ಚಿಟ್ಟನಹಳ್ಳಿ ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ, ಜಮೀನು ದಾನ ನೀಡಿದ ದಂಪತಿಗಳ ರೋಧನ
ನಿಗದಿತ ಸ್ಥಳದಲ್ಲೆ ನಿರ್ಮಿಸಲು ಶಾಸಕರಿಗೆ ಒತ್ತಾಯ.
Team Udayavani, Aug 5, 2021, 3:37 PM IST
ಪಾಂಡವಪುರ : ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಟ್ಟನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ಅಡ್ಡಿ ಪಡಿಸುತ್ತಿದ್ದು, ನಿಗದಿತ ಸ್ಥಳದಲ್ಲೇ ಟ್ಯಾಂಕ್ ನಿರ್ಮಿಸಬೇಕೆಂದು ಜಮೀನು ದಾನ ನೀಡಿರುವ ವೃದ್ಧ ದಂಪತಿಗಳು ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಒತ್ತಾಯಿಸಿದ್ದಾರೆ.
ಚಿಟ್ಟನಹಳ್ಳಿ ಗ್ರಾಮದಲ್ಲಿನ ಹಳೆಯ ನೀರಿನ ಟ್ಯಾಂಕ್ ಶಿಥಿಲವಾಗಿದ್ದು, ಸರ್ಕಾರ 50ಸಾವಿರ ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಪಂಚಾಯತ್ ರಾಜ್ ಇಲಾಖೆಯ ಮೂಲಕ ಹಣ ಮಂಜೂರು ಮಾಡಿ ಗುತ್ತಿಗೆಯನ್ನೂ ಸಹ ನೀಡಲಾಗಿದೆ.
ಆದರೆ, ಗ್ರಾಮದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಸೂಕ್ತ ಸರ್ಕಾರಿ ಭೂಮಿ ಸಿಗದಿದ್ದ ಕಾರಣ ಗ್ರಾಮದ ಚಿಕ್ಕದೇವಮ್ಮ ಕೃಷ್ಣೇಗೌಡ ಎಂಬ ವೃದ್ಧ ದಂಪತಿಗಳಿಗೆ ಸೇರಿದ ಜಮೀನು ಗ್ರಾಮದಿಂದ ಸುಮಾರು 25 ಅಡಿ ಎತ್ತರದಲ್ಲಿದ್ದು ಟ್ಯಾಂಕ್ ನಿರ್ಮಿಸಲು ಸೂಕ್ತವಾಗಿದೆ ಅದನ್ನು ಕೊಡಿಸಿಕೊಡಿ ಎಂದು ಕುಡಿಯುವ ನೀರು ಸರಬರಾಜು ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಾಮವೆಲ್ ಹೇಳಿದ್ದರಿಂದ ಗ್ರಾಮಸ್ಥರು ವೃದ್ಧ ದಂಪತಿಗಳಿಗೆ ಜಮೀನು ನೀಡುವಂತೆ ಕೋರಿದ್ದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ ಮೋದಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲಿದೆ: ಅಣ್ಣಾಮಲೈ
ಈ ವೇಳೆ ಚಿಟ್ಟನಹಳ್ಳಿ ಗ್ರಾಮದ ಸರ್ವೆ ನಂಬರ್ 207/5 ರಲ್ಲಿ ಕೇವಲ 11ಕುಂಟೆ ಜಮೀನು ಹೊಂದಿದ್ದ ಚಿಕ್ಕದೇವಮ್ಮ ಕೃಷ್ಣೇಗೌಡ ದಂಪತಿಗಳು ಗ್ರಾಮದ ಜನರಿಗೆ ಕುಡಿಯುವ ನೀರು ದೊರೆಯಲಿ ಎಂಬ ಮಹತ್ವಾಕಾಂಕ್ಷೆಯಿಂದ ತಮ್ಮ ಜಮೀನಿನಲ್ಲಿದ್ದ ಬೇವು, ತೆಂಗು ಮತ್ತಿತರ ಮರಗಳನ್ನು ಕಡಿದು ಟ್ಯಾಂಕ್ ನಿರ್ಮಿಸಲು ಬೆಲೆಬಾಳುವ 1 ಕುಂಟೆ ಜಮೀನನ್ನು ರಾಜ್ಯಪಾಲರ ಹೆಸರಿಗೆ ದಾನವಾಗಿ ಬರೆದುಕೊಟ್ಟಿದ್ದಾರೆ.
ಬಳಿಕ ಗುತ್ತಿಗೆದಾರರು ಟ್ಯಾಂಕ್ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿ ಪಾಯ ಮುಚ್ಚುವ ಹೊತ್ತಿಗೆ ಗ್ರಾಮದ ಪಾಪಣ್ಣ ಎಂಬ ವ್ಯಕ್ತಿ ಖ್ಯಾತೆ ತೆಗೆದು ಟ್ಯಾಂಕ್ ನಿರ್ಮಾಣಕ್ಕೆ ಅಡ್ಡಿ ಪಡಿಸಿದ್ದು, ಬೇರೆ ಸ್ಥಳದಲ್ಲಿ ಟ್ಯಾಂಕ್ ನಿರ್ಮಿಸುವಂತೆ ಅಭಿಯಂತರರ ಮೇರೆ ಪ್ರಭಾವ ಬೀರಿದ ಕಾರಣ ಅಭಿಯಂತರರು ಸ್ಥಳ ಬದಲಾವಣೆಗೆ ಮುಂದಾಗಿದ್ದರಿಂದ ಗ್ರಾಮಸ್ಥರು ಕುಪಿತರಾಗಿದ್ದಾರೆ.
ಇಂಜಿನಿಯರ್ ಸಾಮವೆಲ್ ಸ್ಥಳ ಪರಿಶೀಲನೆ ನಡೆಸಿ ವೃದ್ಧ ದಂಪತಿಗಳಿಂದ ಜಮೀನು ದಾನ ಪಡೆದು ಭೂಮಿ ಪೂಜೆ ನಡೆಸಿ ಕಾಮಗಾರಿಯೂ ಆರಂಭವಾದ ಬಳಿಕ ಇಲ್ಲ ಸಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ.
ನಿಗದಿತ ಸ್ಥಳದಲ್ಲೆ ಟ್ಯಾಂಕ್ ನಿರ್ಮಾಣ ಮಾಡಬೇಕು. ಟ್ಯಾಂಕ್ ಬಳಿ ಹೋಗಲು ರಸ್ತೆ ಮತ್ತು ಪೈಪ್ಲೈನ್ ಅಳವಡಿಸಲು ಇಲ್ಲಿ ಯಾವುದೇ ತೊಂದರೆ ಇಲ್ಲ. ಕೇವಲ ರಾಜಕೀಯ ಕಾರಣಗಳಿಂದ ಈ ರೀತಿ ವರ್ತಿಸುವುದು ಸರಿಯಲ್ಲ. ಇದರಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಮೀನು ದಾನ ನೀಡಿರುವ ವೃದ್ಧ ದಂಪತಿಗಳ ಮನಸ್ಸು ನೋಯಿಸಬಾರದು ನಿಗದಿತ ಸ್ಥಳದಲ್ಲೆ ಟ್ಯಾಂಕ್ ನಿರ್ಮಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್, ಮುಖಂಡರಾದ ಜಿ.ಬೆಟ್ಟೇಗೌಡ, ವಾಲೆಕಾರ್ ಸೋಮೇಗೌಡ, ಸಿ.ಎಸ್.ಶಿವಣ್ಣ, ಲಕ್ಷ್ಮಿ ನಿಂಗರಾಜು, ಶ್ಯಾದನಹಳ್ಳಿ ಚಲುವರಾಜು, ವೈ.ಪಿ.ಮಂಜುನಾಥ್, ರಘು ಇತರರು ಇದ್ದರು.
ಇದನ್ನೂ ಓದಿ : ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ