ಕುಕ್ಕೆ ವಾರ್ಷಿಕ ಜಾತ್ರೆ: ರಸ್ತೆಗಳಿಗೆ ತಾತ್ಕಾಲಿಕ ದುರಸ್ತಿ ಭಾಗ್ಯ!
Team Udayavani, Nov 9, 2018, 11:35 AM IST
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಂದಿನ ತಿಂಗಳಲ್ಲಿ ನಡೆಯುವ ಚಂಪಾಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಕುಮಾರಧಾರಾ-ಮುಖ್ಯ ಪೇಟೆ ನಡುವಿನ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸುವ ಕಾಮಗಾರಿಗೆ ಕ್ಷೇತ್ರದಲ್ಲಿ ಚಾಲನೆ ದೊರಕಿದೆ.
ಕುಮಾರಧಾರಾ-ಮುಖ್ಯ ಪೇಟೆ ತನಕದ ರಸ್ತೆಯಲ್ಲಿ ಅಲ್ಲಲ್ಲಿ ಡಾಮರು ಕಿತ್ತು ಹೋಗಿ, ಹೊಂಡಗಳು ನಿರ್ಮಾಣವಾಗಿದ್ದವು. ಈ ಸ್ಥಳಗಳಲ್ಲಿ ಜಲ್ಲಿ ತುಂಬಿ ಸಮತಟ್ಟುಗೊಳಿಸುವ ಕೆಲಸ ಎರಡು ದಿನಗಳಿಂದ ನಡೆಯುತ್ತಿದೆ. ಜಾತ್ರೆಯ ಪೂರ್ವಭಾವಿಯಾಗಿ ಅಲ್ಲಲ್ಲಿ ಡಾಮರು ಹಾಕಿ, ದುರಸ್ತಿ ಮಾಡಲಾಗುತ್ತಿದೆ. ಈ ರಸ್ತೆಯ ಅಭಿವೃದ್ಧಿ ಬಹುಕಾಲದ ಬೇಡಿಕೆ. ಕ್ಷೇತ್ರದಲ್ಲಿ 180 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಅನುಷ್ಠಾನದಲ್ಲಿದೆ. ಇದೇ ಯೋಜನೆಯಲ್ಲಿ ಕುಮಾರಧಾರಾ-ಕಾಶಿಕಟ್ಟೆ ತನಕ ಚತುಷ್ಪಥ ಮಾರ್ಗ ನಿರ್ಮಾಣವೂ ಸೇರಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸರಕಾರದ ಅನುಮೋದನೆ ದೊರೆತರೂ ಇನ್ನೂ ಕಾಮಗಾರಿ ಆರಂಭಕ್ಕೆ ಹಣಕಾಸು ಟೆಂಡರ್ ಬಿಡ್ ಪ್ರಕ್ರಿಯೆ ಅಂತಿಮವಾಗಿಲ್ಲ.
ಈ ಸಲದ ಜಾತ್ರೆ ವೇಳಗೆ ಚತುಷ್ಪಥ ರಸ್ತೆ ಕಾಮಗಾರಿ ಅರಂಭವಾಗುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಈ ಹಿಂದೆ ಹೇಳಿದ್ದರೂ ತಾಂತ್ರಿಕ ತೊಂದರೆಗಳಿಂದ ಅದು ತಡವಾಗಲಿದೆ. ಈ ಸಲವೂ ಕಾಮಗಾರಿ ತೇಪಗಷ್ಟೇ ಸೀಮಿತವಾಗಲಿದೆ. ಆದರೆ, ಈ ರಸ್ತೆ ತೀರಾ ಹದಗೆಟ್ಟಿದ್ದು, ವಾರ್ಷಿಕ ಜಾತ್ರೆ ಸಮೀಪಿಸುತ್ತಿರುವ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯ ನಡೆದಿದೆ. ಆದರೆ ರಸ್ತೆಯ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತಿದ್ದು, ಅಂಗಡಿ ಮಾಲಕರು, ಸಾರ್ವಜನಿಕರು ಹಾಗೂ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ.