ಮಲೇರಿಯಾ ನಿಯಂತ್ರಣ ಅರಿವು ಮೂಡಿಸಿ: ಡೀಸಿ
Team Udayavani, Jun 22, 2019, 3:00 AM IST
ಹಾಸನ: ಜಿಲ್ಲೆಯಲ್ಲಿ ಮಲೇರಿಯಾ ಮತ್ತು ಕ್ಷಯ ರೋಗ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಮತ್ತು ಕ್ಷಯ ನಿಯಂತ್ರಣ ಕ್ರಮಗಳ ಸಂಬಂಧ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರಿವು ಅಗತ್ಯ: ಮಲೇರಿಯಾ ನಿಯಂತ್ರಣದ ಬಗ್ಗೆ ಜನರಿಗೆ ವ್ಯಾಪಕ ಅರಿವು ಮೂಡಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳ ವ್ಯಾಪ್ತಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಮೂಲಗಳನ್ನು ನಾಶ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಹೆಚ್ಚಿನ ಪ್ರಚಾರ ನೀಡಿ: ವಿಶೇಷವಾಗಿ ಎಲ್ಲಾ ಕೊಳಚೆ ಪ್ರದೇಶಗಳಲ್ಲಿ ಆಟೋಗಳ ಮೂಲಕ ಪ್ರಚಾರ ಮತ್ತು ಮನೆ, ಮನೆ ಭೇಟಿ ಕಾರ್ಯ ಕೈಗೊಳ್ಳಬೇಕು. ಸ್ವತ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆ ನಗರಸಭೆ, ಪುರಸಭೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಮಲೇರಿಯಾ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ವಾರ್ತಾ ಇಲಾಖೆ ವತಿಯಿಂದಲೂ ಹೆಚ್ಚಿನ ಪ್ರಚಾರ ನೀಡಬೇಕೆಂದು ತಿಳಿಸಿದರು.
ಮಲೇರಿಯಾ ನಿಯಂತ್ರಣಗಳ ಬಗ್ಗೆ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧೋಪಚಾರ ಇರಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಕಾಲುವೆ, ಕೆರೆ ಕಟ್ಟೆ, ಚೆಕ್ ಡ್ಯಾಂಗಳನ್ನು ಲಾರ್ವಾ ಹಾರಿ ಮೀನುಗಳಾದ ಗಪ್ಪು- ಗಾಂಬೂಸಿಯಾ ಬಿಟ್ಟು ನಿರ್ವಹಣೆ ಮಾಡಬಹುದೆಂದರು.
ಪರಿಶೀಲನೆ ನಡೆಸಿ: ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಕಾರ್ಯಾಗಾರ, ವಿಭಾಗೀಯ ಕೇಂದ್ರಗಳಲ್ಲಿ ಸೊಳ್ಳೆಗಳು ಉತ್ಪನ್ನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳ ಸುತ್ತಮುತ್ತ ಸೊಳ್ಳೆಗಳ ಲಾರ್ವಾ ಬೆಳೆಯದಂತೆ ನಿಗಾ ವಹಿಸಬೇಕು. ತಾಯಿ ಮರಣ, ಶಿಶು ಮರಣ, ಹೆರಿಗೆ ವರದಿ, ರಾಷ್ಟ್ರೀಯ ಅಭಿಯಾನದ ಕಾರ್ಯಕ್ರಮ ಪರಿಶೀಲನೆ ಹಾಗೂ 108 ಆ್ಯಂಬುಲೆನ್ಸ್ ವಾಹನಗಳ ಸೇವೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಜನಾರ್ದನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜಗೋಪಾಲ್, ವಿವಿಧ ಕಾರ್ಯಕ್ರಮ ಅಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಇದ್ದರು.
ಮುಂಜಾಗ್ರತೆ ಇರಲಿ: ಎಲ್ಲಾ ನಗರ ಸ್ಥಳೀಯ ಸಂಸ್ಥೆ, ಕಾರ್ಖಾನೆ ತ್ಯಾಜ್ಯ, ಕಸ ವಿಲೇವಾರಿಯನ್ನು ನಿಗದಿತವಾಗಿ ಮಾಡಿ ಆವರಣ ಸ್ವತ್ಛವಾಗಿಡಬೇಕು. ಮಲೇರಿಯಾ ಸಮಸ್ಯಾತ್ಮಕ ಪ್ರದೇಶಗಳಿಂದ ಹಾಗೂ ಬೇರೆ ರಾಜ್ಯಗಳನ್ನು ಭೇಟಿ ಮಾಡಿ ಬಂದವರ ರಕ್ತ ಪರೀಕ್ಷೆ ಮಾಡಿಸಿ ಮುಂಜಾಗ್ರತೆ ವಹಿಸಿ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.