ಬ್ಯಾಂಕ್ ನಕಲಿ ಸೀಲ್ ಸೃಷ್ಟಿಸಿ ಪುರಸಭೆಗೆ ಟೋಪಿ
ಪುರಸಭೆ ಎಸ್ಡಿಎ ತಿಗಳಣ್ಣವರ ಕಿತಾಪತಿ! ಶಿಗ್ಗಾವಿ ಠಾಣೆಯಲ್ಲಿ ದೂರು ದಾಖಲು
Team Udayavani, Feb 18, 2021, 7:17 PM IST
ಶಿಗ್ಗಾವಿ: ಬ್ಯಾಂಕ್ನ ನಕಲಿ ಸೀಲ್ ಸೃಷ್ಟಿಸಿ ಪುರಸಭೆಯ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡ ಪುರಸಭೆ ಪ್ರಥಮ ದರ್ಜೆ ಸಹಾಯಕನ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.
ಪಟ್ಟಣದ ಪುರಸಭೆ ಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಮಾಲತೇಶ ವೈ. ತಿಗಳಣ್ಣವರ ಹಣ ದುರ್ಬಳಕೆ ಮಾಡಿಕೊಂಡ ಸಿಬ್ಬಂದಿ. 2010, ಜು.24ರಿಂದ ಪ್ರಭಾರಿ ಕಂದಾಯ ನಿರೀಕ್ಷರಾಗಿ ಸೇವೆ ಸಲ್ಲಿಸುತ್ತಿರುವ ತಿಗಳಣ್ಣವರ ಸಾರ್ವಜನಿಕರು ಮನೆ ಉತಾರ, ಆಸ್ತಿ ತೆರಿಗೆ, ವಾಣಿಜ್ಯ ತೆರಿಗೆ, ಅಗತ್ಯ ವಿವಿಧ ಸೌಲಭ್ಯ ಪಡೆದುಕೊಳ್ಳಲು ಪುರಸಭೆಯ ಬ್ಯಾಂಕ್ ಖಾತೆಗೆ ಪಾವತಿಸಬೇಕಿದ್ದ ಮೊತ್ತವನ್ನು ಸ್ವಂತಕ್ಕೆ ಬಳಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಠಾಣೆಗೆ ದೂರು ನೀಡಿದ್ದಾರೆ.
ಮನೆ ಉತಾರ, ನಾಗರಿಕರಿಗೆ ಅಗತ್ಯ ಸೇವೆ ನೀಡಲು ಪುರಸಭೆ ನಿಗ ದಿಪಡಿಸಿದ ಮೊತ್ತ ಪುರಸಭೆ ಬ್ಯಾಂಕ್ ಖಾತೆಗೆ ಜಮೆ ಮಾಡುವ ನಿಯಮವಿದೆ. ಆದರೆ, ಕಂದಾಯ ನಿರೀಕ್ಷಕ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಹೆಸರಿನಲ್ಲಿ ಹಣ ಸ್ವೀಕೃತ ನಕಲಿ ಸೀಲ್ವೊಂದನ್ನು ಸೃಷ್ಟಿಸಿ ಸಾರ್ವಜನಿಕರಿಂದ ಹಣ ಪಡೆದು ಬ್ಯಾಂಕ್ ಚಲನ್ ಮೇಲೆ ಹಣ ಸ್ವೀಕೃತ ನಕಲಿ ಸೀಲ್ ಹಾಕಿ ರಸೀದಿ ನೀಡಿದ್ದಾರೆ. ಕಂದಾಯ ನೀರೀಕ್ಷಕ ನೀಡುವ ಹಣ ಪಾವತಿಸಿದ ನಕಲಿ ರಸೀದಿ ಸಂಬಂಧಪಟ್ಟ ನೌಕರರಿಗೆ ತೋರಿಸಿ ತಮಗೆ ಬೇಕಿರುವ ಉತಾರ, ಅಗತ್ಯ ಸೇವೆ ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದರು.
ಬೆಳಕಿಗೆ ಬಂತು ಕರಾಮತ್ತು: ಹಣ ತುಂಬಿದ ರಸೀದಿ ನೀಡಿದರೂ ಉತಾರ ನೀಡದಿರುವ ಪುರಸಭೆ ಸಿಬ್ಬಂದಿ ಮೇಲೆ ಹರಿಹಾಯತ್ತಿದ್ದ ವ್ಯಕ್ತಿಯೊಬ್ಬರ ವರ್ತನೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಅವರಿಗೆ ಅನುಮಾನ ಮೂಡಿಸಿದೆ. ತಕ್ಷಣ ಪುರಸಭೆ ಬ್ಯಾಂಕ್ ಖಾತೆಯ ಜಮೆ-ಖರ್ಚು ವರದಿ ತರಿಸಿಕೊಂಡು ಪರಿಶೀಲಿಸಿದ್ದಾರೆ. ಇದರಲ್ಲಿ ಈತ ನೀಡಿರುವ ಬ್ಯಾಂಕ್ ಹಣ ಸ್ವೀಕೃತ ರಸೀದಿ ಹಣ ಜಮೆಯಾಗದಿರುವುದು ದೃಢಪಟ್ಟಿದೆ. ಬಳಿಕ ಕೆಲ ಸದಸ್ಯರ ಸಮ್ಮುಖದಲ್ಲಿ ಮತ್ತೂಮ್ಮೆ ಪುರಸಭೆ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಆರೇಳು ತಿಂಗಳಲ್ಲಿ ಮನೆ, ಇತರೆ ಸೇವೆಗೆ ಸಾರ್ವಜನಿಕರಿಂದ ಸಂಗ್ರಹವಾದ ಹಣ ಜಮೆಯಾಗದಿರುವುದು ಬೆಳಕಿಗೆ ಬಂದಿದೆ.