Mangaluru; ನಾಳೆ “ಶಿವದೂತೆ ಗುಳಿಗೆ’ 555ನೇ ಪ್ರದರ್ಶನ ಸಂಭ್ರಮ
Team Udayavani, Jan 10, 2024, 7:45 AM IST
ಮಂಗಳೂರು: ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ’ ನಾಟಕದ 555 ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಜ.11ರಂದು ಸಂಜೆ 5ಕ್ಕೆ ನಗರದ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಮಾತನಾಡಿ, ತುಳುರಂಗಭೂಮಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಪ್ರದರ್ಶನ ಕಂಡು, ಅತೀ ಹೆಚ್ಚು ಪ್ರೇಕ್ಷಕರು ವೀಕ್ಷಿಸಿ ಚಾರಿತ್ರಿಕ ದಾಖಲೆ ನಿರ್ಮಿಸಿದ ನಾಟಕ ಶಿವದೂತೆ ಗುಳಿಗೆ. ದೇಶ, ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನಡೆಯುತ್ತಿದೆ. ತುಳು ಹಾಗೂ ಕನ್ನಡ ಪ್ರದರ್ಶನ ನಡೆಯುತ್ತಿದ್ದು, ಸದ್ಯದಲ್ಲಿ ಮಲಯಾಳ ಹಾಗೂ ಇತರ ಭಾಷೆಯಲ್ಲಿಯೂ ನಾಟಕ ಪ್ರದರ್ಶನವಾಗಲಿದೆ ಎಂದರು.
ಈ ಸಂಭ್ರಮ ಕಾರ್ಯಕ್ರಮದಲ್ಲಿ ಪತ್ರಕರ್ತ, ರಂಗಕರ್ಮಿ ಪರಮಾನಂದ ವಿ. ಸಾಲಿಯಾನ್ ಅವರಿಗೆ 2024ನೇ ವರ್ಷದ ದಿ| ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶ್ರೀ ವಿನಯ ಗುರೂಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಆರ್.ಕೆ.ನಾಯರ್, ಪದ್ಮರಾಜ್ ಆರ್., ಮನೋಹರ ಪ್ರಸಾದ್, ಬಿ. ನಾಗರಾಜ ಶೆಟ್ಟಿ, ಎಸ್. ಮಹೇಶ್ ಕುಮಾರ್, ಕುಮಾರ್ ಎನ್.ಬಂಗೇರ, ಕಾಸರಗೋಡು ಚಿನ್ನಾ, ಪ್ರಕಾಶ್ ಪಾಂಡೇಶ್ವರ, ಹರೀಶ್ ಬಂಗೇರ ಭಾಗವಹಿಸಲಿದ್ದಾರೆ. ಚಿತ್ರರಂಗದ ಪ್ರಮುಖರಾದ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ರಕ್ಷಿತ್ ಶೆಟ್ಟಿ, ಗುರುಕಿರಣ್, ಅನುಶ್ರೀ ಮುಂತಾದವರು ಭಾಗವಹಿಸಲಿದ್ದಾರೆ. ಬಳಿಕ ಶಿವದೂತೆ ಗುಳಿಗೆ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತ ಎಂದರು.
ನಟರಾದ ಸ್ವರಾಜ್ ಶೆಟ್ಟಿ, ರಜಿತ್ ಕದ್ರಿ, ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಕೋಕಿಲ, ಪ್ರಮುಖರಾದ ಚಂದ್ರ ಕೊಡಿಯಾಲ್ಬೈಲ್, ಪ್ರೇಮ್ ಶೆಟ್ಟಿ ಸುರತ್ಕಲ್, ನಿತೇಶ್ ಪೂಜಾರಿ ಏಳಿಂಜೆ, ಹಿತೇಶ್ ಮಂಗಳೂರು ಉಪಸ್ಥಿತರಿದ್ದರು.