ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
Team Udayavani, May 10, 2019, 4:53 PM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಕೃತ್ಯ ಸಂಭವಿಸಿದೆ.
ನಗರದ ಹೊರ ವಲಯದಲ್ಲಿರುವ ಲಿಂಗಾಂಬುದಿ ಪಾಳ್ಯದ ರಿಂಗ್ ರಸ್ತೆ ಬಳಿಯ ಖಾಸಗಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಪ್ರಿಯಕರನ ಎದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು, ಇಬ್ಬರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಎಚ್.ಡಿ. ಕೋಟೆ ಮೂಲದ 28 ವರ್ಷದ ಯುವಕ ಮತ್ತು ಮೈಸೂರು ನಗರದ 23 ವರ್ಷದ ಯುವತಿಯ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪು, ಪ್ರಿಯಕರನ ಎದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ: ಮೈಸೂರಿನ ಖಾಸಗಿ ಹೋಟೆ ಲೊಂದರಲ್ಲಿ ನೌಕರರಾಗಿರುವ ಇವರಿಬ್ಬರು ಕಳೆದ ಮೂರ್ನಾಲ್ಕು ತಿಂಗಳಿನಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮೈಸೂರು ನಗರದ ಬಡಾವಣೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದ ಇವರಿಬ್ಬರು, ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಸುತ್ತಾಡಲು ತೆರಳಿದ್ದಾರೆ. ಲಿಂಗಾಂಬುದಿ ಪಾಳ್ಯದ ಬಳಿಯ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಖಾಸಗಿ ಬಡಾವಣೆಯ ಬಳಿ ಬೈಕ್ ನಿಲ್ಲಿಸಿ ಏಕಾಂತವಾಗಿ ಕುಳಿತು ಕೊಂಡಿದ್ದಾರೆ. ರಾತ್ರಿ 10 ಗಂಟೆ ಸಮಯದಲ್ಲಿ ಅದೇ ಮಾರ್ಗದಲ್ಲಿ ಕಾರು ಮತ್ತು ಬೈಕ್ನಲ್ಲಿ ತೆರಳುತ್ತಿದ್ದ ಮೂರ್ನಾಲ್ಕು ಮಂದಿ ಯುವಕರು, ಬೈಕ್ ನಿಂತಿರುವುದನ್ನು ಕಂಡು ಅವರ ಬಳಿ ಬಂದಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದ ಕೆಲ ವರು ಯುವತಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ.
ಗಂಭೀರ ಗಾಯ: ಈ ಸಂದರ್ಭ ಯುವತಿಯ ಪ್ರಿಯಕರ ವಿರೋಧವ್ಯಕ್ತಪಡಿಸಿದ್ದಾನೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಆತನ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿ, ಹಣೆಯ ಭಾಗಕ್ಕೆ ಕಲ್ಲಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ನಂತರ ಗುಂಪಿನಲ್ಲಿದ್ದ ಇಬ್ಬರು ಯುವಕರು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ವಾಹನಗಳು ಬರುವುದನ್ನು ಕಂಡು ಕಾರು ಮತ್ತು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ತೀವ್ರ ನಿತ್ರಾಣಗೊಂಡಿದ್ದ ಯುವತಿ, ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ರಿಂಗ್ ರಸ್ತೆಯ ವರೆಗೂ ಓಡಿ ಬಂದು ದಾರಿಹೋಕರ ನೆರವಿನಿಂದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಯಪುರ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಕರ ಹಾಗೂ ಯುವತಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸ್ನೇಹಿತರೊಬ್ಬರಿಗೆ ಹಣ ನೀಡಲು ಲಿಂಗಾಂಬುದಿ ಪಾಳ್ಯದ ಕಡೆ ತೆರಳಿದ್ದು, ಮಾರ್ಗ ಮಧ್ಯೆ ಮೂತ್ರ ವಿಸರ್ಜನೆಗೆ ಬೈಕ್ ನಿಲ್ಲಿಸಿದಾಗ, ಕಾರು ಮತ್ತು ಬೈಕ್ನಲ್ಲಿ ಬಂದು ದುಷ್ಕರ್ಮಿಗಳ ಗುಂಪು ನಮ್ಮ ಮೇಲೆ ಹಲ್ಲೆ ನಡೆಸಿ, ಯುವತಿಯ ಮೇಲೆ ಅತ್ಯಾಚಾರವೆಸಗಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದಕ್ಷಿಣ ವಲಯ ಐಜಿಪಿ ಉಮೇಶ್ಕುಮಾರ್, ಎಸ್ಪಿ ಅಮಿತ್ ಸಿಂಗ್, ಹೆಚ್ಚುವರಿ ಎಸ್ಪಿ ಪಿ.ವಿ. ಸ್ನೇಹಾ, ಮೈಸೂರು ಗ್ರಾಮಾಂತರ ಉಪ ವಿಭಾಗದ ಎಎಸ್ಪಿ ಕ್ಷಮಾ ಮಿಶ್ರಾ, ಸಿಪಿಐ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.