ಪುತ್ತೂರು ಮುಖ್ಯ ರಸ್ತೆಯೇ ಹೊಂಡಮಯ!
Team Udayavani, Oct 9, 2017, 4:05 PM IST
ಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಹಾದುಹೋಗುವ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ಗಾತ್ರದ
ಹೊಂಡಗಳು ಸೃಷ್ಟಿಯಾಗಿ ಸಂಚಾರ ವ್ಯವಸ್ಥೆಗೆ ಸವಾಲೊಡ್ಡುತ್ತಿವೆ. ಮಳೆ ನೀರಿನ ಜತೆಗೆ ಈ ರಸ್ತೆಯ ಡಾಮರು ಕಾಣೆಯಾಗುತ್ತಿದೆ.
ನಗರೋತ್ಥಾನ ಯೋಜನೆಯಲ್ಲಿ ಎರಡು ವರ್ಷಗಳ ಹಿಂದೆ ನಗರದ ಮುಖ್ಯರಸ್ತೆಗೆ ಡಾಮರು ಹಾಕಲಾಗಿತ್ತು. ಆದರೆ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲದ ಕಾರಣ ಕೆಲ ದಿನಗಳಲ್ಲೇ ಹುಳುಕು ಬಯಲಾಗಿತ್ತು. ಸಾರ್ವಜನಿಕ
ವಲಯದಿಂದ ಆಕ್ರೋಶ ವ್ಯಕ್ತವಾದರೂ ಸರಿಪಡಿಸುವ ಕೆಲಸ ಮಾಡಿಲ್ಲ.
ಸಂಚಾರ ದುಸ್ತರ
ಮುಖ್ಯವಾಗಿ ಗಾಂಧಿಕಟ್ಟೆ ಮತ್ತು ಪಕ್ಕದ 100 ಮೀ. ವ್ಯಾಪ್ತಿಯಲ್ಲಿ ರಸ್ತೆಯ ಡಾಮರು ಕಿತ್ತುಹೋಗಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಜನ ಹಾಗೂ ವಾಹನ ನಿಬಿಡ ನಗರದಲ್ಲಿ ಸುಲಲಿತ ಸಂಚಾರ ವ್ಯವಸ್ಥೆಗೂ ಇದು ತೊಡಕಾಗಿದೆ. ದ್ವಿಚಕ್ರ ವಾಹನಗಳ ಸಂಚಾರವಂತೂ ಸವಾಲಿನ ವಿಷಯವಾಗಿದೆ. ನಗರ ವ್ಯಾಪ್ತಿಯಲ್ಲಿನ ಮುಖ್ಯರಸ್ತೆಯಲ್ಲಿ ಹೆಚ್ಚು ಹದೆಗೆಟ್ಟ ಕೆಲವು ಕಡೆಗಳಲ್ಲಿ ಇತ್ತೀಚೆಗೆ ನಗರಸಭೆಯ ವತಿಯಿಂದ ಪ್ಯಾಚ್ವರ್ಕ್ ಕಾಮಗಾರಿ ನಡೆಸಲಾಗಿದೆ. ಆದರೆ ಇನ್ನು ಕೆಲವು ಕಡೆಗಳಲ್ಲಿ ಮಳೆಗಾಲ ಆರಂಭವಾದ ಬಳಿಕ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ.
ಜಿಲ್ಲಾಧಿಕಾರಿ ಸ್ಪಂದನೆಯಿಲ್ಲ
ನಗರೋತ್ಥಾನ ಯೋಜನೆಯಲ್ಲಿ ಮುಖ್ಯರಸ್ತೆಗೆ ನಡೆಸಲಾದ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಮತ್ತು ಮರು ಕಾಮಗಾರಿ ನಡೆಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ನಗರಸಭೆಯ ವತಿಯಿಂದ ದ. ಕ. ಜಿಲ್ಲಾಧಿಕಾರಿಯವರಿಗೆ ಎರಡೆರಡು ಸಲ ಮನವಿ ಮಾಡಲಾಗಿದೆ. ಆದರೆ ಜಿಲ್ಲಾಧಿಕಾರಿಯವರ ಕಡೆಯಿಂದ
ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ನಗರಸಭೆ ಆಡಳಿತದ ಹೇಳಿಕೆ.
ಡಿಸಿಗೇ ಅಧಿಕಾರ
ನಗರೋತ್ಥಾನ ಯೋಜನೆಯಲ್ಲಿ ನಡೆಸಲಾದ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಗುಣಮಟ್ಟ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮರು ಕಾಮಗಾರಿಗೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರೂ ಉತ್ತರ ಸಿಕ್ಕಿಲ್ಲ. ನಗರೋತ್ಥಾನ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರಿಗೆ ಅಧಿಕಾರವಿರುವುದರಿಂದ ಅವರು ಸ್ಪಂದಿಸಬೇಕು.
– ಜಯಂತಿ ಬಲ್ನಾಡು
ಅಧ್ಯಕ್ಷರು, ನಗರಸಭೆ ಪುತ್ತೂರು