ಚಿರತೆ, ಆನೆಗಳ ದಾಳಿ: ಆತಂಕ
Team Udayavani, Dec 5, 2022, 4:13 PM IST
ಅರಕಲಗೂಡು: ಬೇಸಿಗೆ ಸಮೀಪಿಸುತಿದ್ದಂತ್ತೆ ತಾಲೂಕಿನ ಹಲವೆಡೆ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಮತ್ತೂಂದೆಡೆ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಜನರಲ್ಲಿ ಆತಂಕ ಭಯ ಹೆಚ್ಚಿಸಿದೆ.
ತಾಲೂಕಿನ ಕಣಿವೆ ಬಸಪ್ಪ ಅರಣ್ಯ, ಗೊಬ್ಬಳಿ ಅರಣ್ಯ ಹಾಗೂ ಹೊನ್ನವಳ್ಳಿ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಕೆಲ ತಿಂಗಳಿನಿಂದ ಚಿರತೆಗಳು ಜಾನುವಾರುಗಳು, ಬೀದಿ ನಾಯಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಿವೆ. ಇತ್ತೀಚೆಗೆ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯ ಮಲೆನಾಡು ಅಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಣಿಸಿ ಕೊಂಡು ಫಸಲಿಗೆ ಬಂದಿರುವ ಭತ್ತ, ಮೆಕ್ಕೆಜೋಳ, ಕಾಫಿ, ಬಾಳೆ, ತೆಂಗು, ಅಡಕೆ ಬೆಳೆಯನ್ನು ನಾಶಗೊಳಿಸುತ್ತಿವೆ. ತಾಲೂಕಿನ ಹಲವು ಗ್ರಾಮಗಳಲ್ಲಿ ತಾಯಿ ಮರಿ ಸೇರಿದಂತ್ತೆ ಒಟ್ಟು 7ಚಿರತೆಗಳ ಸಂಚಾರವಿದ್ದು, ಕೃಷಿ ಜಮೀನು ಬಳಿ ಮೇಯಲು ಕಟ್ಟಿರುವ ದನಕರುಗಳು, ಮೇಕೆ, ಕುರಿ ಹಾಗೂ ಮನೆ ಬಳಿ ಕಟ್ಟಲಾಗಿರುವ ಸಾಕು ನಾಯಿಗಳ ಮೇಲೆ ದಾಳಿ ಮುಂದುವರಿಸಿವೆ.
ಅಲ್ಲದೆ ಸಾಕಷ್ಟು ಹಳ್ಳಿಗಳಲ್ಲಿ ಅಡ್ಡಾಡುತ್ತಿರುವ ಚಿರತೆಗಳು ರಾತ್ರಿ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿರುವ ಆಡು, ಕುರಿ, ನಾಯಿ ಹಾಗೂ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು ಚಿರತೆ ದಾಹಕ್ಕೆ ಜನರು ರೋಸಿ ಹೋಗಿದ್ದಾ ರೆ. ರಾತ್ರಿ ವೇಳೆ ಸಾಕುಪ್ರಾಣಿಗಳನ್ನು ಕಟ್ಟಿರುವ ಕೊಟ್ಟಿಗೆಗೆ ನುಗ್ಗಿ ಮೂಕ ಜೀವಗಳನ್ನು ಬಲಿ ಪಡೆಯುತ್ತಿರುವ ಚಿರತೆಯನ್ನು ಕಣ್ಣಾರೆ ಕಂಡಿರುವ ಗ್ರಾಮಸ್ಥರಲ್ಲಿ ಜೀವ ಭಯ ಹೆಚ್ಚಿದೆ. ಯಾವ ಹೊತ್ತಿನಲ್ಲಿ ದಾಳಿ ನಡೆಸುವುದೋ ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.
ಬೋನಿಗೆ ಬೀಳದ ಚಿರತೆ: ಚಿರತೆಗಳ ಸೆರೆಗಾಗಿ ಮೂರು ಕಡೆ ಅರಣ್ಯ ಇಲಾಖೆ ಬೋನ್ಗಳನ್ನಿಟ್ಟು ಸೆರೆಗೆ ಮುಂದಾಗಿದೆ.ಆದರೆ, ಚಾಲಕಿ ಚಿರತೆಗಳು ಬೋನಿನೊಳಗೆ ಕಟ್ಟಲಾಗಿರುವ ನಾಯಿ, ಆಡುಗಳನ್ನು ತಿನ್ನಲು ಮುಂದಾಗಿಲ್ಲ.ಅರಣ್ಯ ಇಲಾಖೆ ಸಿಬ್ಬಂದಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಕಳೆದ ನಾಲ್ಕು ತಿಂಗಳಿಂದಲೂ ಬೀಳುತ್ತಿಲ್ಲ. ಸಾಕು ಪ್ರಾಣಿಕಗಳನ್ನು ಕಚ್ಚಿ ಸಾಯಿಸಿದ ಜಾಗದಲ್ಲಿ ಈಗಾಗಲೇ ಹಲವಾರು ಕಡೆ ಬೋನುಗಳನ್ನು ಇರಿಸಿದರೂ ಚಿರತೆ ಸೆರೆಯಾಗದೆ ಜನರ ನಿದ್ದೆಗೆಡಿಸಿದೆ.
ಜನರಿಗೆ ಅಪಾರ ನಷ್ಟ: ಸಾವಿರಾರು ರೂ.ಬೆಲೆಬಾಳುವ ಸಾಕುಪ್ರಾಣಿಗಳು ಇದ್ದಕ್ಕಿದ್ದಂತೆ ಚಿರತೆ ಬಾಯಿಗೆ ಆಹಾರವಾಗುತ್ತಿದ್ದು, ರೈತಾಪಿ ವರ್ಗದ ಜನರು ನಷ್ಟ ಅನುಭವಿಸುವಂತಾಗಿದೆ. ಅದೇ ರೀತಿ ಕಾಡಾನೆಗಳ ದಾಳಿಯಿಂದಲೂ ಕೂಡ ಕೈಗೆ ಬಂದ ಬೆಳೆ ಉಳಿಸಿಕೊ ಳ್ಳುವುದೇ ಸವಾಲಾಗಿದೆ. ಕಾಡು ಪ್ರಾಣಿಗಳಿಂದ ಕಳೆದು ಕೊಂಡು ಜಾನುವಾರು, ಬೆಳೆಹಾನಿಗೆ ವೈಜ್ಞಾನಿಕ ಬೆಲೆ ಸರಕಾರ ನೀಡುತ್ತಿಲ್ಲ. ಕೇವಲ ಕಾಕತಾಳಿಯವಾಗಿ ಪರಿಹಾರ ನೀಡಿ ರೈತರನ್ನು ವಂಚಿಸಲಾಗುತ್ತಿದೆ ಎಂಬ ಆರೋಪ ರೈತರಿಂದ ಕೇಳಿಬರುತ್ತಿದೆ.
ಚಿರತೆ, ಕಾಡಾನೆಗಳ ದಾಳಿ ನಿಯಂತ್ರಿಸಿ: ಕೊಡಗಿನ ಬೆಸೂರು ಅರಣ್ಯ ಪ್ರದೇಶದಲ್ಲಿ ಹಿಂಡಾಗಿ ಬೀಡು ಬಿಟ್ಟಿ ರುವ ಕಾಡಾನೆಗಳು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಗ್ರಾಮೀಣ ಪ್ರದೇಶಕ್ಕೆ ನುಗ್ಗಿ ಬೆಳೆಗಳನ್ನು ತುಳಿದು ನಾಶ ಮಾಡುತ್ತಿವೆ. ಆನೆಗಳ ಭಯದಿಂದ ಕೃಷಿ ಬೆಳೆಯನ್ನು ಪೋಷಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆಯಿಂದ ರಾತ್ರಿ ವೇಳೆಯೂ ಬೆಳೆಗೆ ನೀರು ಹಾಯಿಸಲು ಹೋಗ ಬೇಕಿದೆ. ಆನೆಗಳ ಹಾವಳಿಯಿಂದ ಬೆಳೆಯನ್ನು ಉಳಿಸಿ ಕೊಳ್ಳದ ಆತಂಕ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ತಾಲೂಕಿನ ದೊಡ್ಡಮಗ್ಗೆ, ಕೊಣನೂರು, ಕಸಬಾ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಚಿರತೆಗಳ ದಾಳಿ ಮುಂದುವರಿದಿದೆ.
ಜಾನುವಾರು ಗಳನ್ನು ಕೃಷಿ ಜಮೀನಿನಲ್ಲಿ ಕಟ್ಟಿ ಮೇಯಿಸಲು ಹಾಗೂ ಮನೆ ಬಳಿ ಕಟ್ಟಿ ರಕ್ಷಣೆ ಮಾಡಿಕೊಳ್ಳದ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಇದ್ದಾರೆ.
ಇದುವರೆಗೂ ಸುಮಾರು 50ಕ್ಕೂ ಹೆಚ್ಚು ಜಾನುವಾರುಗಳು ಚಿರತೆ ದಾಳಿಗೆ ಬಲಿಯಾಗಿವೆ. ಈ ಪೈಕಿ 20
ಆಡು, ಕುರಿ, ದನಕರುಗಳು ಹಾಗೂ 30 ಸಾಕು ನಾಯಿಗಳು ಚಿರತೆ ದಾಳಿಗೆ ಒಳಗಾಗಿವೆ. ಚಿರತೆ ಸೆರೆಗೆ ಮೂರು ಕಡೆ ಬೋನ್ ಇಡಲಾಗಿದೆ. ಆದರೆ, ಚಿರತೆ ಬೋನಿಗೆ ಬಿದ್ದಿಲ್ಲ. ಬದಲಾಗಿ ಸಾಕು ಪ್ರಾಣಿಗಳನ್ನು ಬಲಿಪಡೆದಿದೆ. ಇದೀಗ ಮಲ್ಲಿ ಪಟ್ಟಣ ಹೋಬಳಿ ಭಾಗದಲ್ಲಿ ಕಾಡಾ ನೆಗಳ ಹಾವಳಿ ಶುರುವಾಗಿದೆ. ಬೆಳೆಗಳನ್ನು ತುಳಿದು ನಾಶಪ ಡಿಸುತ್ತಿರುವ ಕಾಡಾನೆಗಳನ್ನು ಕೊಡಗಿನ ಕಾಡಿಗೆ ಅಟ್ಟಲಾಗುತ್ತಿದೆ. – ಶಂಕರ್, ಅರಣ್ಯ ಉಪ ಸಂಕ್ಷರಣಾಧಿಕಾರಿ.
ಮಲೆನಾಡು ಭಾಗದಲ್ಲಿ ಕಾಟ ಕೊಡುತ್ತಿದ್ದ ಕಾಡಾನೆಗಳು ಈಗ ಇತ್ತ ಕಾಲಿಟ್ಟಿವೆ. ಭತ್ತ, ಅಡಕೆ, ಜೋಳದ ಬೆಳೆ ತುಳಿದು ನಾಶಪಡಿಸುತ್ತಿವೆ. ಹಗಲು ಹೊತ್ತಿನಲ್ಲಿ ಗ್ರಾಮಗಳ ಸುತ್ತ ಅಡ್ಡಾಡುತ್ತಿದ್ದು ಜೀವಭಯ ಉಂಟಾಗಿದೆ. ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಬೋನ್ ಇಟ್ಟಿಲ್ಲ. ಕಾಕತಾಳಿಯವಾಗಿ ಅರಣ್ಯ ಇಲಾಖೆ ನಡೆದುಕೊಳ್ಳುತಿದೆ. ಆನೆಗಳ ಹಾವಳಿ ನಿಯಂತ್ರಣ, ಚಿರತೆ ಸೆರೆಗೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು. –ಹೊನ್ನವಳ್ಳಿ ಭುವನೇಶ್, ರೈತ ಸಂಘದ ಕಾರ್ಯಾಧ್ಯಕ್ಷ
– ವಿಜಯ್ ಕುಮಾರ್