ಲಾಕ್ ಡೌನ್- ಸೆಮಿ ಲಾಕ್ ಡೌನ್ ಬಗ್ಗೆ ನಿರ್ಧಾರ: ಸಿಎಂ ಬೊಮ್ಮಾಯಿ..!
Team Udayavani, Jan 4, 2022, 11:50 AM IST
ಕಲಬುರಗಿ: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೋವಿಡ್ ಮತ್ತು ಒಮಿಕ್ರಾನ್ ಹೆಚ್ಚಾಗುತ್ತಿದೆ. ಬರುವ ದಿನದಲ್ಲಿ ಸುದಿರ್ಘ ಕ್ರಮ ಕೈಗೊಳ್ಳಬೇಕಾಗಿದೆ. ಔಷದಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲೆಗಳಿಗೆ ರಜೆ ಬಗ್ಗೆ ತಜ್ಞರನ್ನು ಕೇಳಿ ತೀರ್ಮಾನ ಮಾಡುತ್ತೇವೆ. ಲಾಕ್ ಡೌನ್, ಸೆಮಿ ಲಾಕ್ ಡೌನ್ ಬಗ್ಗೆ ತಜ್ಞರ ಸಭೆಯ ನಂತರ ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಂದು ಸಂಜೆ ಕೋವಿಡ್ ಬಗ್ಗೆ ಸಭೆ ಮಾಡುತ್ತಿದ್ದೇವೆ. ಟಾಸ್ಕಪೋರ್ಸ್ ಸಮಿತಿ ಸದಸ್ಯರಿರುತ್ತಾರೆ. ಕೋವಿಡ್ ಮತ್ತೆ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ ಅನೇಕ ಮಾರ್ಗದರ್ಶನ ನೀಡಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ ವಹಿಸಬೇಕಿದೆ. ಗಡಿಗಳನ್ನು ಬಿಗಿ ಮಾಡಲಾಗಿದೆ. ಇನ್ನಷ್ಟು ಕಟ್ಟೆಚ್ಚರ ವಹಿಸುವ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ:ಮಂಡ್ಯ: ತಮಿಳುನಾಡು ಪ್ರವಾಸಕ್ಕೆ ತೆರಳಿದ್ದ 30 ಮಹಿಳೆಯರಿಗೆ ಕೋವಿಡ್ ಸೋಂಕು ದೃಢ
ಜನರ ಸಹಕಾರ ಕೂಡಾ ಅಗತ್ಯವಿದೆ. ಜನ ಸಹಕಾರ ನೀಡಿದರೆ ಕೋವಿಡ್ ನಿಯಂತ್ರಣ ಮಾಡಬಹುದು. ಗಡಿಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ಸಿಎಂ ಹೇಳಿದರು.
ವೇದಿಕೆ ಮೇಲೆ ಡಿ.ಕೆ. ಸುರೇಶ್, ಅಶ್ವಥ್ ನಾರಾಯಣ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,” ಇದು ಕರ್ನಾಟಕದ ಸಂಸ್ಕೃತಿ ಅಲ್ಲ. ಮಾತಿನಿಂದ ನಮ್ಮ ವಿಚಾರ ಹೇಳಬಹುದು ಆದರೆ ಈ ರೀತಿ ವರ್ತನೆ ಸರಿಯಲ್ಲ ಎಂದರು.