ಕಾನೂನಾಯಣ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮ
Team Udayavani, Jul 22, 2019, 4:01 PM IST
ಬೇಲೂರು ತಾಲೂಕು ಅರೇಹಳ್ಳಿ ಸಂತೋಷ ನಗರದಲ್ಲಿರುವ ಅಂಗನ ವಾಡಿ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಜ್ಞಾನವಿಕಾಸ ಕಾರ್ಯಕ್ರಮ ನಡೆಯಿತು.
ಬೇಲೂರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಅರೇಹಳ್ಳಿ ಸಂತೋಷನಗರದ ಅಂಗನವಾಡಿ ಕೇಂದ್ರದಲ್ಲಿ ಕಾನೂನಾಯಣ ಚಲನಚಿತ್ರ ಪ್ರದರ್ಶನ ಹಾಗೂ ಮಹಿಳಾ ಸ್ವಾವಲಂಬನಾ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಸಮನ್ವಯಾಧಿಕಾರಿ ಜಯಲಕ್ಷ್ಮೀ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘದ ವತಿಯಿಂದ ಮಹಿಳೆಯರ ಸ್ವಾವಲಂಬನೆ ಹಾಗೂ ಜ್ಞಾನಾಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಿಳೆಯ ರಲ್ಲಿರುವ ಕೀಳರಿಮೆ ನಿವಾರಿಸುವ ದೃಷ್ಟಿಯಿಂದ ಕಾನೂ ನಾಯಣ ಎಂಬ ಚಲನಚಿತ್ರ ಪ್ರದರ್ಶನ ಮಾಡುವ ಮೂಲಕ ಕಾನೂನಾತ್ಮಕವಾಗಿ, ಸಾಮಾ ಜಿಕವಾಗಿ ಸದೃಢ ಜೀವನ ನಡೆಸುವ ಶಕ್ತಿ ಯನ್ನು ಇಮ್ಮಡಿಗೊಳಿಸಲು ಮಹತ್ವದ ಪಾತ್ರ ವಹಿಸು ತ್ತದೆ. ಅಲ್ಲದೇ ಒಬ್ಬ ಮಹಿಳೆ ಜ್ಞಾನವನ್ನು ಬೆಳೆಸಿಕೊಂಡರೆ ತನ್ನ ಕುಟುಂಬದಲ್ಲಾಗಲೀ, ಹೊರಗಿನ ಸಮಾಜದಲ್ಲಾಗಲಿ ಹೇಗೆ ಆರ್ಥಿಕವಾಗಿ ಶಕ್ತಳಾಗಬಲ್ಲಳು ಎಂಬ ಅಂಶಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಅರೇಹಳ್ಳಿ ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ, ಸೇವಾ ಪ್ರತಿನಿಧಿ ಹೇಮಾವತಿ, ದಾಕ್ಷಾಯಣಿ ಕವಿತಾ ಮುಂತಾದವರು ಉಪಸ್ಥಿತರಿದ್ದರು.