Kerala ಆನೆ ದಂತ ಮಾರಾಟಕ್ಕೆ ಯತ್ನ : ಕೊಡಗಿನ ಇಬ್ಬರು ಸೇರಿ 6 ಮಂದಿಯ ಸೆರೆ
Team Udayavani, Nov 4, 2023, 9:54 PM IST
ಮಡಿಕೇರಿ: ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಕೊಡಗು ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.5 ಕೆ.ಜಿ ತೂಕದ ಅಂದಾಜು 1.5 ಕೋಟಿ ರೂ. ಬೆಲೆ ಬಾಳುವ 1 ಆನೆ ದಂತವನ್ನು ವಶಕ್ಕೆ ಪಡೆಯಲಾಗಿದೆ.
ಕೇರಳದ ಮಾನಂದವಾಡಿಯ ಲಾಡ್ಜ್ ಒಂದರಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಅರಣ್ಯ ಇಲಾಖೆಯ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಫ್ಲೈಯಿಂಗ್ ಸ್ಕ್ವಾಡ್ ಜಂಟಿ ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪಲು ನಿವಾಸಿ ರಾಜು (52), ಪೊನ್ನಂಪೇಟೆಯ ಪಿಲಿಪ್ ಮ್ಯಾಥ್ಯೂ (68) ಕರ್ನಾಟಕದ ಶೆಟ್ಟಿಗಿರಿಯ ಗೆಪ್ (60), ವಯನಾಡಿನ ವಕೇರಿಯ ಸುಧೀಶ್ (36), ಜಸ್ಟಿನ್ ಜೋಸೆಫ್ (24) ಹಾಗೂ ಯೆಲ್ಡೋ (30)ನನ್ನು ಬಂಧಿಸಲಾಗಿದೆ.
ಕರ್ನಾಟಕದಿಂದ ದಂತ ತೆಗೆದುಕೊಂಡು ಹೋಗಿ ಕೇರಳದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಕೇರಳ ಪೊಲೀಸರು, ಸರ್ಚ್ ವಾರೆಂಟ್ ಪಡೆದುಕೊಂಡು ಗೋಣಿಕೊಪ್ಪಲು ಪಟ್ಟಣದಲ್ಲಿಯೂ ಶೋಧ ಕಾರ್ಯ ನಡೆಸಿದ್ದಾರೆ.