ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ಕಿಚ್ಚ ಸುದೀಪ್ ದಂಪತಿ
ಸರಳವಾಗಿ ಸುಂದರವಾಗಿರುವ ದೇಗುಲಕ್ಕೆ ಮತ್ತೆ ಮತ್ತೆ ಬರಬೇಕು ಅನಿಸುತ್ತಿದೆ...
Team Udayavani, Dec 4, 2022, 7:26 PM IST
ಮಂಗಳೂರು: ಪ್ರಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಅವರೊಂದಿಗೆ ಭಾನುವಾರ (ಡಿ 4)ರ ಭಾನುವಾರ ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನುಡಿ ಹಬ್ಬ ‘ಭ್ರಮರ ಇಂಚರ’ ದಲ್ಲಿ ಮತ್ತು ಮೂಲ್ಕಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೇಟಿ ನೀಡಿದ್ದ ಅವರು ದೇವಿಯ ದರ್ಶನವನ್ನು ಪಡೆದಿದ್ದಾರೆ. ದೇವಾಲಯದ ಆಡಳಿತ ಮಂಡಳಿಯಿಂದ ದಂಪತಿಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.
ಸುದೀಪ್ ದಂಪತಿ ಭೇಟಿ ನೀಡಿದ ವೇಳೆ ದೇವಾಲಯದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದರು. ಕ್ಷೇತ್ರದ ಮಹಿಮೆ, ಇತಿಹಾಸದ ಕುರಿತು ಕ್ಷೇತ್ರದ ಪ್ರಧಾನ ಅರ್ಚಕರಾದ ಹರಿನಾರಾಯಣ ಅಸ್ರಣ್ಣ ಅವರು ವಿವರಿಸಿದರು. ಸಾವಿರಾರು ಮಂದಿ ಖ್ಯಾತ ನಟನೊಂದಿಗೆ ಸೆಲ್ಫಿ, ಫೋಟೋಗಾಗಿ ಮುಗಿಬಿದ್ದರು.
ಕಾಲೇಜಿನ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಸುದೀಪ್, ”ಸರಳವಾಗಿ ಸುಂದರವಾಗಿರುವ ದೇವಾಲಯಕ್ಕೆ ಮತ್ತೆ ಮತ್ತೆ ಬರಬೇಕು ಅನಿಸುತ್ತಿದೆ. ಪ್ರಿಯಾ ಕೂಡಾ ಅದನ್ನೇ ಹೇಳಿದ್ದಾರೆ. ಇಲ್ಲಿನ ಆದರಾತಿಥ್ಯ ನನಗೆ ಬಹಳ ಖುಷಿ ನೀಡಿದೆ. ಬೆಳಗ್ಗೆ ಅಭಿಮಾನಿಯೊಬ್ಬರು ಭರ್ಜರಿ ತಿಂಡಿ ವ್ಯವಸ್ಥೆ ಮಾಡಿದರು. ನಾನು ಮತ್ತೆ ಮತ್ತೆ ಬರುತ್ತೇನೆ” ಎಂದು ಸಂಭ್ರಮ ವ್ಯಕ್ತ ಪಡಿಸಿದರು.