ಅವೈಜ್ಞಾನಿಕ ಯೋಜನೆಗಳಿಂದ ಆತಂಕಕಾರಿ ಬೆಳವಣಿಗೆ
Team Udayavani, Nov 15, 2019, 5:08 AM IST
ಮಡಿಕೇರಿ: ನವಪೀಳಿಗೆಗೆ ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕಿದೆ ಎಂದು ಅರೆಮಾದನಹಳ್ಳಿಯ ಶ್ರೀಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾವೇರಿ ಮಹಾ ಆರತಿ ಬಳಗ, ಕಾವೇರಿ ರಿವರ್ ಸೇವಾ ಟ್ರಸ್ಟ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ ನಡೆದ 100ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ನದಿ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲು ಸರಕಾರದ ಮಟ್ಟದಲ್ಲಿ ಕಾರ್ಯ ಯೋಜನೆ ರೂಪಿಸಲು ಪ್ರಸ್ತಾಪಿಸುವುದಾಗಿ ಭರವಸೆ ವ್ಯಕ್ತಪಡಿಸಿದರು. ನದಿ ಸ್ವಚ್ಚತೆ, ಸಂರಕ್ಷಣೆ ಬಗ್ಗೆ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಬೆಂಬಲ ಸೂಚಿಸುವಂತೆ ಅವರು ಕರೆ ನೀಡಿದರು.
ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.
ಕಾರ್ಯಕ್ರಮದಲ್ಲಿ 100 ತಿಂಗಳುಗಳ ಕಾಲ ನಿರಂತರವಾಗಿ ಆರತಿ ಪೂಜೆ ಸಲ್ಲಿಸಿದ ಅರ್ಚಕ ಕೃಷ್ಣಮೂರ್ತಿ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಮಹಿಳಾ ಭಜನಾ ಮಂಡಳಿ ಸದಸ್ಯರು ನದಿ ತಟದಲ್ಲಿ ಗಿಡ ನೆಟ್ಟು ನಂತರ ಭಜನೆ, ಕೀರ್ತನೆಗಳನ್ನು ಹಾಡಿದರು.
ರಾಜು ತಂಡದಿಂದ ಬೀದಿ ನಾಟಕ ನಡೆಯಿತು. ಸಾಮೂಹಿಕವಾಗಿ ನದಿಗೆ 100 ನೇ ಮಹಾ ಆರತಿ ಬೆಳಗಲಾಯಿತು. ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್, ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್, ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಡಿ.ಆರ್.ಸೋಮಶೇಖರ್, ಕೆ.ಆರ್.ಶಿವಾನಂದನ್, ಮಂಡೇಪಂಡ ಬೋಸ್ ಪಾಲ್ಗೊಂಡಿದ್ದರು.
ಪ್ರಕೃತಿ ಆರಾಧಿಸೋಣೆ
ಸಾನಿಧ್ಯ ವಹಿಸಿ ಮಾತನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಅವೈಜ್ಞಾನಿಕ ಕಾರ್ಯ ಯೋಜನೆಗಳಿಂದ ಪ್ರಕೃತಿಯಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡುಬರುತ್ತಿದೆ. ಪ್ರಕೃತಿಯ ಆರಾಧನೆ ಮಾಡುವ ಮೂಲಕ ನದಿ ಪರಿಸರಗಳ ಉಳಿವು ಸಾಧ್ಯ ಎಂದರು.
9 ವರ್ಷಗಳಿಂದ ಸಂರಕ್ಷಣೆ, ಪಾವಿತ್ರ್ಯ ಬಗ್ಗೆ ಅರಿವು ಮೂಡಿಸುತ್ತಿರುವ ಬಳಗದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಸಂತಕುಮಾರ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್, ಆಂದೋಲನದ ಜಿಲ್ಲಾಧ್ಯಕ್ಷೆ ರೀನಾ ಪ್ರಕಾಶ್ ಮಾತನಾಡಿದರು.