ಕಾಂಗ್ರೆಸ್ನಿಂದ ಔಷಧ ಕಿಟ್ ವಿತರಣೆ
ದಿ|ರಾಜೀವ ಗಾಂಧಿ ಪುಣ್ಯಸ್ಮರಣೆ ಪ್ರಯುಕ್ತ ಮಾಜಿ ಶಾಸಕ ಜಿ.ಎಸ್.ಪಾಟೀಲರಿಂದ ಮಾತ್ರೆ ಕೊಡುಗೆ
Team Udayavani, May 23, 2021, 6:23 PM IST
ಗಜೇಂದ್ರಗಡ: ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಮಾರ್ಗಸೂಚಿಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರದ ಪರಿಣಾಮ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಜನರ ನೆರವಿಗೆ ಕಾಂಗ್ರೆಸ್ ಧಾವಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಗಾರಗಿ ಹೇಳಿದರು.
ಸಮೀಪದ ಗೋಗೇರಿ ಗ್ರಾಮದಲ್ಲಿ ದಿ|ರಾಜೀವ ಗಾಂಧಿ ಅವರ ಪುಣ್ಯಸ್ಮರಣೆ ಪ್ರಯುಕ್ತ ಮಾಜಿ ಶಾಸಕ ಜಿ.ಎಸ್.ಪಾಟೀಲ ಅವರ ವತಿಯಿಂದ ಮತಕ್ಷೇತ್ರದಲ್ಲಿ ನೀಡಲಾಗುತ್ತಿರುವ ಔಷ ಧಗಳನ್ನು ವಿತರಿಸಿ ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಮರಣ ಮೃದಂಗ ಬಾರಿಸುತ್ತಿದೆ. ಸೊಂಕಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಬಡ ರೋಗಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬಡವರ ನೆರವಿಗೆ ಧಾವಿಸುವಲ್ಲಿ ವಿಫಲವಾಗಿದೆ. ಕೋವಿಡ್ ವ್ಯಾಕ್ಸಿನ್ ನೀಡುವಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ದೊರೆಯಬೇಕಾದ ನೆರವು ಸಿಗುತ್ತಿಲ್ಲ. ರಾಜ್ಯದ ಸಂಸದರು ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷದ ವತಿಯಿಂದ ಈಗಾಗಲೇ ಸಮರೋಪಾದಿಯಲ್ಲಿ ಬಡವರಿಗೆ ನೆರವು ನೀಡಲಾಗುತ್ತಿದೆ ಎಂದರು.
ನ್ಯಾಯವಾದಿ ಕೆ.ಎಸ್.ಕೊಡತಗೇರಿ ಮಾತನಾಡಿ, ಕೋವಿಡ್ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕಿದೆ. ಆದರೆ, ಸರ್ಕಾರದ ನಿಲುವುಗಳು ಮಾರಕವಾಗಿವೆ. ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಮತಕ್ಷೇತ್ರದಲ್ಲಿ ಮಾಜಿ ಶಾಸಕ ಜಿ.ಎಸ್.ಪಾಟೀಲ ಅವರು ಔಷಧ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ಆದರೆ ಆಡಳಿತ ಪಕ್ಷ ಬಡವರ ಕಷ್ಟ ಆಲಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಇದೇ ವೇಳೆ ಗ್ರಾಮದ ಬಡ ರೋಗಿಗಳಿಗೆ ಔಷ ಧಗಳ ಕಿಟ್ಗಳನ್ನು ವಿತರಿಸಲಾಯಿತು. ಇಮಾಮಸಾಬ ಬಾಗವಾನ, ಕಂಟೆಪ್ಪ ಮಾದರ, ಐ.ಎಚ್.ಬಾಗವಾನ, ಮಲ್ಲಪ್ಪ ಭೋಸಲೆ ಇನ್ನಿತರರಿದ್ದರು.