ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹ
Team Udayavani, Jun 30, 2018, 3:45 PM IST
ಚಾಮರಾಜನಗರ: ನಗರದಲ್ಲಿ ಶೀಘ್ರ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು. ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ
ಶೋಭಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ನಾರಾಯಣಸ್ವಾಮಿ, ಮಹೇಶ್, ಚಿನ್ನಸ್ವಾಮಿ, ಇಮ್ರಾನ್ ಮತ್ತಿತರರು ಇದುವರೆಗೂ ನಗರಸಭೆ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಯಾವುದೇ ಕ್ರಮ
ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ನಗರಸಭೆ ನಿರ್ವಹಣೆ: ಇದಕ್ಕೆ ಉತ್ತರಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತ್ಯಮೂರ್ತಿ, ನಗರಸಭೆ ವ್ಯಾಪ್ತಿಯ ಮೂರು ಕಡೆ ಸಾರ್ವಜನಿಕ ಶೌಚಾಲಯಕ್ಕಾಗಿ ಸ್ಥಳ ಗುರುತಿಸಿ, 2 ಬಾರಿ ಟೆಂಡರ್ ಕರೆಯಲಾಗಿತ್ತು. ಇಬ್ಬರು ಟೆಂಡರ್ದಾರರು ಮುಂದೆ ಬಂದಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಇರುವ ಮೂರು ಶೌಚಾಲಯಗಳ ಟೆಂಡರ್ ಅವಧಿ ಮುಗಿದಿದ್ದು, ಟೆಂಡರ್ದಾರರು ಬರುವವರೆಗೆ ನಗರಸಭೆಯೇ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಪೌರಾಯುಕ್ತೆ ಫೌಜಿಯಾ ತರನ್ನುಮ್ ತಿಳಿಸಿದರು.
ಸೌಲಭ್ಯ ಕಲ್ಪಿಸಿ: ನಗರದ ಕೆಎಸ್ಆರ್ಟಿಸಿ ಬಳಿ ನಿರ್ಮಿಸಿರುವ 15 ಮಳಿಗೆಗಳಿಗೆ ಟೆಂಡರ್ ಕರೆಯಲಾಗಿದೆ. ಆದರೆ, ಆ ಮಳಿಗೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ. ಮೊದಲು ನೀರು, ವಿದ್ಯುತ್ ಸೌಲಭ್ಯ ಕಲ್ಸಿಸಿದ ಬಳಿಕ ಟೆಂಡರ್ ಕರೆಯಿರಿ
ಎಂದು ಸದಸ್ಯರು ಒತ್ತಾಯಿಸಿದರು. ಬಳಿಕ ನಗರಸಭೆ ಎಸ್ಎಫ್ಸಿ ಮುಕ್ತನಿಧಿ ಅನುದಾನದಲ್ಲಿ ಇರುವ 2.40 ಕೋಟಿ ರೂ.ಗಳನ್ನು 31 ವಾರ್ಡ್ಗಳಿಗೆ ತಲಾ 8 ಲಕ್ಷ ರೂ.ಗಳಂತೆ ಆಯಾ ವಾರ್ಡಿನ ಸದಸ್ಯರ ಸೂಚನೆ ಪಡೆದು, ಕ್ರಿಯಾ ಯೋಜನೆ ತಯಾರಿಸಲು ಸಭೆ ಒಪ್ಪಿಗೆ ನೀಡಿತು.
ಬಡವರನ್ನೂ ನೇಮಿಸಿಕೊಳ್ಳಿ: ಪೌರಕಾರ್ಮಿಕರನ್ನು ಬಿಟ್ಟು, ನೀರು ಸರಬರಾಜು ಸೇರಿದಂತೆ ಇತರ ಕೆಲಸಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳುವಾಗ ಒಂದೇ ವರ್ಗಕ್ಕೆ ಸೀಮಿತವಾಗದೆ, ಎಲ್ಲಾ ವರ್ಗದ ಬಡವರನ್ನೂ ನೇಮಿಸಿಕೊಳ್ಳಬೇಕು. ಜೊತೆಗೆ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದು ನೇಮಿಸಿಕೊಳ್ಳುವಂತೆ ಸದಸ್ಯರು ಮನವಿ ಮಾಡಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.
ಕರ ವಸೂಲಿ: ನಗರಸಭೆಗೆ ಒಳಪಡುವ ಮಳಿಗೆಗಳನ್ನು ಮರು ಹರಾಜು ನಡೆಸಿ, ನಿಜವಾದ ಹರಾಜುದಾರರನಿಗೆ ಬಾಡಿಗೆಗೆ ನೀಡುವಂತೆ ಸಭೆ ಸೂಚಿಸಿತು. ನೀರಿನ ಕರ ಹಾಗೂ ಇತರೆ ಕರ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರಿಗೆ ಕಳೆದ ಒಂಭತ್ತು ತಿಂಗಳಿಂದ ಸಂಬಳ ನೀಡಿಲ್ಲ. ಈ ಬಗ್ಗೆ ತೀವ್ರ ಗಮನಹರಿಸಬೇಕು ಎಂದು ಆಗ್ರಹಿಸಿದರು.
ತಾತ್ಕಾಲಿಕ ಸ್ಥಳಾಂತರ: ಬೀದಿ ಬದಿ ವ್ಯಾಪಾರಿಗಳಿಗೆ ಹಳೆ ಖಾಸಗಿ ಬಸ್ ನಿಲ್ದಾಣ ಹಾಗೂ ಗೂಡ್ಸ್ ಆಟೋ ನಿಲ್ದಾಣವನ್ನು ಗ್ರಾಮಾಂತರ ಪೊಲೀಸ್ ಠಾಣೆ ರಸ್ತೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.