ಗಾಳಿ-ಮಳೆ: ಧರೆಗುರುಳಿದ ಮರ
Team Udayavani, Jul 7, 2019, 12:42 PM IST
ಮೂಡಿಗೆರೆ: ತಾಲೂಕಿನ ಜಾವಳಿಯಲ್ಲಿ ಭಾರೀ ಗಾಳಿ-ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಗಾತ್ರದ ಮರ.
ಮೂಡಿಗೆರೆ: ತಾಲೂಕಿನ ಕೊಟ್ಟಿಗೆ ಹಾರದ ಬಳಿಯ ಜಾವಳಿ ಎಂಬಲ್ಲಿ ಭಾರೀ ಗಾಳಿ, ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆ ಬದಿಯಲ್ಲಿದ್ದ ತೀರಾ ಹಳೆಯದಾದ ಬೃಹತ್ ಮರವೊಂದು ಶನಿವಾರ ಮಧ್ಯಾಹ್ನ ಕೊಟ್ಟಿಗೆಹಾರ ಕಳಸ ಮಾರ್ಗದ ಜಾವಳಿಯ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಎರಡೂ ಕಡೆಗೂ ವಾಹನ ಸಂಚಾರ ಸ್ಥಗಿತವಾಗಿದೆ. ರಸ್ತೆಯ ಎರಡೂ ಕಡೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಕಳಸಾ ಹಾಗೂ ಹೊರನಾಡಿಗೆ ಹೋಗುವ ಯಾತ್ರಾರ್ಥಿಗಳು, ಕಳಸದಿಂದ ಕೊಟ್ಟಿಗೆಹಾರಕ್ಕೆ ಬರುವ ಪ್ರಯಾಣಿಕರು ಮಾರ್ಗ ಬದಲಿಸಿ ಬಾಳೂರು ನಿಡುವಾಳೆ ಮಾಗುಂಡಿ, ಬಾಳೆಹೊಳೆ ಮುಖಾಂತರ ಸುತ್ತಿಬಳಸಿ ಹೋಗುವಂತಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮ ಪಂಚಾಯ್ತಿ ಸದಸ್ಯರು, ಸ್ಥಳೀಯ ಆಟೋ ಚಾಲಕರು ಮತ್ತು ಸಾರ್ವಜನಿಕರ ಸಹಾಯದಿಂದ ಸುರಿಯುತ್ತಿರುವ ಮಳೆಯ ನಡುವೆಯೂ ಮರ ತೆರೆವುಗೊಳಿಸುವ ಕಾರ್ಯ ನಡೆಸಿದರು. ನಂತರ ಸಂಜೆ 7 ಗಂಟೆಯ ಹೊತ್ತಿಗೆ ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.