ಕೊಡಲಿಯೇಟು ಬಿದ್ದ ಮರ ಚಿಗುರೊಡೆಯಿತು
Team Udayavani, Apr 22, 2018, 2:40 PM IST
ಮಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ದಿನಂಪ್ರತಿ ಅದೆಷ್ಟೋ ಮರಗಳ ಮಾರಣ ಹೋಮ ನಡೆಯುತ್ತಿದೆ. ಅದಕ್ಕೆ ನಗರ ಕೂಡ ಹೊರತಾಗಿಲ್ಲ. ಅಭಿವೃದ್ಧಿ ನೆಪ ಮಾಡಿಕೊಂಡು ಎರಡು ತಿಂಗಳುಗಳ ಹಿಂದೆ ವೆಲೆನ್ಸಿಯಾ-ಕಂಕನಾಡಿ ರಸ್ತೆಯಲ್ಲಿನ ಸಾರ್ವಜನಿಕ ಸ್ಥಳ ಕಾಂಪೌಂಡ್ನಲ್ಲಿ ಮರವೊಂದಕ್ಕೆ ನಗರ ಪಾಲಿಕೆ ಕೊಡಲಿ ಏಟು ಹಾಕಿತ್ತು. ಆದರೆ ಇದೀಗ ನಗರದಲ್ಲಿ ಬೀಳುತ್ತಿರುವ ವರ್ಷಧಾರೆಗೆ ಆ ಮರ ಚಿಗುರೊಡೆದು ನಿಂತಿದೆ.
ಸುಮಾರು 2 ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗೆ ಅಡ್ಡಿಯಾಗುತ್ತದೆ ಎಂದು ಸುಮಾರು 40 ವರ್ಷಗಳ ಮರವೊಂದನ್ನು ಕಡಿಯಲಾಗಿತ್ತು. ಪಾಲಿಕೆಯ ಈ ನಿರ್ಧಾರಕ್ಕೆ ನಗರದ ಅನೇಕ ಪರಿಸರ ವಾದಿಗಳು ವಿರೋಧ ವ್ಯಕ್ತಪಡಿ ಸಿದ್ದರು. ಆದರೂ ಮರ ಕಡಿಯಲು ಪರಿಸರ ಇಲಾಖೆಯಿಂದ ಅನುಮತಿ ಇದೆ ಎಂದು ಪಾಲಿಕೆ ಅಧಿಕಾರಿಗಳು ಮರ ಕಡಿದೇ ಬಿಟ್ಟಿದ್ದರು. ಆ ಮರದ ಕಾಂಡವನ್ನು ಹಾಗೇ ಬಿಡಲಾಗಿತ್ತು. ಕೆಲವು ದಿನಗಳಿಂದ ನಗರದಲ್ಲಿ ನಿರಂತರವಾಗಿ ಮಳೆ ಬರುತ್ತಿದ್ದು, ಮರ ಚಿಗುರೊಡೆದಿದೆ.
ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿದ ಎನ್ಇಸಿಎಫ್ ಮಂಗಳೂರು ಕಾರ್ಯ ದರ್ಶಿ ಶಶಿಧರ ಶೆಟ್ಟಿ ಅವರು, ನಾವೆಷ್ಟೇ ವಿರೋಧ ವ್ಯಕ್ತಪಡಿಸಿದರೂ ಮರವನ್ನು ಅನಗತ್ಯವಾಗಿ ಕಡಿಯಲಾಗಿತ್ತು. ಬಿಸಿಲ ರಕ್ಷಣೆಗಾಗಿ ಮರದ ಕಾಂಡಕ್ಕೆ ಗೋಣಿ ಚೀಲ ಸುತ್ತಿ, ಕಾಂಡಕ್ಕೆ ಸುಣ್ಣ ಬಳಿದಿದ್ದೆ. ಜತೆಗೆ ನೀರು ಕೂಡ ಹಾಕುತ್ತಿದ್ದೆ. ಮೊನ್ನೆ ಬಂದಂತಹ ಮಳೆಗೆ ಆ ಮರ ಚಿಗುರೊಡೆದು ನಿಂತಿದೆ. ತಾಯಿ ಬೇರು ಗಟ್ಟಿ ಆಗಿದ್ದರಿಂದ ಕಾಂಡಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಲಿಲ್ಲ ಎಂದು ತಿಳಿಸಿದ್ದಾರೆ.