ಓಪನ್ ಬಾರ್ ಆಗುತ್ತಿರುವ ಕಾಗಿನಹರೆ: ನಿಸರ್ಗಕ್ಕೆ ಧಕ್ಕೆ
ವಾರಾಂತ್ಯ ಕಳೆಯಲು ನಗರಗಳಿಂದ ಬರುವ ಪ್ರವಾಸಿಗರಿಂದ ಪಶ್ಚಿಮಘಟ್ಟದ ತಪ್ಪಲಿನಲ್ಲಿ ದಾಂಧಲೆ
Team Udayavani, Jul 1, 2019, 11:00 AM IST
ಸಕಲೇಶಪುರ: ವಾರಾಂತ್ಯವನ್ನು ಕಳೆಯಲು ನಗರಗಳಿಂದ ಬರುವ ಪ್ರವಾಸಿಗರು ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಕಾಗಿನಹರೆ ಗ್ರಾಮದಲ್ಲಿ ಸೌಂದರ್ಯ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ.
ತಾಲೂಕಿನ ಹೆತ್ತೂರು ಹೋಬಳಿಯ ಕಾಗಿನಹರೆ ಗ್ರಾಮ ಕುಗ್ರಾಮವಾಗಿದ್ದು ಪ್ರಖ್ಯಾತ ಎಡಕುಮೇರಿ ರೈಲು ನಿಲ್ದಾಣದಿಂದ ಕೇವಲ 5 ಕಿ.ಮೀ. ದೂರದಲ್ಲಿದೆ. ಪಶ್ಚಿಮಘಟ್ಟಗಳ ಬೆಟ್ಟಗಳ ಮಧ್ಯೆ ಇರುವ ಕಾಗಿನಹರೆ ಗ್ರಾಮದ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನಡೆ ಸೆಳೆಯುತ್ತಿದೆ.
ರೆಸಾರ್ಟ್, ಹೋಂಸ್ಟೇ ಹಾವಳಿ: ಈ ಹಿಂದೆ ಕಾಗಿನಹರೆ ಗ್ರಾಮಕ್ಕೆ ಕೇವಲ ಹೆತ್ತೂರು ಸುತ್ತಮುತ್ತ ಲಿನ ಗ್ರಾಮಸ್ಥರು ಮಾತ್ರ ಗ್ರಾಮದ ಐತಿಹಾಸಿಕ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಹೋಗುತ್ತಿ ದ್ದರು. ಆದರೆ ಇತ್ತೀಚೆಗೆ ವನಗೂರು, ಹೆತ್ತೂರು ಭಾಗದಲ್ಲಿರುವ ಹೋಂ ಸ್ಟೇ ರೆಸಾರ್ಟ್ಗಮಿಸುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಗಿನಹರೆ ಗ್ರಾಮಕ್ಕೆ ಬರುತ್ತಿದ್ದಾರೆ.
ಮದ್ಯದ ಬಾಟಲಿ, ಪ್ಲಾಸ್ಟಿಕ್ ಕಸ ಹೆಚ್ಚಳ: ಕೇವಲ ಸೌಂದರ್ಯ ಸವಿಯಲು ಪ್ರವಾಸಿಗರು ಬರುತ್ತಿದ್ದಲ್ಲಿ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಇಲ್ಲಿಗೆ ಬರುವ ಹೊರ ಊರಿನ ಕಿಡಿಗೇಡಿಗಳು ಮದ್ಯಪಾನ, ಧೂಮ ಪಾನ ಮೋಜು ಮಸ್ತಿ ಮಾಡಿ ಮದ್ಯದ ಬಾಟಲಿಗಳನ್ನು ಎಲ್ಲಿ ಬೇಕೆಂದರಲ್ಲಿ ಎಸೆಯುತ್ತಿದ್ದಾರೆ. ಮದ್ಯದ ಬಾಟಲಿಗಳು ಅಲ್ಲಲ್ಲಿ ಒಡೆದು ಚೂರಾಗುವುದರಿಂದ ಗ್ರಾಮದಲ್ಲಿರುವ ಜಾನುವಾರು ಗಳು ಹಾಗೂ ಕಾಡು ಪ್ರಾಣಿಗಳ ಕಾಲುಗಳಿಗೆ ಒಡೆದ ಗಾಜಿನ ಚೂರುಗಳು ಚುಚ್ಚುತ್ತಿದ್ದು, ಇದರಿಂದ ವನ್ಯಜೀವಿಗಳು ವಿನಾಕಾರಣ ತೊಂದರೆ ಅನುಭವಿ ಸಬೇಕಾಗಿದೆ. ಕೇವಲ ಮದ್ಯದ ಬಾಟಲಿಗಳನ್ನು ಮಾತ್ರವಲ್ಲ ಎಲ್ಲಿ ಬೇಕೆಂದರಲ್ಲಿ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಲೋಟಗಳು, ಪ್ಲಾಸ್ಟಿಕ್ ತಟ್ಟೆಗಳನ್ನು, ಕಾಗದದ ಪಟ್ಟಣ ಗಳನ್ನು ಬಿಸಾಡುತ್ತಿದ್ದು ಇದರಿಂದ ಪರಿಸರದ ಮೇಲೆ ನೇರ ಹಾನಿಯುಂಟಾಗುತ್ತಿದೆ.
ಪ್ರಾಣಿಗಳಿಗೆ ಮಾರಕವಾದ ಪ್ಲಾಸ್ಟಿಕ್: ನದಿಯ ನೀರನ್ನು ಹಾಗೂ ಪ್ರವಾಸಿಗರು ಎಸೆದ ಚೂರುಪಾರು ಆಹಾರವನ್ನು ಕಾಡುಪ್ರಾಣಿಗಳು ತಿನ್ನಲು ಹೋಗಿ ಪ್ಲಾಸ್ಟಿಕ್ ತಿನ್ನುತ್ತಿದ್ದು, ಗಂಟಲಿನಲ್ಲಿ ಪ್ಲಾಸ್ಟಿಕ್ ಸಿಕ್ಕಿ ಹಾಕಿ ಕೊಂಡು ಹಲವು ವನ್ಯಪ್ರಾಣಿಗಳು ಸಾವನ್ನಪ್ಪಿರುವ ವರದಿಗಳು ಇದೆ. ಇದಿಷ್ಟು ಸಾಲದಂತೆ ಹೊರ ಊರಿನಿಂದ ಬರುವ ಕೆಲವು ಮಹಿಳೆಯರು ಅಸಭ್ಯ ವಾಗಿ ಬಟ್ಟೆಗಳನ್ನು ಧರಿಸಿ ಬರುತ್ತಿರುವುದರಿಂದ ಇಲ್ಲಿನ ಸಂಸ್ಕೃತಿಗೂ ಸಹ ಧಕ್ಕೆಯುಂಟಾಗುತ್ತಿದೆ. ಕೆಲವು ಹುಡುಗ, ಹುಡುಗಿಯರು ನೈತಿಕತೆಯೆ ಗೆರೆಯನ್ನು ದಾಟಿ ವರ್ತಿಸುತ್ತಿರುವುದು ಸ್ಥಳೀಯರಿಗೆ ಮುಜು ಗರದ ವಿಷಯವಾಗಿದೆ.
ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಿ: ಈ ಹಿನ್ನೆಲೆ ಯಲ್ಲಿ ತಾಲೂಕು ಆಡಳಿತ, ಗ್ರಾಮ ಪಂಚಾಯತಿ ಯವರು ಇತ್ತ ಗಮನವರಿಸಿ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರು, ಕುಳಿತುಕೊಳ್ಳುವ ತಾಣ, ಸಾರಿಗೆ, ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಿ ಪ್ರವಾಸಿಗರ ಮೇಲೆ ಸೂಕ್ತ ನಿಯಂತ್ರಣ ಹೇರಬೇಕಾಗಿದೆ.
ಇಲ್ಲದಿದ್ದಲ್ಲಿ ಕಾಗಿನಹರೆಯ ಸೌಂದರ್ಯ ಕಿಡಿಗೇಡಿಗಳಿಂದ ಶಾಶ್ವತವಾಗಿ ಹದಗೆಡುವುದರಲ್ಲಿ ಯಾವುದೇ ಅನುಮಾನವಿಲ್ಲ.
● ಸುಧೀರ್ ಎಸ್.ಎಲ್