ನಾಲ್ಕು ವರ್ಷವಾದರೂ ಸಿಗದ ವಿದ್ಯುತ್ ಸಂಪರ್ಕ
Team Udayavani, Apr 2, 2021, 2:07 PM IST
ಆಲೂರು: ತಾಲೂಕಿನಲ್ಲಿ ಸರ್ಕಾರದಿಂದ ಕೊಳವೆ ಬಾವಿ ಕೊರೆದು ನಾಲ್ಕು ವರ್ಷವಾದರೂ ವಿದ್ಯುತ್ ಕಲ್ಪಿಸಿ ಕೊಡದೆ ರೈತರು ಕಂಗಾಲಾಗಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಗಾದೆ ಮಾತಿನಂತೆ ಹೇಮಾವತಿ ಪುನರ್ವಸತಿ ನಿಗಮದಿಂದ ಪರಿಶಿಷ್ಟ ಜಾತಿ ಹಾಗೂ ಜನಾಂಗದವರಿಗೆ ಕೊಳವೆ ಬಾವಿಕೊರೆಸಿಕೊಟ್ಟು ನಾಲ್ಕು ವರ್ಷಗಳೇ ಕಳೆದರೂ ವಿದ್ಯುತ್ ನೀಡದೇ ವಂಚಿಸುತ್ತಿರೆಂದು ಆಲೂರು ತಾಲೂಕಿನಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಮುತ್ತಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ 35 ರಿಂದ 40 ಕೊಳವೆ ಬಾವಿಗಳನ್ನ ಸರ್ಕಾರ ಹೇಮಾವತಿ ಪುನರ್ವಸತಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಿಂದ ನಾಲ್ಕು ವರ್ಷಗಳ ಹಿಂದೆ ಕೊರೆಸಿಕೊಟ್ಟಿದೆ ಅಧಿಕಾರಿಗಳ ಹಾಗೂ ವಿದ್ಯುತ್ ಗುತ್ತಿಗೆದಾರರಬೇಜವಾಬ್ದಾರಿತನದಿಂದ ವಿದ್ಯುತ್ ಸರಬರಾಜು ಮಾಡದೇಕೊರೆದ ಕೊಳವೆ ಬಾವಿ ಹಾಗೂ ಅದಕ್ಕೆ ಅಳವಡಿಸಿರುವ ಮೋಟಾರು ಸಂಪೂರ್ಣವಾಗಿ ಹಾಳಾಗಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಸುಮ್ಮನೆಅಲೆಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.ನಾಲ್ಕು ವರ್ಷಗಳ ಹಿಂದೆ ಸರ್ಕಾರ ಹೇಮಾವತಿ ಪುನರ್ವಸತಿ ನಿಗಮದಿಂದ ಕೊಳವೆ ಬಾವಿ ಕೊರೆಸಿ ಕೊಟ್ಟಿದೆಆದರೆ ಹೇಮಾವತಿ ಪುನರ್ವಸತಿ ನಿಗಮದ ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರು ಹಣ ಕೀಳುವಉದ್ದೇಶದಿಂದ ವಿದ್ಯುತ್ ಸರಬರಾಜು ನೀಡದೆ ಕಾಲಾಹರಣ ಮಾಡುತ್ತಿದ್ದಾರೆ ಎಂದು ಫಲಾನುಭವಿ ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಜಮೀನಿನಲ್ಲಿ ನೀರಿಲ್ಲದೆ ಬರ ಬಂದು ಕಾಳು ಮೆಣಸು ಒಣಗಿದೆ. ಅಧಿಕಾರಿಗಳು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕೂಡಲೆ ಕಲ್ಪಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಧರಣಿ ಅನಿವಾರ್ಯ ●ಮೋಹನ್ ಕಾಡ್ಲೂರು,ಭಾರತ ಪರಿವರ್ತಾನಾ ಸಂಘಟನೆ ಜಿಲ್ಲಾ ಉಪಾಧ್ಯಕ್ಷರು
ಸಂಬಂಧಪಟ್ಟ ಇಲಾಖೆ ಹಾಗೂ ವಿದ್ಯುತ್ ಗುತ್ತಿಗೆದಾರರು ಸಂಪೂರ್ಣ ಕೆಲಸ ಮುಗಿಸಿ ವಿದ್ಯುತ್ ಲೈನ್ ಪರಿವೀಕ್ಷಣೆ ಹಾಗೂ ಟಿಎಕ್ಯೂಸಿ ಒಪ್ಪಿಗೆ ಪತ್ರ ನೀಡಿದರೆ ಅದಷ್ಟು ಬೇಗ ವಿದ್ಯುತ್ ಸರಬರಾಜು ಮಾಡಲಾಗುವುದು. ● ರಂಗೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ