ಈ ಬಾರಿ ಬಿಎಸ್ಪಿ ಕಿಂಗ್ ಮೇಕರ್: ಮಹೇಶ್
Team Udayavani, Apr 6, 2019, 2:55 PM IST
ಹಾಸನ: ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಕ್ಷ ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪರ್ಯಾಯವಾಗಿ ಮೂರನೇ ಶಕ್ತಿಯಾಗಿ ಉದಯವಾಗಲಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸಾಧ್ಯತೆಯಿದ್ದು, ಎನ್ಡಿಎ ಹಾಗೂ ಯುಪಿಎಗೆ ಸ್ಪಷ್ಟ ಬಹುಮತ ಸಿಗದ ಸಂದರ್ಭದಲ್ಲಿ ಬಿಎಸ್ಪಿ ಕಿಂಗ್ ಇಲ್ಲವೇ ಕಿಂಗ್ ಮೇಕರ್ ಆಗಲಿದೆ ಎಂದರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಎಸ್ಪಿ ಯಾವುದೇ ರಾಜ ಕೀಯ ಪಕ್ಷದೊಂದಿಗೂ ಚುನಾವಣಾ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಸ್ಪರ್ಧಿಸಿದೆ. ಹಾಸನ ಮತ್ತು ಮಂಡ್ಯ ಸೇರಿದ ರಾಜ್ಯದ 5 -6 ಕ್ಷೇತ್ರಗಳಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಇದೆ. ಈ ಎರಡೂ ಪಕ್ಷಗಳಿಗೆ ಹೊರತಾದ ಮತ ದಾರರು ಬಿಎಸ್ಪಿಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ.
ಹಾಸನ ದಲ್ಲೂ ಬಿಎಸ್ಪಿ ಅಭ್ಯರ್ಥಿ ವಿನೋದ್ರಾಜು ಅವರಿಗೆ ಇಂತಹ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಬಹುಜನ ಪಕ್ಷದ ಮುಖಂಡರಾದ ಎ.ಪಿ. ಅಹಮದ್, ಹರೀಶ್ ಅತ್ನಿ, ತಿರುಪತಿಹಳ್ಳಿ ದೇವರಾಜು, ಗಂಗಾಧರ್ ಬಹುಜನ್ ಅವರು ಉಪಸ್ಥಿತರಿದ್ದರು