ಶಿಶಿಲೇಶ್ವರ: ಮೂಲ ಸೌಲಭ್ಯ ಒದಗಿಸಲು ಪತ್ರ
Team Udayavani, May 2, 2018, 11:18 AM IST
ಬೆಳ್ತಂಗಡಿ: ಶ್ರೀ ಶಿಶಿಲೇಶ್ವರ ಕ್ಷೇತ್ರಕ್ಕೆ ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆಯಲಾಗಿದ್ದು, ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀ ಶಿಶಿಲೇಶ್ವರ ದೇವಳದ ಅಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಜಯರಾಮ ನೆಲ್ಲಿತ್ತಾಯ ಅವರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಮನವಿ ಸ್ವೀಕರಿಸಿದ ಕೇಂದ್ರ ಸರಕಾರದ ಪ್ರಧಾನಿ ಮಂತ್ರಿ ಕಚೇರಿ ಜಿಲ್ಲಾಧಿಕಾರಿ ಕಚೇರಿಗೆ ಸೂಕ್ತ ಕ್ರಮಕ್ಕಾಗಿ ಮತ್ತು ಪರಿಶೀಲನೆಗೆ ಕೋರಿದೆ.
ಜಿಲ್ಲಾಧಿಕಾರಿ ಆದೇಶದಂತೆ ಮಂಗಳೂರಿನ ಪ್ರವಾಸೋದ್ಯಮ ಇಲಾಖೆ ಶಿಶಿಲ ಗ್ರಾ.ಪಂ.ಗೆ ಪತ್ರ ಬರೆದು ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರ, ಮೂಲ ಸೌಲಭ್ಯ ಪರಿಶೀ ಲಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಕೋರಿದೆ.
ಮತ್ಸ್ಯತೀರ್ಥ ಕ್ಷೇತ್ರ
ಬೆಳ್ತಂಗಡಿ ತಾ|ನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನ ಮತ್ಸ್ಯತೀರ್ಥ ಕ್ಷೇತ್ರವಾಗಿದೆ. ಪೂರ್ಣ ಶಿಲಾಮಯ
ದೇವ ಸ್ಥಾನವಾಗಿದ್ದು, ಈ ಕ್ಷೇತ್ರ ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆಗಳಿಗೆ ಸಂಬಂಧಪಟ್ಟಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧಮೋತ್ಥಾನ ಟ್ರಸ್ಟ್ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇವಾಲಯದ ಗರ್ಭಗುಡಿಯನ್ನು ಹಳೆಯ ಸಂಪ್ರದಾಯದಂತೆ ಜೀರ್ಣೋದ್ಧಾರಗೊಳಿಸಿದ್ದರು. ಕಪಿಲಾ ನದಿಯಲ್ಲಿರುವ ಮತ್ಸ್ಯಗಳು ಸಾವಿರಾರು ಪ್ರವಾಸಿಗರನ್ನು ನಿತ್ಯ ಆಕರ್ಷಿಸುತ್ತಿವೆ. ಕ್ಷೇತ್ರಕ್ಕೆ ಸರಕಾರವು ಮೂಲ ಸೌಕರ್ಯ ಒದಗಿಸಿದ್ದಲ್ಲಿ ಉತ್ತಮ ಪ್ರವಾಸಿ ಕೇಂದ್ರವಾಗಿ ರೂಪಿಸಬಹುದು ಎಂದು ತಿಳಿಸಲಾಗಿತ್ತು.
ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರೂ ಯಾವುದೇ ಸೌಕರ್ಯಗಳು ಇಲ್ಲದೇ ಪ್ರವಾಸಿಗರು ಪರದಾಡಬೇಕಾಗಿದೆ. ಈ ಕುರಿತು ಸೌಲಭ್ಯಕ್ಕಾಗಿ ಗ್ರಾಮಸ್ಥರು, ಆಡಳಿತ ಸಮಿತಿ ಪ್ರಯತ್ನಿಸುತ್ತಿದೆ.
ಅಗತ್ಯ ಸೌಕರ್ಯಗಳು
ಮತ್ಸ್ಯತೀರ್ಥಗ್ಯಾಲರಿ ಮತ್ತು ಸ್ನಾನಘಟ್ಟ, ಸುಸಜ್ಜಿತ ಸಮುದಾಯ ಭವನ, ಅತಿಥಿಗೃಹ, ಶಾಶ್ವತ ಕುಡಿಯುವ ನೀರಿನ ಯೋಜನೆ, ಉದ್ಯಾನವನ,ಬಾಲವನ, ದೇವಳದ ರಥಬೀದಿಗೆ ಶಾಶ್ವತ ಬೆಳಕಿನ ವ್ಯವಸ್ಥೆ, ಪ್ರವಾಸೋದ್ಯಮ ಇಲಾಖೆಯಿಂದ ಉಪಾಹಾರ ಮಂದಿರ, ಅಂಗಡಿಕೋಣೆ ರಚನೆ, ಪ್ರವಾಸಿಗರಿಗೆ ಸ್ನಾನಗೃಹ ಮತ್ತು ಶೌಚಾಲಯ ವ್ಯವಸ್ಥೆ, ಒಳಾಂಗಣ, ಹೊರಾಂಗಣ ದುರಸ್ತಿ, ಶಾಶ್ವತ ಮೇಲ್ಛಾವಣಿ, ಕಪಿಲಾ ನದಿಗೆ ಸೇತುವೆ ಅಗತ್ಯವಿದೆ.