ಬಸ್ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ
Team Udayavani, Nov 28, 2019, 3:18 PM IST
ಸವಣೂರು: ಅಲ್ಲಿಪೂರ ಮಾರ್ಗವಾಗಿ ಹಾಯ್ದು ಹೋಗುವ ಸಾರಿಗೆ ಸಂಸ್ಥೆಯ ಬಸ್ಗಳನ್ನು ನಿಲುಗಡೆ ಮಾಡುವಂತೆ ಆಗ್ರಹಿಸಿ ಮಂಗಳವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಬಸ್ಗಳ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು.
ಸವಣೂರು ತಾಲೂಕಿನ ಅಲ್ಲಿಪೂರ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ನಿತ್ಯ ಬಸ್ಸಿಗಾಗಿ ಕಾಯುವುದು ಅನಿವಾರ್ಯವಾಗಿದೆ. ಬಸ್ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇನ್ನು ಈ ಮಾರ್ಗದಲ್ಲಿ ಬರುವಂತಹ ಬಸ್ ಗಳು ನಿಲ್ಲುವುದಿಲ್ಲ. ನಿತ್ಯ ಸವಣೂರು ಮತ್ತು
ಲಕ್ಷ್ಮೇಶ್ವರ ಪಟ್ಟಣಕ್ಕೆ ಶಾಲಾ-ಕಾಲೇಜಿಗಾಗಿ ಹೋಗುವ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟಿಸಿದರು. ಅಲ್ಲಿಪೂರ ಮಾರ್ಗವಾಗಿ ಹಾಯ್ದು ಹೋಗುವ ಗದಗ- ಎಡೆಯೂರ, ಗದಗ- ಬೆಂಗಳೂರ, ರೋಣ- ಬೆಂಗಳೂರ, ಗಜೇಂದ್ರಗಡ- ಅರಸಿಕೇರಿ, ಗಜೇಂದ್ರಗಡ- ಶಿವಮೊಗ್ಗ ಹಾಗೂ ಇಳಕಲ್- ಗದಗ ಬಸ್ ಗಳನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆಯ ಸವಣೂರು ಘಟಕದ ಅಧಿಕಾರಿಗಳು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಬೇಡಿಕೆ ಕುರಿತು ಮೇಲಧಿ ಕಾರಿಗಳ ಗಮನಕ್ಕೆ ತರುವ ಮೂಲಕ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಕಾಲೇಜು ವಿದ್ಯಾರ್ಥಿಗಳಾದ ರಮೇಶ ಶಿರಬಡಗಿ, ಆನಂದ ತಿಮ್ಮಾಪೂರ, ಹನುಮಂತ ಶಿಗ್ಗಾಂವಿ, ಶಿವಯೋಗಿ ಪೂಜಾರ, ಹನಮಂತಪ್ಪಬಾರಕೇರ, ಅನೀಲ ತಿಮ್ಮಾಪೂರ, ಶೇಖಪ್ಪ ಲಮಾಣಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳು ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.