ಸ್ವಚ್ಛ , ಸುಂದರ ನಗರ ದೃಷ್ಟಿಕೋನ
Team Udayavani, Dec 29, 2017, 10:31 AM IST
ಮಹಾನಗರ: ಮಂಗಳೂರು ಮಹಾನಗರವನ್ನು ಸ್ವಚ್ಛ, ಸುಂದರನ್ನಾಗಿ ಮಾಡುವುದರ ಅಂಗವಾಗಿ ಮಹಾನಗರ ಪಾಲಿಕೆಯು ಗುರುವಾರ ಸಾರ್ವಜನಿಕ ರಸ್ತೆಗಳಲ್ಲಿರುವ ಅನಧಿಕೃತ ಫಲಕ/ಕಟೌಟ್, ಫ್ಲೆಕ್ಸ್ ಬ್ಯಾನರ್ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ನಗರದ ಹಂಪನಕಟ್ಟೆ ಸಿಗ್ನಲ್ ವೃತ್ತ, ಪುರಭವನ, ಆರ್ಟಿಒ ಕಚೇರಿ, ಲೇಡಿಹಿಲ್, ಲಾಲ್ಬಾಗ್, ಬಲ್ಲಾಳ್ ಬಾಗ್, ಪಿವಿಎಸ್ ಜಂಕ್ಷನ್ ಮತ್ತಿತರ ಕಡೆಗಳಲ್ಲಿ ಇದ್ದ ಫ್ಲೆಕ್ಸ್, ಬ್ಯಾನರ್ಗಳನ್ನುತೆರವು ಮಾಡಲಾಯಿತು. ಮನಪಾ ಕಮಿಷನರ್ ಮಹಮದ್ ನಝೀರ್, ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರ, ಟ್ರಾಫಿಕ್ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರ್ಯಾಚರಣೆ ಮುಂದುವರಿಕೆ
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯದ ಅಧಿಸೂಚನೆ ಅನ್ವಯ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು. ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವಾಲಯದ ಅಧಿಸೂಚನೆ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಫ್ಲೆಕ್ಸ್/ ಬ್ಯಾನರ್ / ಕಟೌಟ್ / ಬಂಟಿಂಗ್ಸ್ / ಪೋಸ್ಟರ್ ಗಳನ್ನು ಅಳವಡಿಸಲು ಅವಕಾಶವಿಲ್ಲ. ಆದರೆ ಕೆಲವು ಕಾರ್ಯಕ್ರಮ ಸಂಘಟಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಿನೆಮಾ ಪ್ರಚಾರಕರು, ಸಾಮಾಜಿಕ, ಧಾರ್ಮಿಕ, ರಾಜಕೀಯ, ವ್ಯಾಪಾರಕ್ಕೆ ಸಂಬಂಧಿಸಿದ ಕಟೌಟ್, ಬ್ಯಾನರ್, ಪೋಸ್ಟರ್ಗಳನ್ನು ಮತ್ತೆ ಮತ್ತೆ ಪಾಲಿಕೆ ವ್ಯಾಪ್ತಿಯಲ್ಲಿ ಹಾಕುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ತೆರವು ಮಾಡಲಾಯಿತು. ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವುಗಳನ್ನು ಪಾಲಿಕೆ
ವ್ಯಾಪ್ತಿಯಲ್ಲಿ ಹಾಕದಂತೆ ಪಾಲಿಕೆಯ ಅಧಿಕಾರಿಗಳು ಕೋರಿದ್ದಾರೆ.
ಕಾನೂನು ಕ್ರಮ
ಸಚಿವಾಲಯದ ಆದೇಶದ ಹೊರತಾಗಿಯೂ ಕಟೌಟ್, ಫ್ಲೆಕ್ಸ್, ಬ್ಯಾನರ್, ಪೋಸ್ಟರ್, ಬಂಟಿಂಗ್ಸ್ ಗಳನ್ನು ಹಾಕುತ್ತಿರುವುದು ಕಾನೂನು ಬಾಹಿರವಾಗಿದ್ದು, ಸಂಬಂಧಪಟ್ಟವರು ಅವುಗಳನ್ನು ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ವಿಧಿಸಿ ಕ್ರಿಮಿನಲ್ ಕೇಸು ದಾಖಲಿಸಲಾಗುವುದು. ಬಟ್ಟೆ ಬ್ಯಾನರ್ ಗಳಿಗೆ ಮಾತ್ರ ಪಾಲಿಕೆಯಲ್ಲಿ ಅನುಮತಿಯನ್ನು ನೀಡಲಾಗುತ್ತಿದ್ದು, ಬಟ್ಟೆ ಬ್ಯಾನರ್ ಗಳಿಗೆ ಪಾಲಿಕೆಯಿಂದ ಅನುಮತಿ ಪಡಕೊಂಡು ಅಳವಡಿಸಲು ಅಧಿಕಾರಿಗಳು ತಿಳಿಸಿದ್ದಾರೆ.