50 ಸಾವಿರ ರೂ. ದಂಡ; 150 ಪ್ರಕರಣ ದಾಖಲು
Team Udayavani, Nov 25, 2018, 11:28 AM IST
ಮಹಾನಗರ: ನಗರವನ್ನು ತಂಬಾಕು ಮುಕ್ತವಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ನೇತೃತ್ವದಲ್ಲಿ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಯುತ್ತಿದ್ದು, ಈವರೆಗೆ ಅಂದಾಜು 50 ಸಾವಿರ ರೂ. ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ. ಸುಮಾರು 150 ಪ್ರಕರಣಗಳನ್ನು ದಾಖಲಿಸಲಾಗಿದೆ.
ಈವರೆಗೆ ಪಾಂಡೇಶ್ವರ, ಉರ್ವಸ್ಟೋರ್, ಅಳಕೆ, ಬಂದರು ಮತ್ತಿತರ ಕಡೆಗಳಲ್ಲಿ ಕಾರ್ಯಾಚರಣೆ ನಡೆದಿದೆ. ಶನಿವಾರ ಪಿಎಸ್ಐ ಪ್ರದೀಪ್ ಹಾಗೂ ತಂಡ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಡಾ| ಪ್ರೀತಾ, ಜಾನ್ ಮತ್ತು ತಂಡ, ಸಾಮಾಜಿಕ ಕಾರ್ಯಕರ್ತೆ ಶ್ರುತಿ ಮೊದಲಾದವರು ಯೆಯ್ನಾಡಿ, ಪಂಪ್ ವೆಲ್ ಮುಂತಾದೆಡೆ ಕಾರ್ಯಾಚರಣೆ ನಡೆಸಿ 60 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸುಮಾರು 12 ಸಾವಿರ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ.
15 ದಿನ ಕಾರ್ಯಾಚರಣೆ
ಈ ಕಾರ್ಯಾಚರಣೆಯು ಸುಮಾರು 15 ದಿನಗಳ ಕಾಲ ಮುಂದುವರಿಯಲಿದ್ದು, ಹೊಟೇಲ್, ಬಾರ್, ರೆಸ್ಟೋರೆಂಟ್, ಜನರಲ್ ಶಾಪ್ ಮುಂತಾದ ಕಡೆಗಳಲ್ಲಿ ದಾಳಿ ನಡೆಸಿ, ತಂಬಾಕು ಉತ್ಪನ್ನ ಮಾರಾಟದ ಬಗ್ಗೆ ಪರಿಶೀಲಿಸಲಾಗುವುದು ಎಂದು ಡಾ| ಪ್ರೀತಾ ತಿಳಿಸಿದ್ದಾರೆ.