ನಿರ್ಗತಿಕರು, ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಶ್ರದ್ಧಾಕೇಂದ್ರಗಳು
ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರವಿಲ್ಲದೆ ಪರದಾಟ
Team Udayavani, Apr 4, 2020, 11:51 AM IST
ಮಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಧಾರ್ಮಿಕ ದತ್ತಿ ಇಲಾಖೆಯ ಎ ದರ್ಜೆಯ ಆಯ್ದ 7 ದೇವಸ್ಥಾನಗಳಿಂದ ಊಟ-ಉಪಾಹಾರ ವಿತರಿಸಲಾಗುತ್ತಿದೆ. ಪ್ರತೀ ದಿನ ಸುಮಾರು 15,000ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಜಿಲ್ಲೆಯ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ, ಕಾಟಿಪಳ್ಳ ಶ್ರೀ ಗಣೇಶಪುರ ದೇವಸ್ಥಾನ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಸೋಮೇ ಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ದಿನಂಪ್ರತಿ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರತೀ ಕ್ಷೇತ್ರದಲ್ಲಿಯೂ ಆಹಾರ ತಯಾ ರಿಕೆ, ವಿತರಣೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಆಹಾರ ತಯಾರಿ ಮತ್ತು ಸರಬರಾಜಿನಲ್ಲಿ ತೊಡಗಿದ್ದಾರೆ. ಪ್ರತೀ ದಿನ ಮಧ್ಯಾಹ್ನ, ರಾತ್ರಿ ಬೆಳ್ತಿಗೆ ಅಕ್ಕಿಯ ಅನ್ನ, ಸಾಂಬಾರು ಅಥವಾ ಸಾರು ನೀಡಲಾಗುತ್ತಿದೆ. ಕೆಲವೆಡೆ ಬೆಳಗ್ಗಿನ ಉಪಹಾರವನ್ನೂ ವಿತರಿಸಲಾಗುತ್ತಿದೆ.
ಮಂಗಳೂರು ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಒಳಗಾದ ಮಂದಿಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಪ್ರತೀ ದಿನ ಆಹಾರ ವಿತರಿಸಲಾಗುತ್ತಿದೆ. ಕದ್ರಿಯ ಕ್ಷೇತ್ರದ ಪಾಕಶಾಲೆಯಲ್ಲಿ ಬೆಳಗ್ಗೆ ಸುಮಾರು 6 ಗಂಟೆಯ ಹೊತ್ತಿಗೆ ಅಡುಗೆ ಆರಂಭಗೊಂಡರೆ ರಾತ್ರಿ 10 ಗಂಟೆಯ ವರೆಗೂ ನಡೆಯುತ್ತದೆ. ಅಡುಗೆ ತಯಾರಿಗಾಗಿ ಸ್ವಯಂಸೇವಕರಿದ್ದು, ಸುಮಾರು ಐವರು ಪಾಕ ತಜ್ಞರು ಸಹಾಯ ಮಾಡುತ್ತಿದ್ದಾರೆ.
ಇತರ ಕ್ಷೇತ್ರಗಳಿಂದಲೂ ಊಟ-ಉಪಾಹಾರ
ಇಲಾಖೆಯ ವ್ಯಾಪ್ತಿಗೆ ಒಳಪಡದ ಕೆಲವು ದೇವಸ್ಥಾನಗಳಿಂದಲೂ ಪ್ರತೀ ದಿನ ಊಟ ವಿತರಣೆ ನಡೆಯುತ್ತಿದೆ. ಸಂಕಷ್ಟಕ್ಕೆ ಒಳಗಾದ ನೂರಾರು ಮಂದಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕಡೆಯಿಂದಲೂ ಅನ್ನದಾನ ನೀಡಲಾಗುತ್ತಿದೆ. ಪ್ರತೀ ದಿನ ಬೆಳ್ತಿಗೆ, ಕುಚ್ಚಲಕ್ಕಿ ಅನ್ನ, ಸಾರು/ ಸಾಂಬಾರು, ಚಟ್ನಿ ನೀಡಲಾಗುತ್ತಿದೆ. ನಗರದ ವಿವಿಧ ಭಾಗಗಳ ಸುಮಾರು 700ಕ್ಕೂ ಹೆಚ್ಚು ಮಂದಿ ನಿರ್ಗತಿಕರಿಗೆ ಊಟ ವಿತರಣೆ ಮಾಡಲಾಗುತ್ತಿದ್ದು, ಕಲ್ಪ ಟ್ರಸ್ಟ್ ಸಾಥ್ ನೀಡುತ್ತಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರಾಶ್ರಿತರಾದವರಿಗೆ, ನಿರ್ಗತಿಕರಿಗೆ ಹಾಗೂ ಅಸಹಾಯಕರಿಗೆ ಹಲವು ಸಂಘ ಸಂಸ್ಥೆ, ಸಮಾಜಮುಖೀ ಸಂಸ್ಥೆಗಳು ನೆರವಾಗುತ್ತಿದ್ದಾರೆ. ಸಂಕಷ್ಟಕ್ಕೆ ಒಳಗಾ ದವರಿಗೆ ವಿವಿಧ ಸಾಮಗ್ರಿಗಳನ್ನು ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಗೆ ಸಾಕ್ಷಿಯಾಗಿದ್ದು, ಕೆಲವು ಹಳ್ಳಿಗಳಲ್ಲಿ ಸ್ಥಳೀಯವಾಗಿ ಆಹಾರ ಸಾಮಗ್ರಿಗಳನ್ನು ಹಂಚಲಾಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತಕ್ಕೆ ನೇರವಾಗಿ ಆಹಾರ ಸಾಮಗ್ರಿ ತಲುಪಿಸಿ ಸರಕಾರದ ಉಸ್ತುವಾರಿಯಲ್ಲಿ ಹಂಚಲಾಗುತ್ತಿದೆ. ಮುಖ್ಯ ವಾಗಿ ಸ್ವತ್ಛತೆಗೆ ಆದ್ಯತೆ ನೀಡಬೇಕಿರುವುದರಿಂದ ಸರಕಾರವು ತನ್ನ ಉಸ್ತುವಾರಿ ಯಲ್ಲಿ ಊಟ, ತಿಂಡಿ ವಿತರಿಸುತ್ತಿದೆ. ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಸರಕಾರ ನಿಗದಿ ಪಡಿಸಿದ ತಾಣಗಳಿಗೆ ತಮ್ಮ ಕಡೆಯಿಂದ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಎಲ್ಲ ಧರ್ಮ, ಸಮುದಾಯ, ಪಂಗಡಗಳೂ ಇದರಲ್ಲಿ ಕೈ ಜೋಡಿಸುತ್ತಿವೆ.
ಕದ್ರಿ ಕ್ಷೇತ್ರದಿಂದ 10 ಸಾವಿರ
ಮಂದಿಗೆ ಊಟೋಪಹಾರ
ಶ್ರೀ ಕ್ಷೇತ್ರ ಕದ್ರಿಯಿಂದ ಪ್ರತೀ ದಿನ ಸುಮಾರು 10 ಸಾವಿರ ಮಂದಿ ಊಟೋಪಹಾರ ಪಡೆಯುತ್ತಿದ್ದಾರೆ. ಬೆಳಗ್ಗೆ ಉಪ್ಪಿಟ್ಟು, ಅವಲಕ್ಕಿ, ಟೊಮೇಟೊ ಬಾತ್, ಕಾಫಿ-ಚಹಾ ಇರುತ್ತದೆ. ಮಧ್ಯಾಹ್ನ ಅನ್ನ, ಸಾಂಬಾರು/ಸಾರು ಇರುತ್ತದೆ. ರಾತ್ರಿ ವೇಳೆಯೂ ಭೋಜನ ಒದಗಿಸಲಾಗುತ್ತಿದೆ. ಸ್ವಯಂಸೇವಕ ತಂಡಗಳು ಆಹಾರ ತಯಾರಿ, ವಿತರಣೆಯಲ್ಲಿ ನೆರವಾಗುತ್ತಿವೆ.
ಪ್ರದೇಶವಾರು ಹಂಚಿಕೆ
ಲಾಕ್ಡೌನ್ ಇರುವ ಕಾರಣದಿಂದ ಬಹಳಷ್ಟು ನಿರ್ಗತಿಕರು, ಕೂಲಿ ಕಾರ್ಮಿಕರು ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಇವರಿಗೆ ನೆರವಾಗಿ ಧಾರ್ಮಿಕ ದತ್ತಿ ಇಲಾಖೆಯ ಆಯ್ದ “ಎ’ ದರ್ಜೆ ದೇವಸ್ಥಾನಗಳಿಂದ ಉಪಾಹಾರ ಮತ್ತು ಊಟ ಸಿದ್ಧಪಡಿಸಿ, ಪ್ರದೇಶವಾರು ಹಂಚಲಾಗುತ್ತಿದೆ.
- ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವ
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದಿಂದ ಆಹಾರ ಕಿಟ್
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ 500 ಮಂದಿಗೆ ಈಗಾಗಲೇ ಆಹಾರದ ಕಿಟ್ ವಿತರಣೆ ಮಾಡಲಾಗಿದೆ. ಇದರಲ್ಲಿ ಅಕ್ಕಿ, ಬೇಳೆ, ಮೆಣಸು ಸೇರಿದಂತೆ ವಿವಿಧ ಸಾಮಗ್ರಿಗಳು ಇದೆ. ಇದು ಒಂದು ವಾರಕ್ಕೆ ಅಗತ್ಯ ವಸ್ತುಗಳನ್ನು ಹೊಂದಿದ್ದು, ವಾರದ ಬಳಿಕ ಮತ್ತೂಮ್ಮೆ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಎಂ.ಜೆ. ರೂಪಾ ತಿಳಿಸಿದ್ದಾರೆ.
– ನವೀನ್ ಭಟ್ ಇಳಂತಿಲ