ಸ್ಥಳೀಯಾಡಳಿತ ಕುರಿತು ಅತೃಪ್ತಿ
Team Udayavani, May 5, 2018, 3:00 PM IST
ಬಂಟ್ವಾಳ: ಚುನಾವಣೆ ದಿನ ಸಮೀಪಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರ ಭಿನ್ನಕೋನಗಳ ಮೂಲಕ ಯೋಚಿಸುತ್ತಿದ್ದಾರೆ. ಮತದಾನ ಮಾಡುವ ಮನಸ್ಸಿದ್ದರೂ ಕೆಲವೆಡೆ ಗ್ರಾ.ಪಂ.ಗಳ ಆಡಳಿತ ಮಂಡಳಿ ಕುರಿತು ಅಸಮಾಧಾನವಿದೆ. ನಾವು ಮೋದಿ- ಸಿದ್ದರಾಮಯ್ಯ ಅವರಿಗಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಕ್ಷೇತ್ರದ ಉಳಿ, ಮಣಿನಾಲ್ಕೂರು, ಬಡಗಕಜೆಕಾರು, ಪಿಲಾತಬೆಟ್ಟು, ಕಾವಳಮೂಡೂರು, ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಉದಯವಾಣಿ ತಂಡ ಜನರಿಂದ ಅಭಿಪ್ರಾಯ ಸಂಗ್ರಹಿಸಿತು. ಇದು ದೊಡ್ಡ ಚುನಾವಣೆ, ಇಲ್ಲಿ ಗೆದ್ದವರಿಗೆ ನಮ್ಮ ಸಮಸ್ಯೆ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ಸ್ಥಳೀಯವಾಗಿ ಗೆದ್ದವರು ಸಮಸ್ಯೆ ಪರಿಹರಿಸುತ್ತಿಲ್ಲ ಎಂಬ ಆಕ್ರೋಶವಿದೆ.
ಉಳಿ ಗ್ರಾ.ಪಂ. ವ್ಯಾಪ್ತಿಯ ಕಕ್ಕೆಪದವು ಪ್ರದೇಶದಲ್ಲಿ ಪ್ರಾ. ಆರೋಗ್ಯ ಕೇಂದ್ರ ಬೇಕು ಎನ್ನುವುದು ಜನರ ಪ್ರಮುಖ ಬೇಡಿಕೆ. ಆಸ್ಪತ್ರೆಯ ಇದ್ದರೂ ವೈದ್ಯರು ಇಲ್ಲ ಎಂಬ ನೋವು. ಆರೋಗ್ಯದಲ್ಲಿ ಸಣ್ಣ ಏರುಪೇರುಗಳು ಕಂಡುಬಂದರೂ ಮಂಗಳೂರಿಗೆ ತೆರಳಬೇಕಿದೆ. ಬಿಜೆಪಿ-ಕಾಂಗ್ರೆಸ್ ಪ್ರಚಾರ ಕಾರ್ಯ ನಡೆಸುತ್ತಿದೆ, ಮೂರನೇ ಅಭ್ಯರ್ಥಿಗಳು ಬಂದಿಲ್ಲ ಎಂಬ ಮಾತು ಕೇಳಿಬಂದಿದೆ.
ಅಬ್ಬರ ಕಾಣುತ್ತಿಲ್ಲ
ಕಾಂಗ್ರೆಸ್ – ಬಿಜೆಪಿಗಳಿಂದ ಪ್ರಚಾರ, ಸಭೆಗಳು ನಡೆಯುತ್ತಿವೆ. ಅಬ್ಬರವೇನೂ ಕಾಣುತ್ತಿಲ್ಲ. ಪಿಲಾತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಪುಂಜಾಲಕಟ್ಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಪೇಟೆಯು ಬಂಟ್ವಾಳ, ಬೆಳ್ತಂಗಡಿ ಕ್ಷೇತ್ರಗಳಿಗೆ ಹಂಚಿ ಹೋಗಿರುವುದು ವಿಶೇಷ ಎನ್ನುತ್ತಾರೆ ಮಜಲೋಡಿಯ ರಮೇಶ್ ಶೆಟ್ಟಿ.
ಬೇಡಿಕೆ ಈಡೇರಿದೆ
ಜನರು ಓಟಿನ ಬಗ್ಗೆ ಮಾತನಾಡುವುದು ಕಡಿಮೆ. ರಾಜಕೀಯದವರು ಪ್ರಚಾರ ಮಾಡುತ್ತಾರೆ. ಅಭಿವೃದ್ಧಿಯ ಕುರಿತು ನಮ್ಮ ಬೇಡಿಕೆ ಈಡೇರಿದೆ ಎನ್ನುತ್ತಾರೆ ಕಾವಳ ಕಟ್ಟೆಯ ಸೈಯದ್ ಸರ್ಪರಾಜ್.
ಕಕ್ಕೆಪದವು ಪ್ರದೇಶದಲ್ಲಿ ಸರಕಾರಿ ಆರೋಗ್ಯ ಕೇಂದ್ರ, ಸಾರ್ವಜನಿಕ ಶೌಚಾಲಯ ಬೇಕು ಎಂಬುದು ಪ್ರಮುಖ ಬೇಡಿಕೆ ಎನ್ನುತ್ತಾರೆ ಕಕ್ಕೆಪದವಿನ ಅಬ್ದುಲ್ ಖಾದರ್ ಹಾಗೂ ಪ್ರಶಾಂತ್.
ಕಿರಣ್ ಸರಪಾಡಿ