ನದಿ ತೀರದಿಂದ ಕದ್ದ ಮರಳು ಗುಪ್ತ ಸ್ಥಳದಲ್ಲಿ ಸಂಗ್ರಹ
Team Udayavani, May 10, 2019, 4:58 PM IST
ಕೆ.ಆರ್.ನಗರ: ಸರ್ಕಾರದ ಕಟ್ಟಿನಿಟ್ಟಿನ ಕ್ರಮ, ಅಧಿಕಾರಿ ವರ್ಗದವರ ಹದ್ದಿನ ಕಣ್ಣಿನ ನಡುವೆಯೂ ತಾಲೂಕು ವ್ಯಾಪ್ತಿಯ ಕಾವೇರಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷೇತ್ರದ ಕಾವೇರಿ ನದಿ ತೀರದ ವ್ಯಾಪ್ತಿಯ ಹಳೇ ಎಡತೊರೆ, ಹಂಪಾಪುರ, ಚಂದಗಾಲು, ತಿಪ್ಪೂರ, ಡೆಗ್ಗನಹಳ್ಳಿ, ಕನುಗನಹಳ್ಳಿ, ಕಪ್ಪಡಿ ಕ್ಷೇತ್ರ, ಮಿರ್ಲೆ, ಗಂಧನಹಳ್ಳಿ, ಮಂಚನಹಳ್ಳಿ, ಗಳಿಗೆಕೆರೆ, ಚುಂಚನಕಟ್ಟೆ, ಹೊಸೂರು, ಬಳ್ಳೂರು, ಮೂಲೆಪೆಟ್ಲು, ಸಾತಿಗ್ರಾಮ, ಹೊಸೂರು ಕಲ್ಲಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಎತ್ತಿನ ಗಾಡಿಗಳು, ಟ್ರ್ಯಾಕ್ಟರ್ಗಳು ಮತ್ತು ಟಿಪ್ಪರ್ಗಳಲ್ಲಿ ಮರಳನ್ನು ಸಾಗಣೆ ಮಾಡುತ್ತಾ ಹೊಲ, ಗದ್ದೆ, ಮನೆಗಳ ಬಳಿ, ಗುಪ್ತ ಸ್ಥಳಗಳಲ್ಲಿ ಶೇಖರಣೆ ಮಾಡಲಾಗುತ್ತಿದೆ.
ಎತ್ತಿನ ಗಾಡಿ ಬಳಕೆ: ಮನೆ ನಿರ್ಮಾಣ ಮಾಡಲು ಸ್ವಂತ ಕೆಲಸಕ್ಕೆ ಎಂದು ಎತ್ತಿನ ಗಾಡಿಗಳಲ್ಲಿ ಮರಳು ಸಾಗಿಸುವವರು ಒಂದೆಡೆಯಾದರೆ, ಇದೇ ನೆಪದಲ್ಲಿ ಪ್ರತಿದಿನ ಮರಳು ತುಂಬಿ ಒಂದೆಡೆ ಶೇಖರಣೆ ಮಾಡಿಕೊಳ್ಳಲಾಗುತ್ತಿದೆ. ರಾತ್ರಿ ಆಗುತ್ತಿದ್ದಂತೆ ಲಾರಿ ಮತ್ತು ಟಿಪ್ಪರ್ಗಳಲ್ಲಿ ಪಟ್ಟಣ ಹಾಗೂ ವಿವಿಧ ಭಾಗಗಳಿಗೆ ಮರಳು ಸಾಗಣೆ ಮಾಡುವುದು ಸಾಮಾನ್ಯವಾಗಿದೆ.
ವರ್ಷಪೂರ್ತಿ ಆಯ್ದ ಭಾಗಗಳಲ್ಲಿ ನಡೆಯುವ ಈ ಮರಳು ದಂಧೆ ಬೇಸಿಗೆ ಸಂದರ್ಭ ಕಾವೇರಿ ನದಿಯಲ್ಲಿ ನೀರು ಬತ್ತಿ ಹೋಗುವುದರಿಂದ ಹೆಚ್ಚಾಗಿ ನಡೆಯು ತ್ತದೆ. ಎತ್ತಿನ ಗಾಡಿಯವರು ಸಣ್ಣ ಪುಟ್ಟ ಮನೆ ಕೆಲಸ ಗಳಿಗೆ ಬಳಸಿಕೊಂಡರೆ, ಹೆಚ್ಚಿನವರು ಟ್ರ್ಯಾಕ್ಟರ್ ಮತ್ತು ಟಿಪ್ಪರ್ಗಳಲ್ಲಿ ಮರಳು ಶೇಖರಣೆ ಮಾಡಿ ಸಾಗಣೆ ಮಾಡುತ್ತಿದ್ದಾರೆ.
ಇಲಾಖೆಗಳ ಮಧ್ಯೆ ಸಮನ್ವಯವಿಲ್ಲ: ಮರಳು ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ, ಅರಣ್ಯ ಇಲಾಖೆಗಳ ಅಧಿಕಾರಿಗಳು ತಮಗೂ ಮರಳು ಸಾಗಣೆಗೂ ಸಂಬಂಧವಿಲ್ಲವೆಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಈ ಇಲಾಖೆಗಳ ನಡುವೆ ಸಮನ್ವಯ ತೆಯ ಕೊರತೆಯೇ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.
ಸಿಬ್ಬಂದಿ ಕೊರತೆ: ಈ ನಡುವೆಯೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಸ್ವಲ್ಪ ತಲೆ ನೋವಾ ಗಿದ್ದಾರೆ. ಇನ್ನೂ ಪೊಲೀಸ್ ಇಲಾಖೆಯಲ್ಲಿ ಅಪರಾಧ ವಿಭಾಗದ ಉಪನಿರೀಕ್ಷಕ, 15 ಪೊಲೀಸ್ ಸಿಬ್ಬಂದಿ ಹುದ್ದೆಗಳ ಕೊರತೆಯ ಕಾರಣ ಸಮರ್ಪಕ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ಅಸಮಾ ಧಾನ ಇಲಾಖೆಯೊಳಗೆ ಕೇಳಿ ಬರುತ್ತಿದೆ.
ನಿರಂತರ ದಾಳಿ: ವೃತ್ತ ನಿರೀಕ್ಷಕ ಪಿ.ಕೆ.ರಾಜು, ಉಪ ನಿರೀಕ್ಷಕ ಸುಬ್ರಹ್ಮಣ್ಯ ನೇತೃತ್ವದಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗು ತ್ತಿದೆ. ಪರಿಣಾಮ 15 ದಿನಗಳಿಂದ ಮರಳು ಸಾಗಿಸು ತ್ತಿದ್ದ 6 ಎತ್ತಿನ ಗಾಡಿಗಳು, ಒಂದು ಟ್ರ್ಯಾಕ್ಟರ್, ದೊಡ್ಡೇ ಕೊಪ್ಪಲು ಗ್ರಾಮದ ಬಳಿ ಸಂಗ್ರಸಿದ್ದ 3 ಟಿಪ್ಪರ್, ಚಂದಗಾಲು ಬಳಿ 8 ಟಿಪ್ಪರ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಸ್ತೆಗಳೂ ಹಾಳು: ಮರಳು ಸಾಗಣೆಯಿಂದ ದಂಧೆ ಕೋರರು ಲಕ್ಷಾಂತರ ರೂ. ಆದಾಯ ಮಾಡಿಕೊಳ್ಳು ತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡು ತ್ತಿದ್ದಾರೆ. ಮರಳು ಸಾಗಣೆಯಿಂದ ತಾಲೂಕಿನ ರಸ್ತೆಗಳು ಹಾಳಾಗಲು ಕಾರಣವಾಗುತ್ತಿದೆ. ಇನ್ನು ಯಾರ್ಡ್ನಲ್ಲಿ ಮರಳು ಇಲ್ಲವಾಗಿ ಬಡವರು, ಮಧ್ಯಮ ವರ್ಗದವರು ಮರಳು ಸಿಗದೆ ಮನೆ, ಕಟ್ಟಡ ನಿರ್ಮಾಣಕ್ಕೆ ಎಂ.ಸ್ಯಾಂಡ್ ಮೊರೆ ಹೋಗುತ್ತಿದ್ದಾರೆ.
ಸರ್ಕಾರದಿಂದಲೇ ವಿತರಿಸಿ: ಅಕ್ರಮ ಮರಳುಗಾರಿಕೆ ಯಿಂದ ಮರಳು ಸ್ಥಳೀಯರಿಗಿಲ್ಲದಿದ್ದರೂ ಹಣ ಉಳ್ಳವರ ಮನೆ ಬಾಗಿಲಿಗೆ ತಲುಪುವುದು ಮಾಮೂಲಿ ಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮರಳು ದಂಧೆಗೆ ಕಡಿವಾಣ ಹಾಕುವುದರ ಜೊತೆಗೆ ಸರ್ಕಾರದಿಂದಲೇ ಮರಳು ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…