ದೇವೇಗೌಡರ ನಾಮಬಲದಿಂದಲೇ ಅಭಿವೃದ್ಧಿ
Team Udayavani, Jul 20, 2021, 5:05 PM IST
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಾಮಬಲದಿಂದ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಏನೇನುಕೊಡುಗೆ ನೀಡಿದ್ದಾರೆಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಟೀಕೆ ಮಾಡಿದವರಿಗೆ ನಾವು ಉತ್ತರಕೊಡುವುದಿಲ್ಲ. ಜನರ ನಿರ್ಧಾರಕ್ಕೇಬಿಡುತ್ತೇವೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್. ಡಿ.ರೇವಣ್ಣ ಪ್ರತಿಕ್ರಿಯಿಸಿದರು.
ಹಾಸನ ವಿಮಾನ ನಿಲ್ದಾಣ, ಚನ್ನಪಟ್ಟಣ ಕೆರೆ ಅಭಿವೃದ್ಧಿ ಮೂಲ ಯೋಜನೆಗಳನ್ನು ಬದಲಾವಣೆ ಮಾಡುವುದನ್ನು ಸಮರ್ಥಿಸಿ ಕೊಳ್ಳುತ್ತಿರುವ ಹಾಸನ ಕ್ಷೇತ್ರದ ಬಿಜೆಪಿಶಾಸಕ ಪ್ರೀತಂ ಜೆ.ಗೌಡ ಅವರಿಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ರೇವಣ್ಣ ಅವರು, ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ನಾನು ಜಿಲ್ಲೆಯ ಉಸ್ತುವಾರಿ ಸಚಿವನಾಗಿನೀಡಿರುವ ಕೊಡುಗೆಯನ್ನು ಕಡತಗಳನ್ನು ತೆಗೆದು ನೋಡಲಿ ಎಂದರು.
ಒಳ್ಳೆಯದು ಮಾಡಲಿ: ಶಾಸಕ ಪ್ರೀತಂ ಜೆ.ಗೌಡ ಅವರ ಹೆಸರು ಪ್ರಸ್ತಾಪಿಸದೆ ವಾಗ್ಧಾಳಿ ನಡೆಸಿದ ರೇವಣ್ಣ, ದೊಡ್ಡವರು, ಅವರ ಟೀಕೆ, ಆರೋಪಗಳಿಗೆ ಪ್ರತಿಕ್ರಿಯೆ ಕೊಡುವಷ್ಟು ಶಕ್ತಿ, ತಿಳುವಳಿಕೆ ನನಗಿಲ್ಲ.ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದರು. ದೇವೇಗೌಡರು ಪ್ರಧಾನಿಯಾಗಿದ್ದರಿಂದಲೇ ಹಾಸನ – ಬೆಂಗಳೂರು ನೂತನ ರೈಲು ಮಾರ್ಗ ನಿರ್ಮಾಣವಾಯಿತು.
ಮುಚ್ಚಿ ಹೋಗಿದ್ದ ಹಾಸನ – ಮೈಸೂರು ರೈಲು ಮಾರ್ಗ ಬ್ರಾಡ್ಗೆàಜ್ಗೆ ಪರಿವರ್ತನೆಯಾಗಿ ಈಗ ನಿತ್ಯ 14 ರೈಲುಗಳು ಸಂಚರಿಸುತ್ತಿವೆ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರಿಂದಲೇ ಹಾಸನ – ಬೆಂಗಳೂರು ನಡುವೆ ಚತುಷ್ಪಥ ರಸ್ತೆ ನಿರ್ಮಾಣ, ಹಾಸನ ವೈದ್ಯಕೀಯಕಾಲೇಜು, ಸರ್ಕಾರಿಎಂಜಿನಿಯರಿಂಗ್ ಕಾಲೇಜು, ಪಶುವೈದ್ಯಕೀಯ, ಕೃಷಿ, ಕಾನೂನು, ಗೃಹ ವಿಜ್ಞಾನ ಕಾಲೇಜುಗಳು, 24 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಿಲ್ಲೆಗೆ ಮಂಜೂರಾದವು.
14 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಹಾಸನ ವೈದ್ಯಕೀಯ ಕಾಲೇಜಿಗೆ 250 ಕೋಟಿ ರೂ., ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಾಸನ – ದುದ್ದ, ಚತುಷ್ಪಥ ರಸ್ತೆ, ಹಾಸನ-ಹೊಳೆನರಸೀಪುರ ಚತುಷ್ಪಥ ರಸ್ತೆ ನಿರ್ಮಾಣ ಆಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಹಾಸನ ವಿಮಾನ ನಿಲ್ದಾಣ ಮೂಲ ಯೋಜನೆ ಯಂತೆಯೇ ಅನುಷ್ಠಾನವಾಗಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇವೆ. ಅವರು ಸ್ಪಂದಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ 22 ರ ಗಡುವು ನೀಡಿದ್ದೆವು. ಆದರೆ ಬಕ್ರೀದ್ ಇರುವುದರಿಂದ ಒಂದೆರಡು ದಿನ ಮುಂದೂಡಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಮುಂಜಾಗ್ರತೆ ಕೈಗೊಳ್ಳಲಿ: ಕೊರೊನಾ 3ನೇ ಅಲೆಯಿಂದ ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುವುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಹಾಸನ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನುಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾಲೆಗಳಲ್ಲಿ ನೀರು ಹರಿಸಲು ಒತ್ತಾಯ: ಉತ್ತಮ ಮಳೆಯಾಗುತ್ತಿದ್ದು, ಯಗಚಿ ಜಲಾಶಯ ಭರ್ತಿಯಾಗಿದೆ. ಹೇಮಾವತಿ ಜಲಾಶಯಗಳಲ್ಲಿ ನೀರು ಒಂದು ಬೆಳೆಗಾಗುವಷ್ಟು ಸಂಗ್ರಹವಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಸಸಿ ಮಡಿಗಳನ್ನು ಬೆಳೆಸುವುದೂ ಸೇರಿದಂತೆ ಮುಂಗಾರು ಬೆಳೆಗಳನ್ನು ಬೆಳೆಯಲು ಸಿದ್ಧತೆಮಾಡಿಕೊಳ್ಳಬೇಕಾಗಿರುವುದದಿಂದಹೇಮಾವತಿ ಜಲಾಶಯದ ಎಲ್ಲ ನಾಲೆಗಳಲ್ಲಿ ಹಾಗೂ ಶ್ರೀ ರಾಮ ದೇವರ ಅಣೆಕಟ್ಟೆಯ ನಾಲೆಗಳಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೀರಾವರಿ ಸಲಹಾ ಸಮಿತಿ ಸಭೆಯನ್ನುಶೀಘ್ರವಾಗಿಕರೆದು ಜುಲೈ ಕೊನೆಯ ವಾರದಿಂದಲೇ ನಾಲೆಗಳಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಗಾರು ಬೆಳೆಗಳನ್ನು ಬೆಳೆಯಲು ರೈತರಿಗೆ ಕಷ್ಟವಾಗುತ್ತದೆ ಎಂದರು.
ಬಿಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಲೆಲ್ಲ ಜಿಲ್ಲೆಯ ಅಭಿವೃದ್ಧಿಯೋಜನೆಗಳನ್ನು ತಡೆಹಿಡಿದು ಅನ್ಯಾಯ ಮಾಡಿರುವುದನ್ನು ದಾಖಲೆ ಸಹಿತಯಾವುದೇ ವೇದಿಕೆಯಲ್ಲಾದರೂ ಹೇಳಲು ಸಿದ್ಧನಿದ್ದೇನೆ. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಬೃಹತ್ಯೋಜನೆಗಳಹೊರತಾಗಿ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಗೆ ಏನು ಕೊಡುಗೆ ಸಿಕ್ಕಿದೆ ಎಂಬುದನ್ನೂ ಹೇಳಲಿ.-ಎಚ್.ಡಿ.ರೇವಣ್ಣ, ಶಾಸಕ