Loan: ಸಾಲ ತೀರಿಸದಕ್ಕೆ ಮನೆಗೆ ಬೀಗ ಜಡಿದು ಮಹಿಳೆ ಹೊರದಬ್ಬಿದ ಬ್ಯಾಂಕ್ !
Team Udayavani, Nov 24, 2023, 2:23 PM IST
ಆಲೂರು: ಬ್ಯಾಂಕ್ ಸಾಲ ತೀರಿಸದ ಅರೋಪ ಹೊತ್ತಿದ್ದ ಒಂಟಿ ಮಹಿಳೆಯನ್ನ ಬ್ಯಾಂಕ್ ನವರು ಮನೆಯಿಂದ ಹೊರಗೆ ಹಾಕಿರೋ ಪ್ರಕರಣ ಕಾರಗೋಡು ಗ್ರಾಮದಲ್ಲಿ ನಡೆದಿದೆ.
ಕನಿಷ್ಠ ಮಾನವೀಯತೆಯನ್ನೂ ಮರೆತು ಒಂಟಿ ಮಹಿಳೆ ಪಾರ್ವತಮ್ಮಳನ್ನು ಮನೆಯಿಂದ ಹೊರ ಹಾಕಿರುವ ಬ್ಯಾಂಕ್ ಸಿಬ್ಬಂದಿಗಳ ಕಾರ್ಯದ ಬಗ್ಗೆ ಮಹಿಳೆ ಕಣ್ಣೀರು ಶಾಪ ಹಾಕುತ್ತಾ ಆಹಾರ ವಿಲ್ಲದೆ ಮನೆ ಹೊರಗೆ ಇದ್ದಾರೆ. ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ಸೇರಿಸಿ ಬ್ಯಾಂಕ್ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಕನಿಷ್ಠ ದನದ ಕೊಟ್ಟಿಗೆ ಬಿಡಿ ಎಂದರೂ ಬಿಡದೆ ಬೀಗ ಜಡಿದಿದ್ದಾರೆ.
ಪತಿಯಿಂದ ದೂರವಾಗಿದ್ದ ಪಾರ್ವತಮ್ಮ ತನ್ನ ಪಾಲಿನ ಆಸ್ತಿಯನ್ನು ಸಂಬಂಧಿಕ ರಾಯರ ಕೊಪ್ಪಲು ಗ್ರಾಮದ ರುದ್ರಪ್ಪ ಎಂಬುವವರಿಗೆ ಬರೆದಿದ್ದರು. ಇದರ ಬದಲಿಗೆ ರಾಯರಕೊಪ್ಪಲು ಗ್ರಾಮದಲ್ಲಿ ಮನೆ ಬರೆದುಕೊಡುವ ತೀರ್ಮಾನವಾಗಿತ್ತು. ರುದ್ರಪ್ಪ ಅದೇ ಜಮೀನಿನ ಮೇಲೆ 10 ಲಕ್ಷ ರೂ.ಸಾಲ ಪಡೆದಿದ್ದರು.
ಸಾಲ ತೀರಿಸದೆ ಇದ್ದುದರಿಂದ ರಾಯರಕೊಪ್ಪಲು ಕೆನರಾ ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದಿಂದ ಆದೇಶ ಪಡೆದು ಮನೆಯನ್ನು ವಶಕ್ಕೆ ಪಡೆದು ಬೀಗ ಜಡಿದಿದ್ದಾರೆ ಎಂದು ತಿಳಿದು ಬಂದಿದೆ.
ವೃದ್ಧೆ ಪಾರ್ವತಮ್ಮ ಮಾತನಾಡಿ, ಕಾರಗೋಡು ಗ್ರಾಮದ ರುದ್ರಪ್ಪ ಎಂಬುವವರು ನಮಗೆ ಹತ್ತಿರದ ಸಂಬಂಧಿಕರಾಗಿದ್ದು, ಕಷ್ಟ-ಸುಖಗಳಿಗೆ ಸ್ಪಂದಿಸುವ ನಾಟಕವಾಡಿ ಹಣ ನೀಡದೇ ನಮ್ಮಿಂದ ಮೋಸ ಮಾಡಿ ಜಮೀನು ಬರೆಸಿಕೊಂಡ ನಂತರ ರಾಯರಕೊಪ್ಪಲು ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಜಮೀನಿನ ಮೇಲೆ 10 ಲಕ್ಷ ರೂ ಸಾಲ ಪಡೆದು ಸಾಲ ತೀರಿಸದೇ ಸಾಲದ ಮೊತ್ತ ಸುಮಾರು 45 ಲಕ್ಷ ರೂ.ಗೆ ಹೇರಿದೆ.
ಬ್ಯಾಂಕ್ ನವರು ಏಕಾಏಕಿ ಬಂದು ನಮ್ಮನ್ನು ಹೊರಗಿಟ್ಟು ಮನೆ ಹಾಗೂ ದನ ಕಟ್ಟುವ ಕೊಟ್ಟಿಗೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ದನ-ಕರುಗಳು ಹೊರಗಡೆ ಇದ್ದು ರಾತ್ರಿಯಾದರೆ ಕಾಡಾನೆಗಳು ಮನೆ ಸುತ್ತಾ ಓಡಾಡುತ್ತವೆ. ಈ ಇಳಿ ವಯಸ್ಸಿನಲ್ಲಿ ನನ್ನ ಬದುಕು ಬೀದಿಗೆ ಬಿದ್ದಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಮೋಸ ಮಾಡಿ ಜಮೀನು ಬರೆಸಿಕೊಂಡಿಲ್ಲ 9.5ಲಕ್ಷಕ್ಕೆ ಜಮೀನು ಕೊಂಡುಕೊಂಡಿದ್ದೇನೆ. ನಾನು ಹನ್ನೆರಡು ವರ್ಷಗಳ ಹಿಂದೆ 7.5 ಎಕರೆ ಜಮೀನಿಗೆ 9.5 ಲಕ್ಷ ರೂ ಹಣ ನೀಡಿ ಜಮೀನು ಕೊಂಡು ಕೊಂಡಿದ್ದೇನೆ ಅದರೆ, ಪಾರ್ವತಮ್ಮ ತಂಗಿಯ ಮೂಲಕ ತಕರಾರು ತಗೆದು ಪುನಃ 2 ವರೆ ಎಕರೆ ಜಮೀನು ಪಡೆದಿದ್ದಾರೆ. ಉಳಿದಿರುವ ಜಮೀನಿನ ಮೇಲೆ ಕೆನರಾ ಬ್ಯಾಂಕ್ನಲ್ಲಿ ಸಾಲವನ್ನು ಪಡೆ ದಿದ್ದೇನೆ. ಅದರೆ, ಜಮೀನು ನೀಡಿದ ಪಾರ್ವತಮ್ಮ ತನ್ನ ತಂಗಿ ಮೂಲಕ ಪುನಃ ಉಳಿದ ಜಮೀನಿನ ಮೇಲೆ ಕೋರ್ಟ್ ಗೆ. ನಾವು 10 ವರ್ಷಗಳಿಂದ ಕೈಯಲ್ಲಿದ್ದ ಹಣ ಕಳೆದುಕೊಂಡು ಕೋರ್ಟ್ ಸುತ್ತಿದ್ದೇನೆ. ಈಗ ಈ ಜಮೀನಿಗಾಗಿ ಸಾಲ ಮಾಡಿಕೊಂಡಿದ್ದೇನೆ. ಬ್ಯಾಂಕ್ ನವರು ಜಮೀ ನನ್ನು 66ಲಕ್ಷ ರೂ.ಗೆ ಹರಾಜು ಮಾಡಿದ್ದಾರೆ. 45 ಲಕ್ಷ ತಿರುವಳಿ ಮಾಡಿಕೊಂಡು ಉಳಿದ ಹಣವನ್ನು ನಮಗೆ ನೀಡುತ್ತಾರೆ ಎಂದರು.