನಡೆಯಲಿದ್ದು, ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಂಗಳೂರು ಶಾಖಾಮಠಾಧೀಶ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರುಗಳು ಆಶೀರ್ವಚನ ನೀಡಲಿದ್ದು, ಧಾರ್ಮಿಕ ಕ್ಷೇತ್ರದ ಸಾಧಕರ ಸಹಿತ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.