ಹೂವಿನ ವ್ಯಾಪಾರಿಗಳಿಗೆ ಎಚ್ಚರಿಕೆ
Team Udayavani, Jul 5, 2020, 6:26 AM IST
ಹಾಸನ: ಕೋವಿಡ್ 19 ನಿಯಂತ್ರಣ ಕ್ರಮ ಗಳನ್ನು ಕೈಗೊಳ್ಳದೇ, ಸ್ವಚ್ಛತೆ ಕಡೆಗಣಿಸಿ ಬೇಜವಾಬ್ದಾರಿಯಿಂದ ವರ್ತಿಸಿದ ಹೂವಿನ ವ್ಯಾಪಾರಿಗಳನ್ನು ಹಾಸನ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಶನಿವಾರ ತರಾಟೆಗೆ ತೆಗೆದುಕೊಂಡರು.
ನಗರದ ಮಹಾವೀರ ಸರ್ಕಲ್, ಗ್ರಂಥಾಲಯ ಕಾಂಪೌಂಡ್ ಪಕ್ಕದಲ್ಲಿನ ಹೂವಿನ ವ್ಯಾಪಾರಿಗಳು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರ ಮಗಿದ ನಂತರ ಹೂವಿನ ತ್ಯಾಜ್ಯವನ್ನು ರಸ್ತೆ ಬದಿಯೇ ಬಿಸಾಡಿ ಹೋಗುತ್ತಿದ್ದರು. ಎಚ್ಚರಿಕೆ ನೀಡಿದರೂ ತಿದ್ದಿಕೊಳ್ಳದಿದ್ದರಿಂದ ನಗರಸಭೆ ಸಿಬ್ಬಂದಿಕೆಲ ವ್ಯಾಪಾರಸ್ಥರ ಹೂವು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದರು.
ನಗರಸಭೆ ಸಿಬ್ಬಂದಿ ವಿರುದ್ಧ ಹರಿಹಾಯ್ದ ಹೂವಿನ ವ್ಯಾಪಾರಿಗಳು ಪೌರಾಯುಕ್ತ ಕೃಷ್ಣಮೂರ್ತಿ ಅವರೊಂ ದಿಗೆ ಮಾತಿನ ಚಕಮಕಿಗಿಳಿದರು. ನಗರ ಸಭೆ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಹಾಕದೇ ವ್ಯಾಪಾರ ಮಾಡುವುದು ಕಂಡು ಬಂದರೆ ಅಂತವರಿಗೆ ದಂಡ ವಿಧಿಸುವುದು ಹಾಗೂ ಪ್ರಕರಣ ದಾಖಲಿಸುವುದಾಗಿ ಪೌರಾಯುಕ್ತರು ಎಚ್ಚರಿಸಿದರು. ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ರೈತ ಸಂಘದ ಮುಖಂಡ ಬಾಬು ಅವರು,
ಕೋವಿಡ್ 19 ನಿಯಂತ್ರಣ ಕ್ರಮ ಗಳನ್ನು ಕೈಗೊಳ್ಳುವ ಬಗ್ಗೆ ಹಾಗೂ ಸ್ವಚ್ಛತೆ ಕಾಪಾಡುವ ಬಗ್ಗೆಯೂ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಸ್ವಚ್ಛತೆಯ ಜವಾಬ್ದಾರಿಯನ್ನು ರೈತ ಸಂಘವೇ ಹೊರಲಿದೆ ಎಂದು ಪೌರಾಯುಕ್ತರಿಗೆ ಭರವಸೆ ನೀಡಿದರು.