ಇಂದು ನಿನ್ನದು, ನಾಳೆ ಇನ್ಯಾರದ್ದೊ….
Team Udayavani, Apr 30, 2018, 3:49 PM IST
ಅಧಿಕಾರ ಎನ್ನುವುದು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಸಿಕ್ಕೇ ಸಿಗುತ್ತದೆ. ಅದು ವೃತ್ತಿ ಅಥವಾ ವಯಕ್ತಿಕ ಬದುಕಾಗಿರಬಹುದು. ಪ್ರತಿಯೊಬ್ಬ ವ್ಯಕ್ತಿಯು ತಾನಿರುವ ಸ್ಥಾನ- ಮಾನದಿಂದ ಇತರರ ಮೇಲೆ ಚಲಾಯಿಸುವ ಅಸ್ತ್ರವಿದು. ಅಧಿಕಾರ ಚಲಾಯಿಸುವ ವೇಳೆ ಅದರ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳ ಬಗ್ಗೆ ಮೊದಲೇ ಚಿಂತನೆ ನಡೆಸುವುದು ಅಧಿಕಾರಿಯ ಜವಾಬ್ದಾರಿ. ಉತ್ತಮ ಅಧಿಕಾರಿಯಾದರೆ ಸಮಾಜಕ್ಕೆ ಮಾದರಿಯಾಗಬಹುದು; ಇಲ್ಲವಾದರೇ ಎಲ್ಲರ ಅಪವಾದಕ್ಕೆ ಗುರಿಯಾಗಬೇಕಾಗುವುದು.
ಮನೆಯಲ್ಲಿ ಗಂಡ- ಹೆಂಡತಿ ಪರಸ್ಪರ ಅಥ ವಾ ಮಕ್ಕಳ ಮೇಲೆ, ಇನ್ನು ಕಚೇರಿಗಳಲ್ಲಿ ಹಿರಿಯ ಅಧಿಕಾರಿ ತನ್ನ ಕೈ ಕೆಳಗಿರುವ ಸಿಬಂದಿ ಮೇಲೆ ಮಾತು, ಕೃತಿಯ ಮೂಲಕ ಹಕ್ಕು ಚಲಾವಣೆ ಮಾಡುತ್ತಾರೆ. ಒಂದು ರೀತಿಯಲ್ಲಿ ಇದು ಕೂಡ ಅವರವರಿಗೆ ಇರುವ ಅಧಿಕಾರವೇ ಆಗಿರುತ್ತದೆ. ಅಧಿಕಾರದೊಳಗೆ ಅನ್ಯರ ಮೇಲೆ ದಬ್ಟಾಳಿಕೆ ಮಾಡುವುದು, ಒತ್ತಡ ತರುವುದು, ತನ್ನ ಮಾತು, ಕೃತಿಯೇ ಸರಿಯೆಂದು ವಾದಿಸುವುದು, ತಾಕೀತು ಮಾಡುವುದು, ಅದು ನಡೆಯದಿದ್ದರೆ ಕೋಪ, ತಾಪ, ಅಸಹನೆ, ಆಕ್ರೋಶ ವ್ಯಕ್ತಪಡಿಸುದು ಕೂಡ ಸೇರಿರುತ್ತದೆ.
ಅಧಿಕಾರವೆಂಬುದು ಆಳ್ವಿಕಾ ಪದ್ಧತಿಯೊಳಗಿರುತ್ತದೆ. ಇದರಲ್ಲಿ ಸ್ವಯಂ ಪ್ರಭುತ್ವ , ಪ್ರಜಾಪ್ರಭುತ್ವ, ಗುಲಾಮಗಿರಿ ಎಂಬ ಮೂರು ವಿಧಗಳಿರುತ್ತವೆ.ಅಧಿಕಾರಿಯಾದವರು ಆಳ್ವಿಕೆಯನ್ನು ತನ್ನಿಚ್ಛೆಯಂತೆ ಆಯ್ದು ಅನುಸರಿಸುವವನಾಗಿರುತ್ತಾನೆ.
ಅಹಂ ಬೆಳೆಯದಿರಲಿ
ಎಷ್ಟೋ ಬಾರಿ ವ್ಯಕ್ತಿಯೊಬ್ಬನಿಗೆ ಅಧಿಕಾರ ಕೈಗೆ ಸಿಕ್ಕಿದ ಕೂಡಲೇ ಅಹಂ ಭಾವ ಬೆಳೆದು ಬಿಡುತ್ತದೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಕೈ ಚಾಚುತ್ತಾನೆ. ಇನ್ನೊಬ್ಬರ ಸ್ವಾತಂತ್ರ್ಯವನ್ನು ಬಾಚುತ್ತಾನೆ. ಇನ್ನು ಕೆಲವರು ಮಾತ್ರ ತಮ್ಮ ಕೈ ಕೆಳಗಿನವರಲ್ಲಿ ಪ್ರೀತಿ, ಸೌಜನ್ಯ, ಸಹೃದಯತೆಯಿಂದ ವರ್ತಿಸುತ್ತಾರೆ. ಇದಕ್ಕೆ ಕಾರಣ ಒಳ್ಳೆಯತನದಿಂದ ಕೂಡಿದ್ದರೆ ತಮ್ಮನ್ನು ಇತರರು ಮೆಚ್ಚುತ್ತಾರೆಂಬ ಭಯ, ಅಂತರ ಕಾಪಾಡಿಕೊಳ್ಳುವುದು, ಬಾಸ್ ಈಸ್ ಆಲ್ವೇಸ್ ಬಾಸ್ ಎಂಬ ವಿಚಾರಕ್ಕೆ ಬದ್ಧವಾಗಿರುವುದು, ಗದರಿಸಿ ಬೆದರಿಸಿದರೆ ಕೆಲಸವಾಗುತ್ತದೆಯೆಂಬ ಮೌಡ್ಯತೆ.
ಪ್ರತಿಯೊಂದು ಅಧಿಕಾರದಲ್ಲೂ ಇತಿ- ಮಿತಿಗಳಿರುತ್ತವೆ. ಇದನ್ನು ಅರಿತಿದ್ದರೆ ಎಲ್ಲವೂ ಚೆನ್ನ ಮಿತಿ ಮೀರಿದರೆ ನೌಕರ ವರ್ಗಕ್ಕೆ ಧರ್ಮ ಸಂಕಟ. ಮೊದಮೊದಲು ಎಲ್ಲವೂ ಸರಿ ಸರಿ ಎಂದು ಹೇಳುವವರೇ ತಡೆದುಕೊಂಡ ನೋವು ಒಂದಲ್ಲ ಒಂದು ಸಂದರ್ಭದಲ್ಲಿ ಬೆಂಕಿಯಾಗಿ ಹೊರಬೀಳು ತ್ತದೆ. ಇದು ಮೇಲಧಿಕಾರಿಗಳು ಹಾಗೂ ನೌಕರ ವರ್ಗದ ನಡುವಿನ ಘರ್ಷಣೆಗಳಿಗೂ ಕಾರಣವಾಗುವುದಿದೆ.
ಇನ್ನು ಅಧಿಕಾರದಲ್ಲಿವಾಗ ದರ್ಪ ತೋರಿದವರು ಅಧಿಕಾರವಧಿ ಮುಗಿದ ಬಳಿಕವೂ ನೌಕರಿಯಲ್ಲಿ ಮುಂದುವರಿಯುವುದು ಕಷ್ಟವಾಗಬಹುದು. ಹೀಗಾಗಿ ಅಧಿಕಾರ ಚಲಾಯಿಸುವಾಗ ಪ್ರತಿಯೊಂದು ಕ್ಷಣವೂ ಈ ಅಧಿಕಾರ ನನ್ನದಲ್ಲ- ನನ್ನ ನಾಳೆಯ ಬದುಕು ಹೇಗಿರಬಹುದು? ಎಂಬ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಮುನ್ನಡೆಯಬೇಕು. ಆಗ ಮಾತ್ರ ಅಧಿಕಾರ ಪಡೆದ ವ್ಯಕ್ತಿ ಸಮಾಜಕ್ಕೆ ಮಾದರಿಯಾಗಲು, ಎಲ್ಲರಿಂದಲೂ ಗೌರವ, ಮನ್ನಣೆ ಪಡೆಯಲು ಸಾಧ್ಯವಿದೆ. ನಿನ್ನೆ ಯಾರಧ್ದೋ ಆಗಿದ್ದು, ಇಂದು ನಿನ್ನದಾಗಿದೆ, ನಾಳೆ ಮತ್ಯಾರಧ್ದೋ ಆಗಲಿದೆ… ಎಂಬಂತೆ ಬದುಕಿದರೆ ಪ್ರತಿಯೊಬ್ಬರೂ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.
ವ. ಉಮೇಶ ಕಾರಂತ , ಮಂಗಳೂರು