ತೊಕ್ಕೊಟ್ಟು: ಗಟ್ಟಿಸಮಾಜದ ಸಮಾವೇಶ
Team Udayavani, Dec 18, 2017, 10:10 AM IST
ಉಳ್ಳಾಲ: ನಮ್ಮ ಹಿರಿಯರ ತ್ಯಾಗ ಮನೋಭಾವದಿಂದ ಇಂದು ನಾವು ಉತ್ತಮ ಜೀವನ ನಡೆಸುತ್ತಿದ್ದು, ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೊಸ ಯೋಜನೆ ರೂಪಿಸಲು ಸಮಾವೇಶಗಳು ಪೂರಕ ವಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಕರ್ನಾಟಕ ರತ್ನ ರಾಜರ್ಷಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ತೊಕ್ಕೊಟ್ಟು ಅಂಬಿಕಾರೋಡ್ನ ಗಟ್ಟಿ ಸಮಾಜ ಭವನದಲ್ಲಿ ಸಮಾಜದ ಸಮಾವೇಶ ಮತ್ತು ಗಟ್ಟಿ ಸಮಾಜ ಭವನದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸ್ಮರಣ ಸಂಚಿಕೆ ‘ಪಿಂಗಾರದ ಗಿಂಡೆ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜ ಸಂಘಟನೆ
ಸ್ವತಂತ್ರ ಪೂರ್ವದಲ್ಲಿ ನಮ್ಮ ಹಿರಿಯರ ಸ್ಥಿತಿಗತಿ ಯಾವ ಸ್ಥಿತಿಯಲ್ಲಿತ್ತು? ಅಂದು ಅವರು ಕೃಷಿಯೊಂದಿಗೆ ನಮ್ಮ ಮುಂದಿನ ಪೀಳಿಗೆ ಒಂದು ಉತ್ತಮ ಸ್ಥಿತಿಯಲ್ಲಿ ಮುನ್ನಡೆ ಯಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣದ ಮೂಲಕ ಸಮಾಜವನ್ನು ಸಂಘಟಿಸಿದ್ದರಿಂದ ನಾವು ಇಂದು ಉತ್ತಮ ಜೀವನವನ್ನು ನಡೆಸುತ್ತಿದ್ದೇವೆ.
ಈ ನಿಟ್ಟಿನಲ್ಲಿ ನಾವು ಆರ್ಥಿಕವಾಗಿ ಸಬಲರಾಗುವುದ ರೊಂದಿಗೆ ಮುಂದಿನ ಸಮಾಜವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿ ಉಳಿತಾಯದ ಮನೋಭಾವನೆಯನ್ನು ಬೆಳೆಸಿಕೊಂಡರೆ ಮುಂದಿನ ಸಮಾಜ ಬಲಿಷ್ಟವಾಗಲು ಸಾಧ್ಯ ಎಂದರು.
ಅರಣ್ಯ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬಲಿಷ್ಠ ಗಟ್ಟಿ ಸಮಾಜವಾಗಬೇಕಾದರೆ ಸಮಾಜದ ಎಲ್ಲರೂ ಬಲಿಷ್ಠರಾಗಬೇಕಾಗದ್ದು, ಈ ನಿಟ್ಟಿನಲ್ಲಿ ಸದೃಢ ಸಮಾಜ ಕಟ್ಟುವ ಕಾರ್ಯಕ್ಕೆ ಗಟ್ಟಿ ಸಮಾಜ ಮುಂದಾಗಬೇಕು. ಅಬ್ಬಕ್ಕ ರಾಣಿಯೊಂದಿಗೆ ಎಲ್ಲ ಜಾತಿಯೊಂದಿಗೆ ಗಟ್ಟಿ ಸಮಾಜದ ಹಿರಿಯರು ಪರಕೀಯರ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು, ಅಂದು ಜಾತ್ಯತೀತವಾಗಿ ಹೋರಾಟ ನಡೆಸಿದ್ದರಿಂದ ಜಯಶಾಲಿಯಾಗಲು ಸಾಧ್ಯವಾಯಿತು ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಾತನಾಡಿ, ಶಿಕ್ಷಣದಿಂದ ಸಬಲರಾದಾಗ ಸಮಾಜ ಆಭಿವೃದ್ಧಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಗಟ್ಟಿ ಸಮಾಜ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದತ್ತ ಒಲವು ತೋರಿಸಬೇಕು ಎಂದರು.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಮಾತನಾಡಿ, ಗಟ್ಟಿ ಸಮಾಜ ಗಟ್ಟಿಯಾಗಿದ್ದು ಅದು ಹಿಂದುಳಿದಿಲ್ಲ. ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಶತಶತಮಾನಗಳಿಂದಲೂ ರಾಷ್ಟ್ರ ಭಕ್ತ ಸಮಾಜವಾಗಿ ಗಟ್ಟಿ ಸಮಾಜ ಗುರುತಿಸಿಕೊಂಡಿದೆ. ಇದರೊಂದಿಗೆ ಸಂಪ್ರದಾಯವ, ಕಟ್ಟುಕಟ್ಟಲೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮತ್ತು ಸೇವಾ ಟ್ರಸ್ಟ್ನ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಜ್ಯೋತಿ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಟ್ಟಿ ಸಮಾಜದ ಮೇಲ್ಡರಾದ ನಾರಾಯಣ ಬಿ. ಗಟ್ಟಿ ತೊಕ್ಕೊಟ್ಟು ಓವರ್ ಬ್ರಿಡ್ಜ್, ನಾಯ್ಗ ರ ಪ್ರತಿನಿಧಿ ಪದ್ಮನಾಭ ಗಟ್ಟಿ ಕಟ್ಟಪುಣಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಟ್ಟಿ ಸಮಾಜವನ್ನು ಪ್ರವರ್ಗ ಒಂದಕ್ಕೆ ಸೇರ್ಪಡೆ ಮತ್ತು ಗಟ್ಟಿ ಸಮಾಜದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಕ್ರೀಡಾಂಗಣಕ್ಕೆ ಸರಕಾರಿ ಜಾಗ ಮಂಜೂರು ಮಾಡುವಂತೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಗಟ್ಟಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಮತ್ತು ಹಿರಿಯರಾದ ನಾರಾಯಣ ಬಿ. ಗಟ್ಟಿ ಮೇಲ್ಡರು, ಬಿ. ದೇವಪ್ಪ ಗಟ್ಟಿ ಕಟ್ಟಪುಣಿ, ಸುಭದ್ರ ಗಟ್ಟಿ ಪಾಂಡೇಶ್ವರ, ಪಿ. ಕೃಷ್ಣ ಗಟ್ಟಿ ಸೋಮೇಶ್ವರ, ಕೊರಂತೋಡಿ ರುಕ್ಮಯ ಗಟ್ಟಿ, ದಿನೇಶ್ ಗಟ್ಟಿ ಅವರ ಪರವಾಗಿ ಗುಲಾಬಿ ಗಟ್ಟಿ ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನಾಯ್ಗರಾಗಿ ಸೇವೆ ಸಲ್ಲಿಸಿದ್ದ ದಿ.
ಸಂಚಾಲಕಿ ಮಮತಾ ಡಿ.ಎಸ್. ಗಟ್ಟಿ ಸ್ವಾಗತಿಸಿದರು. ಜಿ. ಪಂ. ಸದಸ್ಯೆ ಧನಲಕ್ಷ್ಮಿ ಗಟ್ಟಿ, ಸೀತಾರಾಮ ಗಟ್ಟಿ ಪಡೀಲ್ ಕಾರ್ಯಕ್ರಮ ನಿರ್ವಹಿಸಿದರು ಕೃಷ್ಣಪ್ಪ ಗಟ್ಟಿ ಅಡ್ಕ , ಸುನಿತಾ ಗಟ್ಟಿ , ನೀತಾ ಕಿರಣ್ ಗಟ್ಟಿ ಸನ್ಮಾನಿಸತರ ವಿವರ ನೀಡಿದರು. ಪ್ರ. ಕಾರ್ಯದರ್ಶಿ ನಿತಿನ್ ಗಟ್ಟಿ ಲೇಡಿಹಿಲ್ ವಂದಿಸಿದರು.