ಕೋವಿಡ್ ನೆಪದಲ್ಲಿ 2 ಸಾವಿರ ಕೋಟಿ ಲೂಟಿ
ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಆರೋಪ; ಬಿಜೆಪಿ ನೋಟಿಸ್ಗೆ ತಕ್ಕ ಉತ್ತರ ನೀಡುತ್ತೇವೆ
Team Udayavani, Aug 4, 2020, 2:51 PM IST
ದಾವಣಗೆರೆ: ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ನಿರ್ವಹಣೆ ನೆಪದಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಲೂಟಿ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದರು. ಕೊರೊನಾ ನಿರ್ವಹಣೆಗೆ 4,167 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ ಒಬ್ಬ ಸಚಿವರು 324 ಕೋಟಿ, ಇನ್ನೊಬ್ಬರು 780 ಕೋಟಿ ಎನ್ನುತ್ತಿದ್ದಾರೆ. ಸರ್ಕಾರ 2,128 ಕೋಟಿ ರೂ.ಗಳ ಲೆಕ್ಕ ನೀಡಿದೆ. ಹಾಗಾದರೆ ಕೋವಿಡ್ ನಿರ್ವಹಣೆಗೆ ಮಾಡಿದ ನಿಜವಾದ ವೆಚ್ಚ ಎಷ್ಟು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಕೋವಿಡ್ ನಿರ್ವಹಣೆ ಹೆಸರಿನಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಲೂಟಿ ಮಾಡಿರುವ ಬಗ್ಗೆ ರಾಜ್ಯ ಉತ್ಛ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ಶ್ವೇತಪತ್ರ ಹೊರಡಿಸಬೇಕು. ಇಲ್ಲವಾದರೆ ಬೂತ್ ಹಂತದಿಂದಲೂ ರಾಜ್ಯದಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ಪ್ರತಿಪಕ್ಷದ ಕಾರ್ಯ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೆಚ್ಚದ ಬಗ್ಗೆ ಪ್ರಶ್ನೆ ಮಾಡಿರುವ ಕಾರಣಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿ ನೋಟಿಸ್ ಕಳಿಸಿರುವುದಕ್ಕೆ ಉತ್ತರಿಸಲು ನಾವು ಸಿದ್ಧರಿದ್ದೇವೆ. ಸರ್ಕಾರ ಮೊದಲು ನ್ಯಾಯಿಕ ತನಿಖೆಗೆ ಮುಂದಾಗಲಿ. ಬೇಕಾದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರದ ವಿಷಯಗಳ ಬಗ್ಗೆಯೂ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಜನರು ಕೋವಿಡ್ ಕಷ್ಟದಿಂದ ಕಂಗಾಲಾಗಿದ್ದಾರೆ. ಬದುಕು ಕಷ್ಟವಾಗಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಅವ್ಯವಹಾರ ಹಾಗೂ ಲಂಚ ನಡೆದಿರುವುದು ಸಾಬೀತಾಗಿದೆ. ರಾಜ್ಯ ಸರ್ಕಾರಕ್ಕೆ ಜನರ ರಕ್ಷಣೆಗಿಂತ ಹಣವೇ ಮುಖ್ಯವಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಔಷಧಿ ನೀಡುವ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಆಸ್ಪತ್ರೆಗಳಲ್ಲಿ ಬೆಡ್ಗಳೂ ಸಹ ಇರದ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸರ್ಕಾರ ಕೊರೊನಾಗೆ ಬೇರೆ ಬೇರೆ ಲೆಕ್ಕ ಶೀರ್ಷಿಕೆಗಳ ಮೂಲಕ ಖರ್ಚು ಮಾಡುವ ಮೂಲಕ ಕೋವಿಡ್ ನಿರ್ವಹಣೆಗೆ ಮಾಡಿರುವ ವೆಚ್ಚ ಕಡಿಮೆ ಎಂದು ತೋರಿಸಿಕೊಳ್ಳುತ್ತಿದೆ. ಆದರೆ ಸರ್ಕಾರ ದುಡ್ಡು ಹೊಡೆದಿರುವುದು ನಿಜ. ನಾವೇನೂ ಅವರ ರಾಜೀನಾಮೆ ಕೇಳಿಲ್ಲ, ಕೇವಲ ತನಿಖೆಗೆ ಒತ್ತಾಯಿಸಿದ್ದೇವೆ. ಅದಕ್ಕೂ ಸರ್ಕಾರ ಒಪ್ಪುತ್ತಿಲ್ಲ ಎಂದರು.
ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ಕೊರೊನಾ ನಮಗೆ ಸಂಕಟವಾದರೆ ಬಿಜೆಪಿಯವರಿಗೆ ಹಬ್ಬವಾಗಿದೆ. ಬಿಜೆಪಿ ಸರ್ಕಾರ ಜನರು ಹಾಗೂ ಪ್ರತಿಪಕ್ಷಗಳ ಮಾತುಗಳಿಗೆ ಕಿವಿಗೊಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದರು. ಈಗ ಮತ್ತೆ ಅದೇ ಪರಿಸ್ಥಿತಿ ಬರುತ್ತಿದೆ ಎಂದು ಭವಿಷ್ಯ ನುಡಿದರು.
ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು ಕೋವಿಡ್ ಗೆ ಮಾಡಿರುವ ವೆಚ್ಚದ ವಿವರ ಕೊಡುತ್ತಿಲ್ಲ. ಕೇವಲ 25-30 ಸಾವಿರ ರೂಪಾಯಿ ಮಾತ್ರ ಕೋವಿಡ್ ಗೆ ಖರ್ಚು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ನೆಪದಲ್ಲಿ ಜನರನ್ನು ಸುಮ್ಮ ಸುಮ್ಮನೆ ಕರೆದೊಯ್ದು ಕೂಡಿ ಹಾಕುತ್ತಿದ್ದಾರೆ. ಔಷಧಿ, ಬಿಸಿನೀರು ಹಾಗೂ ಊಟಕ್ಕೂ ಸಮರ್ಪಕ ವ್ಯವಸ್ಥೆ ಇಲ್ಲ. ಇಂತಹ ಕೆಲಸ ಮಾಡುತ್ತಿರುವವರು ಜೈಲಿಗೆ ಹೋಗುವವರೆಗೂ ಬಿಡುವುದಿಲ್ಲ. ಬಿಜೆಪಿಯವರಿಗೆ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡುವುದೇ ಬಿಜೆಪಿಯ ಸಂಸ್ಕಾರ ಎಂಬಂತಾಗಿದೆ. ಪ್ರತಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರೇ ಕಳಪೆ ಹಾಗೂ ಬಳಕೆಯಾದ ವೆಂಟಿಲೇಟರ್ ಗಳನ್ನು ದುಬಾರಿ ವೆಚ್ಚಕ್ಕೆ ಖರೀದಿ ಮಾಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ದಿಕ್ಕು ದೆಸೆ, ದೂರದೃಷ್ಟಿ, ಸಂವೇದನಾಶೀಲತೆ ಇಲ್ಲದಂತಾಗಿದೆ. ಸಚಿವರಲ್ಲಿ ಸಮನ್ವಯತೆ ಇಲ್ಲ. ಕೋವಿಡ್, ಖರ್ಚು-ವೆಚ್ಚದ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಲು ತಯಾರಿಲ್ಲ. ಕೋವಿಡ್ ನೆಪದಲ್ಲಿ ಸರ್ಕಾರದ ಆಸ್ತಿ ಮಾರಾಟ ಮಾಡಲು ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿದೆ. ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಆರ್ಬಿಐನಿಂದ 8 ಸಾವಿರ ಕೋಟಿ ಸಾಲ ಪಡೆಯುವ ಮೂಲಕ ರಾಜ್ಯದ ಸಾಲದ ಹೊರೆ ಹೆಚ್ಚಿಸುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕರಾದ ಎಚ್.ಪಿ. ರಾಜೇಶ್, ಡಿ.ಜಿ. ಶಾಂತನಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಪಂ ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಸಂಕಷ್ಟ ಎದುರಿಸುತ್ತಿರುವಾಗಲೂ ಜನರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ನಿಧಿಗೆ ಹಣ ನೀಡಿದ್ದಾರೆ. ಆದರೆ ಸಚಿವರು ಕೋವಿಡ್ ನಿರ್ವಹಣೆ ಹೆಸರಿನಲ್ಲಿ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ. ನಾವೇನೂ ಅವ್ಯವಹಾರ ನಡೆಸಿಲ್ಲ ಎಂದು ಮಂತ್ರಿ ಮಂಡಲದವರು ಹೇಳುತ್ತಿದ್ದಾರೆ, ಆದರೆ ಲೆಕ್ಕ ಮಾತ್ರ ತೋರಿಸ್ತಿಲ್ಲ. ಮಾಫಿಯಾ ರೀತಿ ಹೊರಟಿದ್ದಾರೆ. ಆದಷ್ಟು ಬೇಗ ಭ್ರಷ್ಟ ಸರ್ಕಾರ ತೊಲಗಲಿ.
ಡಾ| ಶಾಮನೂರು ಶಿವಶಂಕರಪ್ಪ, ಶಾಸಕರು
ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ರಾಮ ಮಂದಿರ ಕಟ್ಟುವ ಅಗತ್ಯವಾದರೂ ಏನಿತ್ತು, ರಾಮ ಮಂದಿರ ಬೇಕಿರುವುದು ನಿಜ, ಆದರೆ ಈ ಸಂದರ್ಭದಲ್ಲಿ ಬೇಕೇ, ನೂರಾರು ಕೋಟಿ ರೂ.ಗಳ ಖರ್ಚು ಮಾಡಬೇಕೇ?
ಎಸ್. ರಾಮಪ್ಪ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ