‘ಮೆಟ್ರೋದಿಂದ ಜನಜೀವನ ಸುಗಮ’
Team Udayavani, Jan 30, 2019, 5:50 AM IST
ಮಹಾನಗರ: ಮೆಟ್ರೋ ಸಂಚಾರ ವ್ಯವಸ್ಥೆ ಆರಂಭವಾದ ಬಳಿಕ ದೇಶ-ವಿದೇಶದ ಹಲವು ನಗರದ ಜೀವನ ಮಟ್ಟ ಬಹಳಷ್ಟು ಸುಧಾರಣೆ ಕಂಡಿದೆ ಎಂದು ದೆಹಲಿ ಟ್ರಾನ್ಸಿಟ್ ಡಿಸೈನ್ನ ಕಾರ್ಯಕಾರಿ ನಿರ್ದೇಶಕ, ಸಾರಿಗೆ ತಜ್ಞ ಸುಶಿಲ್ ವರ್ಮ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರ ವತಿಯಿಂದ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ‘ಸಾರಿಗೆ ಆಧಾರಿತ ಅಭಿವೃದ್ಧಿ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೊಸದಿಲ್ಲಿಯಲ್ಲಿ ಮೆಟ್ರೋ ಬಂದ ಬಳಿಕ ಬದಲಾವಣೆ ಬಹಳಷ್ಟು ನಡೆದಿದೆ. ಇಲ್ಲಿ ಎರಡನೇ ಹಂತದ ನಗರಗಳಿಗೆ ಮೆಟ್ರೋ ವಿಸ್ತರಣೆ ಆದ ಬಳಿಕ ಅಲ್ಲಿನ ನಗರಗಳು ಅಭಿವೃದ್ಧಿ ಕಂಡಿವೆ. ರಿಯಲ್ ಎಸ್ಟೇಟ್ ಮಾರುಕಟ್ಟೆ ಕ್ಷಿಪ್ರವಾಗಿ ಬೆಳೆದಿದೆ. ಮೆಟ್ರೋ ವ್ಯವಸ್ಥೆ ಹಲವರಿಗೆ ಲಾಭವಾದರೂ ಅದನ್ನು ಬಳಸಿಕೊಳ್ಳಲು ಮೆಟ್ರೋ ವ್ಯವಸ್ಥೆಗೆ ಸಾಧ್ಯ ವಾಗಲಿಲ್ಲ. ಇಂತಹ ತಪ್ಪನ್ನು ಬೇರೆ ನಗರ ಪುನರಾವರ್ತಿಸಬಾರದು ಎಂದರು.
ಮೆಟ್ರೋ ವ್ಯವಸ್ಥೆಯಲ್ಲಿ ನಿಲ್ದಾಣಗಳಿಗೆ ಕನಿಷ್ಠ ಪ್ರವೇಶ ದ್ವಾರಗಳನ್ನು ರೂಪಿಸುವ ಬದಲು ಹಾಂಕಾಂಗ್, ಬ್ಯಾಂಕಾಕ್ ಮಾದರಿಯಲ್ಲಿ ಬಹುಪ್ರವೇಶ ದ್ವಾರಗಳನ್ನು, ಪ್ರಯಾಣಿಕರ ಕಾಲುದಾರಿಗಳನ್ನು ನಿರ್ಮಿ ಸುವ ಮೂಲಕ ಸಂಪರ್ಕ ಕಲ್ಪಿಸಿದರೆ ಸೂಕ್ತ, ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಭಿವೃದ್ಧಿಗೆ ಉತ್ತಮ ಅವಕಾಶ
ವಿಚಾರಸಂಕಿರಣವನ್ನು ನಿಟ್ಟೆ ಎಂಜಿನಿಯರಿಂಗ್ ಕಾಲೇಜ್ ನಿವೃತ್ತ ಡೀನ್ ಪ್ರೊ| ಜಿ.ಆರ್. ರೈ ಉದ್ಘಾಟಿಸಿದರು. ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿರುವ ಮಂಗಳೂರಿ ನಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿಗೆ ಉತ್ತಮ ಅವಕಾಶವಿದೆ. ಇಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ಹೀಗಾಗಿ ಇಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ ಎಂದರು.
ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಜೀರ್, ಮುಡಾ ಆಯುಕ್ತ ಶ್ರೀಕಾಂತ್ ರಾವ್ ಮಾತನಾಡಿದರು. ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸ್ವಾಗತಿಸಿದರು.
ವಿಜಯ ವಿಷ್ಣು ಮಯ್ಯ ನಿರೂಪಿಸಿದರು. ಕನ್ಸೆಲ್ಟಿಂಗ್ ಸಿವಿಲ್ ಎಂಜಿನಿಯರ್ ಅಸೋ ಸಿಯೇಶನ್ ಮಂಗಳೂರು ಕೇಂದ್ರದ ಅಧ್ಯಕ್ಷ ಅನಿಲ್ ಸೆಬಾಸ್ಟಿಯನ್ ಡಿ’ಸೋಜಾ ಅವರು ವಂದಿಸಿದರು.