ಚಾಮುಂಡಿ ಅನುಗ್ರಹವಿದೆ, ಎಚ್ಡಿಕೆಯೇ ಸಿಎಂ
Team Udayavani, Jul 13, 2019, 3:00 AM IST
ಮೈಸೂರು: ದೇವರ ಆಶೀರ್ವಾದ ಇರುವವರಗೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಮೇಲಿದ್ದು, ಸದ್ಯಕ್ಕೆ ಸರ್ಕಾರಕ್ಕೆ ಏನು ತೊಂದರೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಎರಡನೇ ಆಷಾಢ ಶುಕ್ರವಾರ ಮುಂಜಾನೆ ಸಚಿವ ಎಚ್.ಡಿ. ರೇವಣ್ಣ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಹೆಸರಲ್ಲಿ ಚಾಮುಂಡೇಶ್ವರಿಗೆ ಸಂಕಲ್ಪ ಮಾಡಿದ್ದೇವೆ.
ದೇವರ ಆಶೀರ್ವಾದ ಇರುವ ವರಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಮೇಲಿದೆ. ಸದ್ಯಕ್ಕೆ ಸರ್ಕಾರಕ್ಕೆ ಏನು ತೊಂದರೆ ಇಲ್ಲ. ಸರ್ಕಾರ ಸುಗಮವಾಗಿ ಸಾಗಲಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಬಿಜೆಪಿ ನಾಯಕರನ್ನ ಭೇಟಿ ಮಾಡಿರೋ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳುವ ಬೆಳವಣಿಗೆ ಸದ್ಯಕ್ಕಿಲ್ಲ. ಇಂದಿನ ಅಧಿವೇಶನ ಕೂಡ ಸುಸೂತ್ರವಾಗಿ ನಡೆಯುತ್ತದೆ. ಇನ್ಮುಂದೆ ಎಲ್ಲವು ದೇವರ ಮಯಾ ಎಂದು ಹೇಳಿದರು. ಚಾಮುಂಡಿಯ ಸನ್ನಿದಿಯಲ್ಲಿ 20 ನಿಮಿಷಗಳ ಕಾಲ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.