ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
Team Udayavani, Dec 4, 2018, 1:18 PM IST
ರಾಯಚೂರು: ಸಮಾಜದ ರಕ್ಷಣೆ ಹೊಣೆ ಹೊತ್ತಿರುವ ಆರಕ್ಷಕರು ಸದಾ ಕ್ರಿಯಾಶೀಲರಾಗಿರಬೇಕು. ಒತ್ತಡ ನಿವಾರಣೆಗೆ ಇಂಥ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬೈಲೂರು ಶಂಕರ ರಾಮ್ ತಿಳಿಸಿದರು.
ಪೊಲೀಸ್ ಇಲಾಖೆಯಿಂದ ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಪೊಲೀಸರಿಗೆ ಮನಸ್ಸು-ದೈಹಿಕ ಸಾಮರ್ಥ್ಯ ಅತ್ಯಗತ್ಯ. ಸೇವೆಗೆ ಸೇರುವ ಮುನ್ನ ದೈಹಿಕ ಸಾಮರ್ಥ್ಯ ಅಳೆದು ಆಯ್ಕೆ ಮಾಡುತ್ತಾರೆ. ದೈಹಿಕ ದಕ್ಷತೆ ಕುಗ್ಗಿದಂತೆಲ್ಲ ವ್ಯಕ್ತಿ ಮಾನಸಿಕ ಒತ್ತಡಗಳಿಗೂ ಸಿಲುಕುತ್ತಾನೆ. ಆಗ ಇಂಥ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಬೇಕು ಎಂದು ಸಲಹೆ ನೀಡಿದರು.
ಆರಂಭದಲ್ಲಿದ್ದ ಸೇವಾ ಮನೋಭಾವ ಕುಗ್ಗುತ್ತದೆ. ಅದ್ದರಿಂದ ಪೊಲೀಸರು ಮಾನಸಿಕ-ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳುವ ಮೂಲಕ ಪ್ರಾಮಾಣಿಕ ಸೇವೆಗೆ ಮುಂದಾಗಬೇಕು. ನಮ್ಮ ಮನಸ್ಸು, ಶರೀರದ ನಡುವೆ ಸಮಾನತೆ ಕಾಯ್ದುಕೊಂಡು ಆರೋಗ್ಯ ಪೂರ್ಣ ಬದುಕು ನಡೆಸಬೇಕಿದೆ ಎಂದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಮಹಾದೇವಯ್ಯ ಮಾತನಾಡಿ, ಪೊಲೀಸ್ ಇಲಾಖೆ
ಸಿಬ್ಬಂದಿ ಇಡೀ ವರ್ಷ ಒತ್ತಡದಲ್ಲಿಯೇ ಸೇವೆ ಮಾಡುತ್ತಾರೆ. ಅವರ ಕೆಲಸದಲ್ಲಿ ಹೊಸ ಉತ್ಸಾಹ ತುಂಬುವ ಉದ್ದೇಶದಿಂದ
ಹಮ್ಮಿಕೊಂಡಿರುವ ಕ್ರೀಡಾಕೂಟದಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಆರಂಭದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿರುವ ಠಾಣೆಗಳ ಪೊಲೀಸರ ತಂಡವು ಗಣ್ಯರಿಗೆ ಗೌರವ ವಂದನೆ ಸಲ್ಲಿಸಿತು. ಬಳಿಕ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಹೆಚ್ಚುವರಿ ಎಸ್ಪಿ ಎಸ್.ಬಿ.ಪಾಟೀಲ, ಮುಖಂಡರಾದ ರವೀಂದ್ರ
ಜಲ್ದಾರ್ ಸೇರಿ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ವಿವಿಧ ಕ್ರೀಡೆಗಳು ಜರುಗಿದವು.