ಹೊಳೆನರಸೀಪುರ: ಮತಪಟ್ಟಿ ಪರಿಷ್ಕರಣೆಗೆ ಚಾಲನೆ
Team Udayavani, Sep 2, 2019, 3:35 PM IST
ಹೊಳೆನರಸೀಪುರ ತಾ| ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಸಮಾರಂಭದಲ್ಲಿ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಮಾತನಾಡಿದರು.
ಹೊಳೆನರಸೀಪುರ: ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಸೆ.1 ರಿಂದ ಅ.15 ರವರೆಗೆ ನಡೆಸಲಾಗುತ್ತಿದೆ ಎಂದು ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪ ಡಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸೆ.1 ರಿಂದ ಅ.15 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಬೂತ್ ಲೆವಲ್ ಅಧಿಕಾರಿಗಳು ಮನೆ ಮನೆಗೆ ತೆರಳಿ 2020 ರ ಜ.1 ಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬರನ್ನೂ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ 18 ವರ್ಷ ತುಂಬುವವರು ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಈ ಪರಿಷ್ಕರಣೆ ಕೇವಲ ಸೇರ್ಪಡೆಯೊಂದೇ ಅಲ್ಲ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವುದು, ತಿದ್ದುಪಡಿ, ಪರಿಶೀಲನೆ ಮತ್ತು ದೃಢೀಕರಣವನ್ನು ಸಹ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಜನವರಿಯಲ್ಲಿ ಗ್ರಾಪಂ ಚುನಾವಣೆ ನಡೆ ಯುವ ಸಾಧ್ಯತೆಯಿದ್ದು ರಾಜ್ಯ ಚುನಾವಣಾ ಅಧಿಕಾರಿ ಸಂಜೀವ್ಕುಮಾರ್ ಅವರ ಸೂಚನೆ ಯಂತೆ ಮತಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಲಾಗಿದೆ. ಪ್ರತಿಯೊಬ್ಬರು ಸಹ ತಮ್ಮ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಚುನಾವಣಾ ಆಯೋಗ ಹೊಸದಾಗಿ ಒಂದು ವೋಟರ್ ಹೆಲ್ಪ್ಲೈನ್ ಆ್ಯಪ್ ಬಿಡು ಗಡೆ ಮಾಡಿದ್ದು, ಅದರಲ್ಲಿ ನಿಮ್ಮ ಮತದಾರರ ಚೀಟಿಯಲ್ಲಿನ ದಾಖಲೆಯನ್ನು ನೋಂದಾಯಿಸಿದ್ದಲ್ಲಿ ನೀವು ಮತದಾರರ ಪಟ್ಟಿಯಲ್ಲಿ ಹಾಲಿ ಇರುವರೆ ಅಥವಾ ಇಲ್ಲವೇ ಎಂಬುದಾಗಿ ಮತ್ತು ತಮ್ಮ ಮತದಾನ ಮಾಡುವ ಬೂತ್ ಸಂಖ್ಯೆಗಳನ್ನು ಪೂರ್ಣವಾಗಿ ತೋರಿಸಲಿದೆ ಎಂದರು.
ತಾಪಂ ಇಒ ಕೆ. ಯೋಗೇಶ್ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತ ದಾನದ ಹಕ್ಕು ಪಡೆಯಬೇಕು ಎಂಬ ಉದ್ದೇಶ ದಿಂದ ಮತದಾರರ ಪಟ್ಟಿ ಪರಿಶೀಲನಾ ಅಭಿಯಾನವನ್ನು ರಾಜ್ಯ ಚುನಾವಣಾ ಆಯೋಗ ಆರಂಭಿಸಿದೆ ಎಂದರು. ಡಿವೈಎಸ್ಪಿ ಲಕ್ಷ್ಮೇಗೌಡ, ಬಿಇಒ ಲೋಕೇಶ್ ಮಾತನಾಡಿ, ಮತಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.