ಕನ್ನಡ ಭಾಷೆ ಮೃತ ಭಾಷೆ ಪಟ್ಟಿ ಸೇರಬಾರದು; ಉಪನ್ಯಾಸಕ ಗಿರೀಶ್
ಎಲ್ಲರೂ ಪುಸ್ತಕ ಹಾಗೂ ಸಾಹಿತಿಗಳು ರಚಿಸಿದ ಗ್ರಂಥ ಓದುವ ಹವ್ಯಾಸ ಬೆಳಸಿಕೊಳ್ಳಬೇಕು
Team Udayavani, Apr 21, 2022, 6:30 PM IST
ಹೊಳೆನರಸೀಪುರ: ಕನ್ನಡ ಭಾಷೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು, ನಮ್ಮ ಕನ್ನಡ ಭಾಷೆ ಎಂದೂ ಮೃತ ಭಾಷೆಗಳ ಪಟ್ಟಿಗೆ ಹೋಗಬಾರದು ಅನ್ನುವುದೇ ಆದಲ್ಲಿ ನಮ್ಮ ಶ್ರಮ ಖಂಡಿತ ಬೇಕು. ಮುಂದಿನ ಪೀಳಿಗೆ ಅದನ್ನು ಕೊಂಡೊಯ್ಯಬೇಕು ಎಂದು ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಗಿರೀಶ್ ತಿಳಿಸಿದರು.
ತಾಲೂಕು ಕಸಾಪ ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಣೇಶ್ವರ ದೇಗುಲದ ಆವರಣದಲ್ಲಿ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮೈಸೂರಿನ ರಾಜ ಕೃಷ್ಣರಾಜ ಒಡೆಯರ್ ಇದ್ದಂತಹ ಕಾಲದಲ್ಲಿ ನಾವು ಯಾಕೆ ಸಾಹಿತ್ಯ ಹರಡುವಂತಹ ಕೆಲಸ ಮಾಡಬಾರದು ಎಂದು ಸರ್.ಎಂ.ವಿಶ್ವೇಶ್ವರಯ್ಯನವರು 1915 ರಲ್ಲಿ ಕಸಾಪ ಹುಟ್ಟು ಹಾಕಿದರು. ಕಾರಣ ಸತ್ಯ ಮತ್ತು ಸಾಹಿತ್ಯವನ್ನು ಸೇರಿಸಿ ಅದನ್ನು ಪ್ರಜೆಗಳಿಗೆ ಉಣಬಡಿಸುವುದನ್ನು ಸಾಹಿತ್ಯ ಎಂಬ ಪರಿ ಕಲ್ಪನೆಯಿದೆ. ಇದರ ಮೂಲ ಒಂದು ದೃಷ್ಟಿಕೋನ ವನ್ನು ಗ್ರೀಕ್ ಸಾಹಿತ್ಯದಲ್ಲಿ ನೋಡಬಹುದಾಗಿದೆ.
ಬಹಳಷ್ಟು ಭಾಷೆಗಳು ಸತ್ತ ಭಾಷೆಗಳಾಗಿವೆ:
ಭಾರತದಲ್ಲಿ 1662 ಭಾಷೆಗಳು ಪ್ರಚಲಿತದಲ್ಲಿವೆ. ಪ್ರಪಂಚದಾದ್ಯಂತ 10 ಸಾವಿರ ಭಾಷೆಗಳಿವೆ. ಆದರೆ ಆಘಾತಕಾರಿ ಸಂಗತಿಯೆಂದರೆ 7200ಕ್ಕೂ ಹೆಚ್ಚು ಭಾಷೆಗಳನ್ನು ಸತ್ತ ಭಾಷೆಗಳು ಎಂದು ಪಟ್ಟಿ ಮಾಡಿಟ್ಟಿದ್ದಾರೆ. ಪಾಕೃತ, ಸಂಸ್ಕೃತ ಭಾಷೆಯೂ ಸಹ ತನ್ನ ಸ್ಥಾನ ಪಡೆದುಕೊಳ್ಳುವ ಸ್ಥಿತಿಗೆ ತಳ್ಳಲ್ಪಡುತ್ತಾ ಇದೆ. ಹೀಗೆ ಸಾಹಿತ್ಯವನ್ನು ಹರಡುವುದು ಭಾಷೆ, ಲಿಪಿಯ ಮೂಲಕ ಎಂದು ತಿಳಿಸುತ್ತಾ ಹೊಸ, ಹೊಸ ಭಾಷೆ ಲಿಪಿ ಹುಟ್ಟಿಕೊಳ್ಳುತ್ತಿವೆ. ಹಳೆಯದು ಕಳಚಿಕೊಳ್ಳುತ್ತಿದೆ
ಎಂದು ಆತಂಕ ವ್ಯಕ್ತ ಪಡಿಸಿದರು.
ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ದೇವರಾಜು ಮಾತನಾಡಿ, ಎಲ್ಲರೂ ಪುಸ್ತಕ ಹಾಗೂ ಸಾಹಿತಿಗಳು ರಚಿಸಿದ ಗ್ರಂಥ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಏಕೆಂದರೆ ಪುಸ್ತಕ ಕೊಂಡು ಓದುವುದರಿಂದ ಭಾಷೆಯ ಬೆಳವಣಿಗೆ ಒಂದು ಕಡೆಯಾದ್ರೆ, ಇದರಲ್ಲಿ ಕೃಷಿ ಮಾಡುವವರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಪರಿಷತ್ ಮುನ್ನಡೆಸಬೇಕು: ಕಸಾಪ ಮಾಜಿ ಅಧ್ಯಕ್ಷ ರಾದ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಪ್ರಾಮಾಣಿಕವಾಗಿ ದುಡಿಯಬೇಕು. ಆ ನಿಟ್ಟಿನಲ್ಲಿ ಕಸಾಪ ಉತ್ಸಾಹಿಗಳು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪರಿಷತ್ತನ್ನು ಮುನ್ನೆಡಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಎಲ್ಲರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ: ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ ಮಾತನಾಡಿ, ಮಾಜಿ ಸಮ್ಮೇಳನದ ಅಧ್ಯಕ್ಷ ರು, ಮಾಜಿ ಕಸಾಪ ಅಧ್ಯಕ್ಷರು, ಹಿರಿಯರ ಮಾರ್ಗದರ್ಶನದಲ್ಲಿ ಸಭೆ ಕರೆದು ಯಾವ ಕಾರ್ಯಕ್ರಮ ಮಾಡಬೇಕು ಎಂದರು.
ಷಣ್ಮುಗಯ್ಯ ಪ್ರಾರ್ಥನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಮಂಜುನಾಥ ಗುಪ್ತ ಸ್ವಾಗತಿಸಿದರೆ ಮತ್ತೂಬ್ಬ ಗೌರವ ಕಾರ್ಯದರ್ಶಿ ಕೆ.ಶಿವ ಕುಮಾರಾಚಾರಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.