ಜಿಗಜಿಣಗಿ ಪರ ಭರ್ಜರಿ ಪ್ರಚಾರ
ಸಚಿವ ಎಂ.ಬಿ. ಪಾಟೀಲ ವಿರುದ್ಧ ನಡಹಳ್ಳಿ ವಾಗ್ಧಾಳಿ
Team Udayavani, Apr 11, 2019, 3:56 PM IST
ಮುದ್ದೇಬಿಹಾಳ: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಸದಸ್ಯರು ಮನೆ ಮನೆಗೆ ತೆರಳಿ ಕರ ಪತ್ರ ಹಂಚಿ ಪ್ರಚಾರ ನಡೆಸಿದರು.
ಮುದ್ದೇಬಿಹಾಳ: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ನೇತೃತ್ವದ ಬಿಜೆಪಿ ಧುರೀಣರು, ಪ್ರಮುಖ ಕಾರ್ಯಕರ್ತರ ತಂಡ ಮಂಗಳವಾರ ಮತ್ತು ಬುಧವಾರ ಪಟ್ಟಣದ ಹಲವು ಬಡಾವಣೆಗಳಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರ ಭರ್ಜರಿ ಪ್ರಚಾರ ನಡೆಸಿದರು.
ಪಿಲೇಕೆಮ್ಮ ನಗರ, ಇಂದಿರಾ ನಗರ, ಸಂಗಮೇಶ್ವರ ನಗರ, ಮುಖ್ಯ ರಸ್ತೆ, ದ್ಯಾಮವ್ವನ ಗುಡಿ ಏರಿಯಾ, ಸರಾಫ್ ಬಜಾರ, ಯಮನೂರಪ್ಪನ ಕಟ್ಟೆ, ವೀರೇಶ್ವರ ನಗರ, ಕುಂಬಾರ ಓಣಿ, ಹೊರಪೇಟ ಗಲ್ಲಿ ಸೇರಿ ಹಲವೆಡೆ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಬಿಜೆಪಿಗೆ ಮತ ಹಾಕುವಂತೆ ಕೇಳಿಕೊಳ್ಳಲಾಯಿತು.
ರೋಡ್ ಶೋಗೆ ಚಾಲನೆ ನೀಡುವುದಕ್ಕೂ ಮುನ್ನ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಶಾಸಕರು, ಗೃಹ ಸಚಿವ ಎಂ.ಬಿ. ಪಾಟೀಲ ವಿರುದ್ಧದ ತಮ್ಮ
ವಾಗ್ಧಾಳಿ ಮುಂದುವರಿಸಿದರು. ನಾವು ಹೊಡಿ ಬಡಿ ಸಂಸ್ಕೃತಿಯವರಲ್ಲ, ಶರಣ ತತ್ವದವರು. ವೀರಶೈವ ಲಿಂಗಾಯತ ಧರ್ಮ ಒಡೆಯುವಲ್ಲಿ ಸಕ್ರಿಯ
ಪಾತ್ರವಹಿಸಿದ್ದ ಸಚಿವ ಪಾಟೀಲರು ಪಶ್ಚಾತ್ತಾಪ ಅನುಭವಿಸಬೇಕು. ಇದು ಸಾಮಾನ್ಯ ಜನರ ಬಯಕೆ ಆಗಿದೆ ಎಂದರು.
ಸಚಿವ ಪಾಟೀಲರ ಬಗ್ಗೆ ಹೇಳಲು ಸಾಕಷ್ಟು ವಿಷಯಗಳು ಇವೆ. ಇನ್ನೂ ಅವರ ವಿರುದ್ಧ ಅಂಥ ಗಂಭೀರ ಆರೋಪ ಮಾಡಿಲ್ಲ. ನನ್ನ ಬಳಿ ಸಾಕಷ್ಟು
ದಾಖಲೆ ಇವೆ. ಅವುಗಳನ್ನೆಲ್ಲ ಒಂದೊಂದಾಗಿ ಬಿಡ್ತೇನೆ. ಆಧುನಿಕ ಭಗೀರಥ ಎನ್ನುವ ಬೋರ್ಡ್ ಹಾಕ್ಕಿಕೊಂಡಿದ್ದಾರೆ. ಆದರೆ ಕಾಲುವೆಯಿಂದ ಎಷ್ಟು ಎಕರೆ ಜಮೀನು ನೀರಾವರಿ ಆಗಿದೆ ಅನ್ನೋದನ್ನು ಬಹಿರಂಗಪಡಿಸಿ. ಕಾಲುವೆ
ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡವರಿಗೆ ಇನ್ನೂವರೆಗೂ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಕಾರಣರಾರು? ಗ್ಲೋಬಲ್ ಟೆಂಡರ್ ಕರೆದದ್ದು, ಟೆಕ್ನಿಕಲ್ ಕಮೀಟಿ ಮಾಡದೆ ಇರುವುದು ಹೀಗೆ ಹತ್ತು ಹಲವು ವೈಫಲ್ಯಗಳನ್ನು ಸಚಿವರು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.
ಧರ್ಮ ಒಡೆಯುವ ಕೆಲಸ ಮಾಡಿದ ಸಚಿವ ಪಾಟೀಲ ಹಿಂದೂ ಸಂಸ್ಕೃತಿ ಪ್ರಕಾರ ಪಶ್ಚಾತ್ತಾಪ ಅನುಭವಿಸಬೇಕು. ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಮಾತುಗಳಿಗೆ ಮಾತ್ರ ಪ್ರತ್ಯುತ್ತರ ಕೊಡುತ್ತೇನೆ ಎನ್ನುವ ದುರಹಂಕಾರ, ದರ್ಪದ ಮಾತುಗಳಿಗೆ ತಕ್ಕ ಶಿಕ್ಷೆಯನ್ನು ಜನತೆ ನೀಡುತ್ತಾರೆ. ಹಣ, ಅಧಿಕಾರದ ಮದದಲ್ಲಿ ತೇಲಾಡುತ್ತಿರುವ ಸಚಿವರಿಗೆ ಪ್ರಶ್ನೆ ಕೇಳುವ ನಮ್ಮ ಹಕ್ಕಿನಿಂದ ಹಿಂದೆ ಸರಿಯೊಲ್ಲ. ಜನ ಸಾಮಾನ್ಯರ ಪ್ರಶ್ನೆಗಳಿಗೂ ಉತ್ತರ ಕೊಡಬೇಕಾದ್ದು ಅವರ ಕರ್ತವ್ಯ. ಸಚಿವರೇ ನಿಮ್ಮನ್ನು ಆರಿಸಿ ತಂದದ್ದು ಇದೇ ಸಾಮಾನ್ಯ ಜನ ಅನ್ನೋದನ್ನ ಮರೀಬೇಡಿ ಎಂದು ಛಾಟಿ ಬೀಸಿದರು.
ಧುರೀಣರಾದ ಎಂ.ಎಸ್. ಪಾಟೀಲ, ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ನಿಂಗಪ್ಪಗೌಡ ಬಪ್ಪರಗಿ, ಪ್ರಭು ಕಡಿ, ಬಿ.ಜಿ. ಜಗ್ಗಲ್, ಸಿದ್ದರಾಜ ಹೊಳಿ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ರಾಜೇಂದ್ರಗೌಡ ರಾಯಗೊಂಡ, ಮನೋಹರ ತುಪ್ಪದ, ಉದಯ್ ರಾಯಚೂರ, ಶರಣು ಬೂದಿಹಾಳಮಠ, ಸಂಗಮೇಶ ಕರಭಂಟನಾಳ, ಭೀಮನಗೌಡ ಪಾಟೀಲ, ಮಹೇಶ ಕೆಂಧೂಳಿ, ಶರಣು ಪಡದಾಳಿ, ಮಂಜು ರತ್ನಾಕರ, ಹನುಮಂತ ನಲವಡೆ, ರಾಜಶೇಖರ ಹೊಳಿ, ಅಶೋಕ ವನಹಳ್ಳಿ, ರಾಘವೇಂದ್ರ ಪತ್ತಾರ, ವಿಜಯ ಬಡಿಗೇರ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಶಾಂತಾ ಹಾವರಗಿ, ಗೌರಮ್ಮ ಹುನಗುಂದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.