ದೇಶ ಕಾಯುವ ಸೈನಿಕನಿಗೆ ಜನ ಸೇವೆಯ ಕನಸು
Team Udayavani, Feb 13, 2019, 1:00 AM IST
ಪುತ್ತೂರು: ಬಾಲ್ಯದಿಂದಲೇ ಕಂಡು – ಉಂಡಿದ್ದ ಬಡತನದ ನಡುವೆಯೂ ದೇಶಸೇವೆಯ ಸಂಕಲ್ಪ ಬಲವಾಗಿತ್ತು. ಅದರಿಂದಾಗಿ ಭಾರತೀಯ ಸೇನೆಯಲ್ಲಿ ಅವಕಾಶ ಸಿಕ್ಕಿತು. ಕನಸುಗಳು ಇನ್ನೂ ಮುಗಿದಿಲ್ಲ; ಭವಿಷ್ಯದಲ್ಲಿ ಭಾರತೀಯ ಆಡಳಿತ ಸೇವೆ ಸೇರಬೇಕು, ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎಂಬ ಹಂಬಲವಿದೆ. ಪುತ್ತೂರು ತಾಲೂಕಿನ ನೆಲ್ಯಾಡಿ ಭಾಗ್ಯಜಾಲು ನಿವಾಸಿ ಕುಶಾಲಪ್ಪ ಗೌಡ ಮತ್ತು ದೇವಕಿ ಅವರ ತೃತೀಯ ಪುತ್ರ ನಾಗೇಶ್ ಕುಮಾರ್. ಇವರಿಗೆ ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರ. ತಂದೆ ಕೂಲಿ ಕೆಲಸ ಮಾಡಿ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ.
ನಾಗೇಶ್ ಕುಮಾರ್ ಅರಸಿನಮಕ್ಕಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಪಡೆದಿದ್ದಾರೆ. ಆ ಬಳಿಕ ತಂದೆ ಕೆಲಸ ಅರಸಿಕೊಂಡು ಮೂಲ್ಕಿಯತ್ತ ತೆರಳಿದಾಗ ನಾಗೇಶ್ ಮೂಲ್ಕಿ ವಿಜಯಾ ಕಾಲೇಜು ಸೇರಿಕೊಂಡು ಪದವಿಪೂರ್ವ ವಿದ್ಯಾಭ್ಯಾಸ ಮಾಡಿದರು. ಅನಂತರ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದರು. ಬಳಿಕ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾದರು. ಹವಾಲ್ದಾರ್ ಆಗಿ ಸೈನ್ಯದಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡ ಸಾಧನೆ ಇವರದು.
ಬಡತನವೇ ಬಂಡವಾಳ
ನಾಗೇಶ್ ಕುಮಾರ್ ಅವರಲ್ಲಿದ್ದದ್ದು ಬಡತನದಿಂದ ಮೇಲೆ ಬರುವ ಛಲ. ಮನೆಯಲ್ಲಿ ಅನುಕೂಲಕರ ವಾತಾವರಣ ಇಲ್ಲದಿದ್ದಾಗ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಅಜ್ಜಿ ಮನೆಯಲ್ಲಿದ್ದು ಪೂರೈಸಿದ್ದರು. ಶೈಕ್ಷಣಿಕ ಖರ್ಚುವೆಚ್ಚಗಳಿಗೆ ಹಣ ಹೊಂದಿಸುವುದಕ್ಕಾಗಿ ಅಡಿಕೆ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದರು. ಮೂಲ್ಕಿಯಲ್ಲಿ ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದಾಗ ತೋಟದ ಕೆಲಸ, ಜಾನುವಾರುಗಳ ನಿರ್ವಹಣೆ ಕೈಗೊಂಡು ಆದಾಯ ಗಳಿಸುತ್ತಿದ್ದರು.
ಉಗ್ರರ ದಾಳಿಯ ನೆನಪು
ಕಾಶ್ಮೀರದ ಸಾಂಜುವಾನ್ ಪ್ರದೇಶದಲ್ಲಿ 7 ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ನೆನಪು ನಾಗೇಶ್ ಸ್ಮರಣೆಯಲ್ಲಿ ಚಿರಸ್ಥಾಯಿ. ಮುಂಜಾವ 3 ಗಂಟೆಯ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. 24 ಗಂಟೆಗಳ ಕಾಲ ಸೈನಿಕರ ಕ್ಯಾಂಪನ್ನು ವಶದಲ್ಲಿ ಇರಿಸಿಕೊಂಡಿದ್ದರು. ನಾಗೇಶ್ ಕೂಡ ಇದ್ದ ಸೈನಿಕರ ತಂಡ ಉಗ್ರರ ವಿರುದ್ಧ ನಿರಂತರ ಹೋರಾಟ ಸಂಘಟಿಸಿತ್ತು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಹಾಗೂ ಸೈನಿಕರ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದು ಅತ್ಯಂತ ದುಃಖದ ಘಟನೆ ಎಂದು ನೆನಪಿಸಿಕೊಳ್ಳುತ್ತಾರೆ. ಅನಂತರ ಎನ್ಎಸ್ಜಿ ಕಮಾಂಡೋ, ವಿಶೇಷ ಪಡೆಯ ಸೈನಿಕರು ದಾಳಿ ನಡೆಸಿ ಎಲ್ಲ ಏಳು ಉಗ್ರರನ್ನೂ ಸದೆಬಡಿದರು. ಆ ಬಳಿಕ ಅಲ್ಲಿ ದಾಳಿ ಆಗಿಲ್ಲ ಎನ್ನುತ್ತಾರೆ ನಾಗೇಶ್ ಕುಮಾರ್.
ಉನ್ನತ ಸೇವೆಯ ಕನಸು
ನಾಗೇಶ್ ಕುಮಾರ್ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲೇ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಕನಸು ಕಂಡು ಸಿದ್ಧತೆ ನಡೆಸುತ್ತಿದ್ದರು. ಅನಂತರ ಸೈನ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದರೂ ಕಲಿಕೆಯನ್ನು ಬಿಟ್ಟಿಲ್ಲ. ಸೈನ್ಯದಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಡಳಿತ ಸೇವೆಯ ಅಧಿಕಾರಿಯಾಗಬೇಕೆನ್ನುವ ಬಯಕೆ ಅವರಿಗಿದೆ. ಸಮಯ ಸಿಕ್ಕಿದಾಗ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ದಿಲ್ಲಿಯ ಚಾಣಕ್ಯ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಕನಸನ್ನೂ ಇರಿಸಿಕೊಂಡಿದ್ದಾರೆ.
ಸೇನೆ ಸೇರಬೇಕಾದರೆ ಸೂಕ್ತ ರೀತಿಯ ಸಿದ್ಧತೆ, ಪ್ರಯತ್ನವೂ ಬೇಕು. ದೈಹಿಕ ಕ್ಷಮತೆಯ ಜತೆಗೆ ತಾಂತ್ರಿಕ ಕೌಶಲವೂ ಸೈನ್ಯದಲ್ಲಿ ಅಗತ್ಯವಾಗಿರುವುದರಿಂದ ಈ ನಿಟ್ಟಿನಲ್ಲಿಯೂ ಅವಕಾಶಗಳಿವೆ. ಸಾಧನೆಯ ಛಲ ನಮ್ಮಲ್ಲಿದ್ದಾಗ ಯಾವ ಅಡೆತಡೆಯೂ ಬಾಧಿಸದು ಎನ್ನುವುದನ್ನು ಯುವ ಸಮುದಾಯ ಅರಿತುಕೊಳ್ಳಬೇಕು.
– ನಾಗೇಶ್ ಕುಮಾರ್ ಹವಾಲ್ದಾರ್, ಭಾರತೀಯ ಸೇನೆ
ಮನೆಯಲ್ಲಿ ಸಾಕಷ್ಟು ಬಡತನವಿತ್ತು. ಈ ಕಾರಣದಿಂದ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದ ನಾಗೇಶ್ ಎಳವೆ ಯಲ್ಲಿಯೇ ಕೂಲಿ ಕೆಲಸ ಮಾಡಿ ಕೊಂಡು ಶಿಕ್ಷಣ ಪಡೆದಿದ್ದ. ದೇಶ ಸೇವೆ ಮಾಡಬೇಕೆಂಬ ಹಂಬಲವನ್ನು ಛಲದಿಂದ ಪೂರೈಸಿದ್ದಾನೆ. ನಮಗೆಲ್ಲ ರಿಗೂ ಖುಷಿ ಹಾಗೂ ಹೆಮ್ಮೆ ಇದೆ.
– ದೇವಕಿ ನಾಗೇಶ್ ಕುಮಾರ್ ಅವರ ತಾಯಿ
– ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು