ಹುತಾತ್ಮ ಭಾರತೀಯ ಯೋಧರಿಗೆ ಕಂಬನಿ ಮಿಡಿದ ಕರಾವಳಿ
Team Udayavani, Feb 16, 2019, 12:30 AM IST
ಮಂಗಳೂರು/ಉಡುಪಿ: ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದೆಡೆ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕದ್ರಿ ಮತ್ತು ಅಜ್ಜರಕಾಡಿನ ಲ್ಲಿರುವ ಯೋಧರ ಸ್ಮಾರಕದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಸೈನಿಕರ ಪರವಾಗಿಯೂ ಗೌರವ ನಮನ ಸಲ್ಲಿಸಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಸಂಘ- ಸಂಸ್ಥೆಗಳ ನೇತೃತ್ವದಲ್ಲಿ ಕದ್ರಿಯ ಯೋಧರ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾರ್ವಜನಿಕರೂ ಆಗಮಿಸಿದ್ದರು. ಮಂಗಳೂರು ಮೇಯರ್ ಭಾಸ್ಕರ್ ಕೆ. ಮಾತನಾಡಿ, ನಮ್ಮನ್ನು ಕಾಯುವವರ ಮೇಲೆ ನಡೆದಿರುವ ದಾಳಿ ಘೋರವಾಗಿದೆ. ಹುತಾತ್ಮ ಯೋಧರು ಚಿರಸ್ಥಾಯಿಗಳು ಎಂದರು.
ಹೇಯ ಕೃತ್ಯ: ಕ್ಯಾ| ಕಾರ್ಣಿಕ್
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ಕಾರ್ಣಿಕ್ ಮಾತನಾಡಿ, ಉಗ್ರರು ಹೇಯ ಕೃತ್ಯನಡೆಸಿದ್ದಾರೆ. ಸೈನಿಕರನ್ನು ಗೌರವಿಸುವ ಮನೋಭಾವ ನಮ್ಮಲ್ಲಿ ಮೊದಲು ಜಾಗೃತವಾಗ ಬೇಕು. ಪ್ರತ್ಯೇಕತೆ, ಜಾತೀಯತೆ, ಸಂಕುಚಿತ ಭಾವನೆ ತೊರೆದು ದೇಶ ರಕ್ಷಕರನ್ನು ಸದಾ ಸ್ಮರಣೀಯವಾಗಿಸೋಣ ಎಂದರು.
ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ನಿವೃತ್ತ ಸೈನಿಕರಾದ ಐ.ಎನ್.ರೈ, ಶರತ್ ಭಂಡಾರಿ, ವಿಕ್ರಂ ದತ್ತ ಸೇರಿದಂತೆ ನಿವೃತ್ತ ಸೈನಿಕರು ಹುತಾತ್ಮ ಯೋಧರಿಗೆ ಗೌರವಪೂರ್ವಕ ನಮನ ಸಲ್ಲಿಸಿದರು. ಮಾಜಿ ಶಾಸಕ ಎನ್.ಯೋಗೀಶ್ ಭಟ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪ್ರಮುಖರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕ್ಯಾ| ಬೃಜೇಶ್ ಚೌಟ, ಎಂ. ಶಶಿಧರ ಹೆಗ್ಡೆ, ನವೀನ್ ಡಿ’ಸೋಜಾ, ರೂಪಾ ಡಿ. ಬಂಗೇರ, ಪ್ರವೀಣ್ಚಂದ್ರ ಆಳ್ವ, ಮಹಾಬಲ ಮಾರ್ಲ, ಎ.ಸಿ. ವಿನಯ್ರಾಜ್ ಮೋಂಬತ್ತಿ ಬೆಳಗಿ ಪುಷ್ಪನಮನ ಸಲ್ಲಿಸಿದರು. ಫ್ರಾÂಂಕ್ಲಿನ್ ಮೊಂತೇರೋ ದೇಶಭಕ್ತಿ ಗೀತೆ ಹಾಡಿದರು. ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆಯ ಗಿಲ್ಬರ್ಟ್ ಬ್ರಿಗಾಂಝ, ಗಣೇಶ್ ರಾವ್ ನಮನ ಸಲ್ಲಿಸಿದರು.
ವಿಹಿಂಪ ಹಾಗೂ ಬಜರಂಗದಳ ನೇತೃತ್ವದಲ್ಲಿ ಮಂಗಳೂರಿನ ಪಿವಿಎಸ್ ಸರ್ಕಲ್ನಲ್ಲಿ ಮತ್ತು ಉಡುಪಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಬೆಳಗ್ಗೆ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಹುತಾತ್ಮ ಭಾರತೀಯ ಯೋಧರಿಗೆ ಇದೇ ವೇಳೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಗ್ರರ ಕೃತ್ಯ ಖಂಡಿಸಿ ಉಳ್ಳಾಲ ದರ್ಗಾ ಸೇರಿದಂತೆ ದ.ಕ. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಖಂಡನಾ ಖುತಾº ನಡೆಸಿ, ಪ್ರಾರ್ಥನೆ ಸಲ್ಲಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಹುತಾತ್ಮ ಸ್ಮಾರಕದಲ್ಲಿ ಬಿಜೆಪಿ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನಮನ ಸಲ್ಲಿಸಿದರು. ಜಿಲ್ಲಾ ನಾಗರಿಕ ಸಮಿತಿ, ಕರವೇ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಡಿಕೇರಿ, ಶನಿವಾರಸಂತೆ, ಗೋಣಿಕೊಪ್ಪಲು ಸಹಿತ ಕೊಡಗಿನ ವಿವಿಧೆಡೆ ಪ್ರತಿಭಟನೆ, ಶ್ರದ್ಧಾಂಜಲಿ ಸಭೆ ನಡೆಯಿತು.
ಸೈನಿಕರ ಮೇಲಿನ ದಾಳಿ ಅಮಾನವೀಯ ಹಾಗೂ ಹೇಯ ಕೃತ್ಯ. ಉಗ್ರರಿಗೆ ತೀರುಗೇಟು ನೀಡಲೇ ಬೇಕು. ಕೇಂದ್ರ ಸರಕಾರದ ಜತೆ ಈ ಸಂದರ್ಭದಲ್ಲಿ ನಾವಿದ್ದೇವೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ .
– ಯು.ಟಿ. ಖಾದರ್, ಸಚಿವ