ಬಸ್ ಹತ್ತುವ ವೇಳೆ ಮಹಿಳೆಯ ಬ್ಯಾಗ್ ನಿಂದ 9 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಕಳ್ಳರು
Team Udayavani, Aug 25, 2022, 4:33 PM IST
ಗಂಗಾವತಿ : ಬಸ್ ಹತ್ತುವ ಸಂದರ್ಭದಲ್ಲಿ ಸುಮಾರು 9 ಲಕ್ಷ ರೂ. ಮೌಲ್ಯದ 18 ತೊಲೆ ಚಿನ್ನದ ಸರವನ್ನು ಎಗರಿಸಿ ಕಳ್ಳರು ಪರಾರಿಯಾದ ಪ್ರಕರಣ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ನಾಗರತ್ನ ಗೋಪಾಲಶೆಟ್ಟಿ ಹುಲಿಹೈದರ ಎಂಬ ಮಹಿಳೆ ತನ್ನ ಪುತ್ರನ ಜೊತೆ ಗಂಗಾವತಿ ಬಸ್ ನಿಲ್ದಾಣದಲ್ಲಿ ಗಂಗಾವತಿ ಬಾಗಲಕೋಟೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಹುಲಿಹೈದರ್ ಗ್ರಾಮಕ್ಕೆ ತೆರಳಲು ಬಸ್ ಹತ್ತುವ ಸಂದರ್ಭದಲ್ಲಿ ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ 9ಲಕ್ಷ ಮೌಲ್ಯದ 18 ತೊಲೆ ಚಿನ್ನದ ಸರವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಮಹಿಳೆ ಸರದ ಕುರಿತು ಗಾಬರಿಯಾಗಿ ಕಿರುಚಿದಾಗ ಸ್ಥಳದಲ್ಲಿ ಸಾರ್ವಜನಿಕರು ಸೇರಿ ಕಳ್ಳನನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ ಅಷ್ಟೋತ್ತಿಗಾಗಲೇ ಕಳ್ಳರು ನಾಪತ್ತೆಯಾಗಿದ್ದರು.
ಕೂಡಲೇ ಬಸ್ ಸಮೇತ ಚಿನ್ನವನ್ನು ಕಳೆದುಕೊಂಡ ಮಹಿಳೆ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾಳೆ.
ಇದನ್ನೂ ಓದಿ : ಡಿಆರ್ ಡಿಒ ಮುಖ್ಯಸ್ಥರಾಗಿ ಖ್ಯಾತ ವಿಜ್ಞಾನಿ ಸಮೀರ್ ವಿ.ಕಾಮತ್ ನೇಮಕ
ಕೇಸು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಬಸ್ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೆರಾದ ಫೂಟೇಜ್ ಗಳನ್ನು ಮತ್ತು ನಗರದ ಪ್ರಮುಖ ಸ್ಥಳಗಳು ಮತ್ತು ಚಿನ್ನಾಭರಣ ಮಾರಾಟ ಮಾಡುವ ಅಂಗಡಿಗಳ ಸುತ್ತಲೂ ಪೊಲೀಸ್ ಕಾವಲು ಹಾಕಿ ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಚಿನ್ನದ ಸರವನ್ನು ಕಳೆದುಕೊಂಡ ನಾಗರತ್ನ ಎಂಬ ಮಹಿಳೆ ಕಂಪ್ಲಿ ತಾಲೂಕಿನ ದರೂರು ಗ್ರಾಮದಲ್ಲಿ ಜಾತ್ರೆಯನ್ನು ಮುಗಿಸಿಕೊಂಡು ತನ್ನ ಪುತ್ರನ ಜೋಡಿ ಹುಲಿಹೈದರ್ ಗ್ರಾಮಕ್ಕೆ ತೆರಳಲು ಗಂಗಾವತಿಯ ಬಸ್ ನಿಲ್ದಾಣದಲ್ಲಿ ಗಂಗಾವತಿ ಬಾಗಲಕೋಟೆ ಬಸ್ ಹತ್ತುವಾಗ ಈ ಪ್ರಕರಣ ಜರುಗಿದೆ .ಪೊಲೀಸರು ಕೇಸ್ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.